ಕರ್ನಾಟಕದಲ್ಲಿ ಕೊರೊನಾ ಏರಿಕೆ; ಮತ್ತೆ ರಾತ್ರಿ, ವೀಕೆಂಡ್ ಕರ್ಫ್ಯೂ ಜಾರಿಗೆ ಸಲಹೆ
ಬೆಂಗಳೂರು, ಆಗಸ್ಟ್ 03: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ, ಕೊರೊನಾ ನಿಯಂತ್ರಣಕ್ಕೆ ಕೆಲವೊಂದು ಸಲಹೆಗಳನ್ನು ರಾಜ್ಯ ಸರ್ಕಾರದ ಮುಂದಿಟ್ಟಿದೆ.
ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿಯೂ ಕೆಲವು ದಿನಗಳಿಂದ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಹೀಗಾಗಿ ಕೆಲವು ಕೊರೊನಾ ನಿಯಮಗಳನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರುವ ಕುರಿತು ಚರ್ಚೆಗಳು ನಡೆಯುತ್ತಿವೆ.
ನೆರೆ ರಾಜ್ಯಗಳ ಆತಂಕದ ನಡುವೆಯೂ ಕರ್ನಾಟಕದಲ್ಲಿ ಕೊರೊನಾ ಇಳಿಮುಖ
ಸದ್ಯಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೈಮೀರಿ ಹೋಗುವ ಮುನ್ನ ಕೊರೊನಾ ನಿಯಂತ್ರಣಕ್ಕೆ ಮತ್ತೆ ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯ ಕರ್ಫ್ಯೂ ಹೇರುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಮುಂದೆ ಓದಿ...
ಮತ್ತೆ ರಾತ್ರಿ ಕರ್ಫ್ಯೂ ಜಾರಿಗೆ ತರುವಂತೆ ಸಲಹೆ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಈಗಲೇ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವುದು ಸೂಕ್ತ. ಹೀಗಾಗಿ ಎಲ್ಲೆಡೆ ರಾತ್ರಿ ಕರ್ಫ್ಯೂ ಮತ್ತೆ ಜಾರಿಗೊಳಿಸಬೇಕು. ಪ್ರತಿ ದಿನ ಸಂಜೆ ಏಳರಿಂದ ಬೆಳಿಗ್ಗೆ 6 ಗಂಟೆವರೆಗೆ ರಾತ್ರಿ ಕರ್ಫ್ಯೂ ಹೇರಿದರೆ ಸೂಕ್ತ ಎಂದು ಸಲಹೆ ನೀಡಲಾಗಿದೆ.
"ವಾರಾಂತ್ಯ ಕರ್ಫ್ಯೂ ಹೇರಿದರೂ ಉತ್ತಮ"
ರಾತ್ರಿ ಕರ್ಫ್ಯೂ ಜೊತೆಗೆ ಕೊರೊನಾ ನಿಯಂತ್ರಣಕ್ಕೆ ಸದ್ಯ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸುವುದು ಕೂಡ ಸೂಕ್ತ ಎಂದು ತಂಡ ಸಲಹೆ ನೀಡಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಳಿತವಾಗುತ್ತಿರುವುದರಿಂದ ಕಂಪನಿಗಳಲ್ಲಿ, ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಸಂಖ್ಯೆಯನ್ನು ತಗ್ಗಿಸಬೇಕಿದೆ. ಕಚೇರಿಗಳಲ್ಲಿ ಶೇ. 50ರಷ್ಟು ಮಂದಿಗೆ ಮಾತ್ರ ಕೆಲಸ ನಿರ್ವಹಿಸಲು ಅವಕಾಶ ನೀಡಬೇಕಿದೆ ಎಂದು ಹೇಳಿದೆ.
ಕರ್ನಾಟಕ ಸೇರಿದಂತೆ ಹತ್ತು ರಾಜ್ಯಗಳಲ್ಲಿ ಕೊರೊನಾ ಹೆಚ್ಚಳ
ಕೊರೊನಾ ಮೂರನೇ ಅಲೆ ಆತಂಕದ ಬೆನ್ನಲ್ಲೇ ಸಲಹಾ ಸಮಿತಿ ಸರ್ಕಾರದ ಎದುರು ಈ ಸಲಹೆಗಳನ್ನು ಇಟ್ಟಿದೆ. ಕರ್ನಾಟಕ ಒಳಗೊಂಡಂತೆ ಹತ್ತು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಕೆಯಾಗಿರುವುದಾಗಿ ಕೇಂದ್ರ ಈಚೆಗೆ ತಿಳಿಸಿತ್ತು. ಸೋಂಕಿನ ಪಾಸಿಟಿವಿಟಿ ದರವೂ ಹೆಚ್ಚಿರುವುದಾಗಿ ತಿಳಿಸಿತ್ತು. ಜಿಲ್ಲೆಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕಠಿಣಗೊಳಿಸುವಂತೆ ತಿಳಿಸಿತ್ತು. ಹೆಚ್ಚು ಜನ ಸೇರದಂತೆ ತಡೆಯಲು ಹಾಗೂ 10%ಗೂ ಅಧಿಕ ಪಾಸಿಟಿವಿಟಿ ದರ ಇರುವ ಕಡೆಗಳಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿತ್ತು.
ಇದರೊಂದಿಗೆ ಕೇರಳ, ತಮಿಳುನಾಡಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಹಾರಾಷ್ಟ್ರ, ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ವರದಿಯನ್ನು ಕಡ್ಡಾಯಗೊಳಿಸಿದೆ. ಆರ್ಟಿಪಿಸಿಆರ್ ವರದಿ ಇಲ್ಲದವರಿಗೆ ಕ್ವಾರಂಟೈನ್ ಕಡ್ಡಾಯ ಎಂದು ಹೇಳಿದೆ.
ಕರ್ನಾಟಕದಲ್ಲಿ ಕೊರೊನಾ ಪ್ರಕರಣ
ಕರ್ನಾಟಕದಲ್ಲಿ ಸೋಮವಾರ 1285 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1383 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿನಿಂದಾಗಿ 25 ಮಂದಿ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 29,08,284ಕ್ಕೆ ಏರಿಕೆಯಾಗಿದ್ದು, ಒಟ್ಟು ಸಾವಿನ ಪ್ರಕರಣಗಳ ಸಂಖ್ಯೆ- 36,612 ಆಗಿದೆ. ಇಲ್ಲಿಯವರೆಗೆ ಒಟ್ಟು 28,47,627 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದ ಪಾಸಿಟಿವಿಟಿ ದರ ಶೇ. 0.96ಗೆ ಇಳಿದಿದ್ದು, ಕೋವಿಡ್ ಮರಣ ಪ್ರಮಾಣ ಶೇ.1.94ರಷ್ಟು ಇದೆ ಎಂದು ಕರ್ನಾಟಕ ಆರೋಗ್ಯ ಇಲಾಖೆ ವರದಿ ಮಾಡಿದೆ.
ಕೇರಳ, ಮಹಾರಾಷ್ಟ್ರದಿಂದ ಸೋಂಕು ಹರಡುವ ಭೀತಿ ಇರುವುದರಿಂದ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು ಬಾರ್ಡರ್ಗಳಲ್ಲಿ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
Recommended Video