ಕಾವೇರಿಯಲ್ಲಿ ಹರಿದು ಹೋದ ಮಾನಕ್ಕೆ ತೇಪೆ ಹಚ್ಚಲು ಮುಂದಾದ ಬಿಜೆಪಿ
ಕಾವೇರಿ ವಿಚಾರದಲ್ಲಿ ಕರೆಯಲಾಗಿದ್ದ ಸರ್ವಪಕ್ಷ ಸಭೆಯನ್ನು ಬಹಿಷ್ಕರಿಸಿ ರಾಜ್ಯಾದ್ಯಂತ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಪ್ರಮುಖ ವಿರೋಧ ಪಕ್ಷ ಬಿಜೆಪಿ, ವಿಶೇಷ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿದೆ.
ಶುಕ್ರವಾರ (ಸೆ23) ನಡೆದ ವಿಶೇಷ ಅಧಿವೇಶನದಲ್ಲಿ ಬಿಜೆಪಿಯ ಜನಪ್ರತಿನಿಧಿಗಳು ಭಾಗವಹಿಸಿ, ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದೆಂದು ಸರಕಾರದ ಬೆನ್ನಿಗೆ ನಿಂತಿದ್ದಾರೆ. (ಕಾವೇರಿ ಐತಿಹಾಸಿಕ ಒಗ್ಗಟ್ಟು ಪರಂಪರೆಯಾಗಲಿ)
ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕ ಜಗದೀಶ್ ಶೆಟ್ಟರ್ ಒಂದಂಶದ ನಿರ್ಣಯವನ್ನು ಮಂಡಿಸಿದರೆ, ಮೇಲ್ಮನೆಯಲ್ಲಿ ಈಶ್ವರಪ್ಪ ನಿರ್ಣಯವನ್ನು ಅನುಮೋದಿಸಿ, ಕಾವೇರಿಯಲ್ಲಿ ಹರಿದು ಹೋದ ಮಾನಕ್ಕೆ ಸ್ವಲ್ಪ ಮಟ್ಟಿನ ತೇಪೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಸದಸ್ಯರು ಆಗಮಿಸುತ್ತಿದ್ದಂತೇ, ಸರ್ವಪಕ್ಷ ಸಭೆಯಲ್ಲಿ ಯಾಕೆ ಭಾಗವಹಿಸಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ಮುಖಂಡರು, ಕಳೆದ ಸರ್ವಪಕ್ಷ ಸಭೆಯಲ್ಲಿ ನಮ್ಮ ಮಾತಿಗೆ ಸರಕಾರ ಬೆಲೆಕೊಡಲಿಲ್ಲ, ಹಾಗಾಗಿ ಭಾಗವಹಿಸಿಲ್ಲ ಎಂದು ಉತ್ತರಿಸಿ ಸದನ ಪ್ರವೇಶಿಸಿದರು.
ಆದರೂ, ಸರ್ವಪಕ್ಷದ ಸಭೆ ಬಹಿಷ್ಕರಿಸಿರುವುದು ಸರಿಯಲ್ಲ, ಸಭೆಗೆ ಹಾಜರಾಗದೇ ಇದ್ದದ್ದು ಪಕ್ಷದ ಇಮೇಜಿಗೆ ಹಾನಿಯಾದಂತೆ ಕಾಣಿಸುತ್ತದೆ ಎನ್ನುವುದು ಬಹುತೇಕ ಬಿಜೆಪಿ ಶಾಸಕರ ಅಭಿಪ್ರಾವಾಗಿತ್ತು.
ಸಾರ್ವಜನಿಕರ ಆಕ್ರೋಶ
ಸಾರ್ವಜನಿಕರ ಆಕ್ರೋಶದ ಬಿಸಿ ಅರಿತಂತಿದ್ದ ಬಿಜೆಪಿಯ ಹಿರಿಯ ಮುಖಂಡರಾದ ಶೆಟ್ಟರ್ ಮತ್ತು ಈಶ್ವರಪ್ಪ, ಅನುಮೋದನೆ ಮಂಡನೆ ಮಾಡುವ ಮೂಲಕ ಹೋದ ಮಾನವನ್ನು ಉಳಿಸಿಕೊಳ್ಳುವುದಕ್ಕೆ ಮುಂದಾದಂತಿತ್ತು.
