ಕುಟುಂಬ ಯೋಜನೆ ಅಳವಡಿಕೆ ಜನಾಂದೋಲನ ಆಗಬೇಕು
ಬೆಂಗಳೂರು ಜುಲೈ 11: ಸುಮಾರು 135ಕೋಟಿಗೆ ಅಧಿಕ ಇರುವ ಭಾರತದ ಜನಸಂಖ್ಯೆಯಲ್ಲಿ ಯುವ ಜನರ ಸಂಖ್ಯೆ ಹೆಚ್ಚಿರುವುದು ದೇಶಕ್ಕೆ ಲಾಭದಾಯಕವಾಗಿದೆ. ಹೀಗಿದ್ದರು ಹೆಚ್ಚುತ್ತಿರುವ ಜನಸಂಖ್ಯೆಗೆ ತಡೆ ನೀಡಲು ಕುಟುಂಬ ಯೋಜನೆಯ ಅಳವಡಿಕೆಯನ್ನು ಜನಾಂದೋಲನ ರೂಪದಲ್ಲಿ ನಡೆಯಬೇಕಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕರೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನಡೆದ 'ವಿಶ್ವ ಜನಸಂಖ್ಯಾ ದಿನಾಚರಣೆ'ಯಲ್ಲಿ ಮಾತನಾಡಿದ ಅವರು, ವೈದ್ಯಕೀಯ ಆವಿಷ್ಕಾರ ಹಾಗೂ ಉತ್ಕೃಷ್ಟ ಆರೋಗ್ಯ ಸೇವೆಗಳಿಂದಾಗಿ ಜನರ ಗರಿಷ್ಠ ವಯೋಮಿತಿ 65-70 ಕ್ಕೆ ತಲುಪಿದೆ. ಮುಂದುವರಿದ ದೇಶಗಳಲ್ಲಿ 80 ವರ್ಷ ವಯಸ್ಸಿನವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದರು.
"ಜಪಾನ್, ಇಟಲಿ, ಸ್ಪೇನ್ ಮೊದಲಾದ ದೇಶಗಳಲ್ಲಿ ಹಿರಿಯ ನಾಗರಿಕರು ಹೆಚ್ಚಿದ್ದು, ಯುವಜನರ ಸಂಖ್ಯೆ ಕಡಿಮೆಯಾಗಿದೆ. ಆದರೆ ಭಾರತದಲ್ಲಿ 35 ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಿನವರು ಶೇ.60 ರಷ್ಟಿದ್ದಾರೆ. ಹೆಚ್ಚಿರುವ ಯುವ ಸಮೂಹ ದೇಶದ ಶಕ್ತಿಯಾಗಿದ್ದಾರೆ. ಜನಸಂಖ್ಯೆ ಹೆಚ್ಚಿದ್ದರೂ, ಯುವಜನರು ಹೆಚ್ಚಿರುವುದು ಆ ದೇಶಕ್ಕೆ ಲಾಭದಾಯಕವಾಗಿದೆ" ಎಂದು ಹೇಳಿದರು.
ದೇಶದಲ್ಲಿರುವ ಯುವಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಈ ಕಾರಣದಿಂದಲೇ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯ ರಾಷ್ಟ್ರವಾಗಿದೆ. ಜತೆಗೆ ಅತಿ ಹೆಚ್ಚು ಗ್ರಾಹಕರನ್ನು ಭಾರತ ಹೊಂದಿರುವುದರಿಂದ ಬಹುರಾಷ್ಟ್ರೀಯ ಕಂಪನಿಗಳು ನಮ್ಮತ್ತ ದೇಶದತ್ತ ನೋಡುತ್ತಿವೆ ಎಂದು ವಿವರಿಸಿದರು.

ಜನಸಂಖ್ಯೆ ದುಷ್ಪರಿಣಾಮ ಬಗ್ಗೆ ಯೋಚಿಸಬೇಕು
ಭಾರತದಲ್ಲಿ ಜನಸಂಖ್ಯೆ ವೇಗವಾಗಿ ಏರಿಕೆಯಾಗುತ್ತಿದೆ. ಜಗತ್ತಿನ ಜನಸಂಖ್ಯೆ 500 ಕೋಟಿಯಿಂದ 800 ಕೋಟಿಗೆ ತಲುಪಿದೆ. ಭಾರತದ ಜನಸಂಖ್ಯೆ 1.4 ಬಿಲಿಯನ್ಗೆ ತಲುಪುವ ಸನ್ನಾಹದಲ್ಲಿದೆ. ಇದರಿಂದಾಗಿ ಸಮಾಜ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಸಹ ಆಲೋಚಿಸಬೇಕು. ಜತೆಗೆ ಕೆಲವು ನಿರ್ಧಾರಗಳನ್ನು ಕೈಗೊಳ್ಳುವಾಗ ಸೂಕ್ಷ್ಮವಾಗಿ ಅವಲೋಕಿಸಿ ನಿರ್ಧರಿಸಬೇಕು. ದೇಶದಲ್ಲಿ ಈ ಹಿಂದೆ ಇದ್ದ ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಮಕ್ಕಳಿರುತ್ತಿದ್ದರು. ಇಂದು ಆ ವ್ಯವಸ್ಥೆ, ಕುಟುಂಬ ಪದ್ಧತಿ ಕಣ್ಮರೆಯಾಗುತ್ತಿದೆ ಎಂದು ಹೇಳಿದರು.

