ಸಿಎಂ ಬೊಮ್ಮಾಯಿ ಬದಲಾವಣೆ ಸುದ್ದಿಗೆ ಮತ್ತೆ ರೆಕ್ಕೆಪುಕ್ಕ!
ಕೇಂದ್ರದ ನಾಯಕರು ಬಂದು ಹೋದರೆ ಸಾಕು ಅಥವಾ ಮುಖ್ಯಮಂತ್ರಿ ದೆಹಲಿ ಹೋಗಿ ಬಂದರೆ ಸಾಕು ಏನೇನೋ ರಾಜಕೀಯ ಸುದ್ದಿಗಳು ಹರಿದಾಡಲಾರಂಭಿಸುತ್ತದೆ. ಉದಾಹರಣೆಗೆ, ಸಂಪುಟ ವಿಸ್ತರಣೆಯ ವಿಚಾರ ಮುನ್ನಲೆಗೆ ಬಂದಷ್ಟು ಇನ್ಯಾವ ವಿಚಾರ ಬಂದಿರಲಿಕ್ಕಿಲ್ಲ.
ಆಗಸ್ಟ್ ಮೂರರಂದು ಒಂದು ದಿನದ ಪ್ರವಾಸಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದರು. ಎಲ್ಲರ ಜೊತೆ ಮಾತುಕತೆಗೆ ಮುನ್ನ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕರೆಸಿಕೊಂಡು ಶಾ ಮಾತುಕತೆ ನಡೆಸಿದ್ದರು.
ಆ ಭೇಟಿಯ ವೇಳೆ ಮುಖ್ಯಮಂತ್ರಿಯ ಕಾರ್ಯವೈಖರಿಯ ಬಗ್ಗೆ ಯಡಿಯೂರಪ್ಪನವರು ವಿವರಣೆಯನ್ನು ನೀಡಿದ್ದರು ಎಂದು ಸುದ್ದಿಯಾಗಿತ್ತು. ಬಸವರಾಜ ಬೊಮ್ಮಾಯಿ ಸಿಎಂ ಆಗಲು ಅಂದು ಬಿಎಸ್ವೈ ಹಿಡಿದಿದ್ದ ಹಠವೇ ಕಾರಣವಾಗಿದ್ದರೂ, ಇವರಿಬ್ಬರ ನಡುವೆ ಅಂದಿನ ಮತ್ತು ಇಂದಿನ ಸಂಬಂಧ ಹಳಸಿದೆಯೇ ಎನ್ನುವ ಪ್ರಶ್ನೆ ಬಿಜೆಪಿ ವಲಯದಲ್ಲಿ ಎದುರಾಗಿತ್ತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜೀನಾಮೆಯನ್ನು ವರಿಷ್ಠರು ಪಡೆದುಕೊಳ್ಳಲಿದ್ದಾರೆ ಎಂದು ಕೆಲವು ತಿಂಗಳ ಹಿಂದೆಯೇ ಸುದ್ದಿಯಾಗಿತ್ತು. ಆ ಸುದ್ದಿಗೆ ದೆಹಲಿಯಿಂದ ಬಂದು ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ ನೀಡಬೇಕಾಗಿ ಬಂತು. ಈಗ, ಮತ್ತೆ ಬೊಮ್ಮಾಯಿ ತಲೆದಂಡವಾಗಲಿದೆ, ಅದೂ ಕೂಡಾ ಇನ್ನೊಂದು ವಾರದೊಳಗೆ ಎನ್ನುವ ಸುದ್ದಿ ಹರಿದಾಡಲಾರಂಭಿಸಿದೆ.

ಅಮಿತ್ ಶಾ ಅವರ ಭೇಟಿಯ ನಂತರ ಬದಲಾವಣೆ
ಅಮಿತ್ ಶಾ ಅವರ ಬೆಂಗಳೂರು ಭೇಟಿಯ ನಂತರ, ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎನ್ನುವ ಮಾತು ಬಿಜೆಪಿ ವಲಯದಲ್ಲೂ ಕೇಳಿ ಬರುತ್ತಿದೆ. ಆಗಸ್ಟ್ 15ರ ನಂತರ ಸಿಎಂ ಬೊಮ್ಮಾಯಿ ಕೂಡಾ ಬದಲಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಚುನಾವಣಾ ವರ್ಷದಲ್ಲಿ ಸಿಎಂ ಬದಲಾವಣೆ ಮಾಡುವುದು ಬಿಜೆಪಿಗೇನೂ ಹೊಸದಲ್ಲ. ತ್ರಿಪುರಾ ಮತ್ತು ಗುಜರಾತ್ ನಲ್ಲೂ ಸಿಎಂ ಬದಲಾವಣೆಯನ್ನು ಬಿಜೆಪಿ ಮಾಡಿತ್ತು. ಗುಜರಾತ್ ನಲ್ಲಿ ಇದೇ ವರ್ಷ ಚುನಾವಣೆ ನಡೆಯಲಿದೆ.