ಪದೇ ಪದೇ ರಾಜ್ಯಕ್ಕೆ ಅನ್ಯಾಯ
ಸದನದಲ್ಲಿ ನಿರ್ಣಯ ಮಂಡಿಸಿ ಮಾತನಾಡುತ್ತಿದ್ದ ಜಗದೀಶ್ ಶೆಟ್ಟರ್, ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಮುಖ್ಯ. ಕಾವೇರಿ ವಿಚಾರದಲ್ಲಿ ತಮಿಳುನಾಡು ಸದಾ ಕ್ಯಾತೆ ತೆಗೆಯುತ್ತಲೇ ಇದೆ. ಈ ವಿಚಾರದಲ್ಲಿ ಪದೇ ಪದೇ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ತಮಿಳುನಾಡು ಬೆಳೆಗೆ ನೀರು ಬಿಡಿ ಎಂದು ವಾದಿಸುವುದು ಸರಿಯಲ್ಲ ಎಂದು ಶೆಟ್ಟರ್ ವಾದಿಸಿದರು.
ಕಾವೇರಿ ಕಣಿವೆಯಲ್ಲಿ ನೀರಿಲ್ಲ
ನೀರಿಲ್ಲದೇ ಕಾವೇರಿ ಕಣಿವೆಯ ಭಾಗವು ಕೆರೆಯಂತಾಗಿದೆ. ಈ ವಿಚಾರದಲ್ಲಿ ಸರಕಾರ ತೆಗೆದುಕೊಳ್ಳುವ ಯಾವ ನಿರ್ಧಾರಕ್ಕೂ ನಮ್ಮ ಪಕ್ಷ ಬದ್ದವಾಗಿರುತ್ತದೆ ಎಂದು ಮೇಲ್ಮನೆಯಲ್ಲಿ ನಿರ್ಣಯ ಅನುಮೋದಿಸಿ ಈಶ್ವರಪ್ಪ ಹೇಳಿದರು.
ಮೂರಂಸದ ಸೂತ್ರ
ರಾಜ್ಯದ ಜಲಾಶಯಗಳ ಬಗ್ಗೆ ಹೆಚ್ಚಿನ ಅನುಭವ ಹೊಂದಿರುವ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡುತ್ತಾ, ನಮ್ಮ ರಾಜ್ಯದ ವಿರುದ್ದ ಸುಪ್ರೀಂಕೋರ್ಟ್ ತೀರ್ಪು ಬರದಿರಲು ಕೆಲವೊಂದು ಕ್ರಮವನ್ನು ತೆಗೆದುಕೊಳ್ಳಬಹುದಿತ್ತು. ರಾಜ್ಯದ ಬರಗಾಲ, ಅಂತರ್ಜಾಲ ಮಟ್ಟದ ಕುಸಿತ, ಬೆಳೆಗಳಿಗೆ ಸಂಕಷ್ಟ ಹೀಗೆ ಮೂರಂಶದ ವಾದ ಮಂಡಿಸಬೇಕೆಂದು ಬೊಮ್ಮಾಯಿ ಸರಕಾರಕ್ಕೆ ಸಲಹೆ ನೀಡಿದರು.
ಶೆಟ್ಟರ್ ವಾಗ್ದಾಳಿ
ಈ ಹಿಂದೆ ಜಯಲಲಿತಾ ಪರವಾಗಿ ವಾದ ಮಂಡಿಸಿದವರು ಈಗ ರಾಜ್ಯದ ಪರವಾಗಿ ತೀರ್ಪು ನೀಡುವ ಬೆಂಚಿನಲ್ಲಿರುವುದು ನಮ್ಮ ದುರ್ದೈವ ಎಂದು ಪರೋಕ್ಷವಾಗಿ ನ್ಯಾಯಾಧೀಶ ಉದಯ್ ಲಲಿತ್ ವಿರುದ್ದ ಶೆಟ್ಟರ್ ವಾಗ್ದಾಳಿ ನಡೆಸಿದರು.