ಕಡಿಮೆ ಮಕ್ಕಳಿದ್ದರೆ ಪ್ರಗತಿ ಸಾಧ್ಯ
ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದರೆ ಆ ಕುಟುಂಬದ ನಿರ್ವಹಣೆ ಖರ್ಚು ಹೆಚ್ಚುತ್ತದೆ. ನಾಲ್ಕು ಮಕ್ಕಳ ಬದಲು ಇಬ್ಬರಿದ್ದರೆ ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯವನ್ನು ನೀಡಬಹುದು. ಅಲ್ಲದೆ ಲಭ್ಯ ನೈಸರ್ಗಿಕ ಸಂಪನ್ಮೂಲ ಇಬ್ಬರಿಗೂ ಸಮರ್ಪಕವಾಗಿ ಒದಗಿಸಬಹುದು. ಹಾಗೆಯೇ ಭೌಗೋಳಿಕ ವಿಸ್ತೀರ್ಣ ಕೂಡ ಅಷ್ಟೇ ಇರುತ್ತದೆ. ಹಿಂದಿಗಿಂತ ದೇಶದ ಜನಸಂಖ್ಯೆ 6-7 ಪಟ್ಟು ಹೆಚ್ಚಿದ್ದರೂ, ಭೂಮಿ, ನೀರು ಮೊದಲಾದ ಸಂಪನ್ಮೂಲಗಳೇನೂ ಹೆಚ್ಚಾಗುವುದಿಲ್ಲ. ರಾಜ್ಯದ ಕೆಲ ಜಿಲ್ಲೆಗಳಲ್ಲಿ ಭೂ ಕುಸಿತ, ಭಾರೀ ಮಳೆ ಸೇರಿದಂತೆ ವಿವಿಧ ಬಗೆಯ ಹವಾಮಾನ ವೈಪರಿತ್ಯಗಳು ಉಂಟಾಗುತ್ತಿದೆ ಎಂದು ಜನಸಂಖ್ಯೆ ಹೆಚ್ಚಳದ ದುಷ್ಪರಿಣಾಮ ಕುರಿತು ತಿಳಿಸಿದರು.

ಇಂದು ವೈದ್ಯಕೀಯ ಸೌಲಭ್ಯ ಉತ್ತಮವಾಗಿದೆ
ಕರ್ನಾಟದ ಸೇರಿದಂತೆ ದೇಶದಲ್ಲಿ ಹಿಂದಿನ ಕಾಲದಲ್ಲಿ ಆರೋಗ್ಯ ಸೌಲಭ್ಯಗಳು ಕಡಿಮೆ ಇದ್ದಿದ್ದರಿಂದ ಆರೋಗ್ಯ ಕುರಿತು ಆತಂಕ ಇತ್ತು. ಆದರೆ ಇಂದು ಆರೋಗ್ಯ ಸೌಲಭ್ಯಗಳು ಉತ್ತಮವಾಗಿದ್ದು, ಅನಾರೋಗ್ಯ ಕುರಿತು ಚಿಂತಿಸಬೇಕಿಲ್ಲ. ಇದರಿಂದ ಹಿಂದಿನಗಿಂತಲೂ ಜೀವನ ಗುಣಮಟ್ಟ ಇಂದು ಸುಧಾರಿಸಿದೆ. ಸಣ್ಣ ಸಂಸಾರವಿದ್ದರೂ ಆರ್ಥಿಕತೆ ಉತ್ತಮವಾಗಿರುತ್ತದೆ.

ಹೆಚ್ಚೆಚ್ಚು ಜಾಗೃತಿ ಮೂಡಿಸಬೇಕು
ಚಿಕ್ಕ ಕುಟುಂಬ, ಕಡಿಮೆ ಜನಸಂಖ್ಯೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ಕುಟುಂಬ ಯೋಜನೆಯ ಜಾರಿಯಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವುದು ಅಗತ್ಯವಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು 'ನಮ್ಮ ಕ್ಲಿನಿಕ್' ಯೋಜನೆ ಜಾರಿಗೆ ತಂದಿದ್ದಾರೆ. ಕೇಂದ್ರ ಸರ್ಕಾರವು ಮಹಿಳೆಯರಿಗಾಗಿ ಕ್ಲಿನಿಕ್ಗಳನ್ನು ತೆರೆಯಬೇಕೆಂದು ಹೇಳಿದೆ. ಈ ನಮ್ಮ ಕ್ಲಿನಿಕ್ ಗಳ ಮೂಲಕ ಕುಟುಂಬ ಯೋಜನೆ ಕುರಿತು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸೂಚಿಸಿದರು.












Click it and Unblock the Notifications