ಆಗಸ್ಟ್ 15ರ ಒಳಗೆ ಬದಲಾವಣೆಯಾಗಬಹುದು
ಈಗ ಅದೇ ರೀತಿ ಬಸವರಾಜ ಬೊಮ್ಮಾಯಿಯವರನ್ನು ಬದಲಾವಣೆ ಮಾಡಲಾಗುತ್ತದೆ. ಪಕ್ಷದ ಮಾತೃ ಸಂಘಟನೆ ಆರ್ ಎಸ್ ಎಸ್ ಸೂಚಿಸುವ, ಡೈನಾಮಿಕ್ ವ್ಯಕ್ತಿತ್ವದವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಸುದ್ದಿಯಾಗುತ್ತಿದೆ. "ಈಗಿರುವ ಮುಖ್ಯಮಂತ್ರಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪಕ್ಷ ಏನು ನಿರ್ಧಾರ ತೆಗೆದು ಕೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿರಬೇಕಾಗಿರುತ್ತದೆ. ವಿಧಾನಸಭಾ ಚುನಾವಣೆಗೆ 6-7 ತಿಂಗಳುಗಳು ಇರಬೇಕಾದರೆಯೇ ಮುಖ್ಯಮಂತ್ರಿ ಬದಲಾವಣೆ ಮಾಡಿದ ಉದಾಹರಣೆ ನಮ್ಮಲ್ಲಿದೆ. ಆಗಸ್ಟ್ 15ರ ಒಳಗೆ ಬದಲಾವಣೆಯಾಗಬಹುದು ಎನ್ನುವುದು ನನ್ನ ನಿರೀಕ್ಷೆ"ಎಂದು ಮಾಜಿ ಶಾಸಕ ಬಿ. ಸುರೇಶ್ ಗೌಡ ಹೇಳಿದ್ದಾರೆ.

ಬೊಮ್ಮಾಯಿಯವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ
ಇವೆಲ್ಲದರ ನಡುವೆ ಕರ್ನಾಟಕ ಕಾಂಗ್ರೆಸ್ ಘಟಕ ಟ್ವೀಟ್ ಒಂದನ್ನು ಮಾಡಿ, "ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ!. 40% ಸರ್ಕಾರದಲ್ಲಿ '3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ಬೊಮ್ಮಾಯಿಯವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ"ಎಂದು ಟ್ವೀಟ್ ಮೂಲಕ ಕೆಪಿಸಿಸಿ ಐಟಿ ಸೆಲ್ ಕಾಲೆಳೆದಿದೆ.

ಸುದ್ದಿ ಯಾವುದೂ ಅಧಿಕೃತವಲ್ಲ ಎನ್ನುವುದು ಕೂಡಾ ಅಷ್ಟೇ ಸ್ಪಷ್ಟ
ಅಮಿತ್ ಶಾ ಭೇಟಿಯ ವೇಳೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಾಧನೆಯ ಬಗ್ಗೆಯೂ ಚರ್ಚೆ ನಡೆದಿದೆ. ಅವರ ಕಾಲಾವಧಿಯೂ ಮುಕ್ತಾಯಗೊಳ್ಳುತ್ತಿರುವುದರಿಂದ ಅವರ ಬದಲಾವಣೆ ನಿಶ್ಚಿತ ಎನ್ನುವ ಮಾತೂ ಕೇಳಿ ಬರುತ್ತಿದೆ. ಆ ಹುದ್ದೆಗೆ ಕರಾವಳಿಯ ಇಬ್ಬರು ನಾಯಕರ ಹೆಸರು ಕೇಳಿಬರುತ್ತಿದೆ. ಆದರೆ, ಸಿಎಂ ಅಥವಾ ರಾಜ್ಯಧ್ಯಕ್ಷರ ಬದಲಾವಣೆಯ ಸುದ್ದಿ ಯಾವುದೂ ಅಧಿಕೃತವಲ್ಲ ಎನ್ನುವುದು ಕೂಡಾ ಅಷ್ಟೇ ಸ್ಪಷ್ಟ.












Click it and Unblock the Notifications