ಜೈಲಿನಲ್ಲಿ ನಟ ದರ್ಶನ್ ಭೇಟಿಯಾದ ರಕ್ಷಿತ-ಪ್ರೇಮ್: ದಾಸನ ಬಗ್ಗೆ ಹೇಳಿದ್ದೇನು?
ಬೆಂಗಳೂರು, ಜೂನ್ 29: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಹಲವರು ಜೈಲು ಸೇರಿದ್ದು, ನಟ ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಕನ್ನಡ ಚಿತ್ರತಂಡದ ಕೆಲ ನಾಯಕರು ಭೇಟಿಗೆ ಮುಂದಾಗಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನ ಇಂದು( ಶನಿವಾರ) ನಟಿ ರಕ್ಷಿತಾ ಹಾಗೂ ನಟ, ನಿರ್ದೇಶಕ ಪ್ರೇಮ್ ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದ ಜೈಲು ಸೇರಿರುವ ದರ್ಶನ್ ಜೈಲಿನಲ್ಲಿ ಸರಿಯಾಗಿ ಊಟ ನಿದ್ದೆ ಮಾಡದೇ ಸೊರಗಿದ್ದಾರೆ ಎನ್ನಲಾಗಿದ್ದು, ಜೈಲಿನಲ್ಲಿರುವ ನಟ ದರ್ಶನ್ ಗೆ ರಕ್ಷಿತಾ ಹಾಗೂ ಪ್ರೇಮ್ ಧೈರ್ಯ ತುಂಬಿದ್ದಾರೆ.

ದರ್ಶನ್ರ ಗೆಳೆಯರಾದ ನಟಿ ರಕ್ಷಿತಾ ಹಾಗೂ ನಿರ್ದೇಶಕ ಪ್ರೇಮ್ ಅವರುಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ದರ್ಶನ್ ಜೊತೆ ಮಾತನಾಡಿದ ಬಗ್ಗೆ ಯಾವುದೇ ವಿಚಾರವನ್ನು ಸಹ ಮಾಧ್ಯಮಗಳ ಮುಂದೆ ಬಹಿರಂಗ ಪಡಿಸಿಲ್ಲ. ದರ್ಶನ್ ಭೇಟಿ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತಾ ಹಾಗೂ ಪ್ರೇಮ್, ದರ್ಶನ್ ಆರೋಗ್ಯವಾಗಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ, ರೇಣುಕಾ ಸ್ವಾಮಿ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.
ಹದಿನೈದು ಇಪ್ಪತ್ತು ದಿನಗಳಿಂದ ಏನೇನು ಆಗಿದೆಯೋ, ನೀವು ಮಾಧ್ಯಮದವರು ಏನೇನು ತೋರಿಸುತ್ತಿದ್ದಿರೋ ಅದು ಅತ್ಯಂತ ದುರಾದೃಷ್ಟಕರ. ನಾನು ಏನು ಹೇಳುವುದಕ್ಕೆ ಇಷ್ಟ ಪಡುತ್ತೇನೆ ಅಂದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ." ಎಂದು ದರ್ಶನ್ ಭೇಟಿ ಮಾಡಿದ ಬಳಿಕ ರಕ್ಷಿತಾ ಪ್ರೇಮ್ ಹೇಳಿದ್ದಾರೆ.
ಇನ್ನೂ ನಟ ಹಾಗೂ ನಿರ್ದೇಶಕ ಜೋಗಿ ಪ್ರೇಮ್ ಅವರು ಮಾತನಾಡಿ ದರ್ಶನ್ ನಮಗೂ ಸ್ನೇಹಿತರು ಎಲ್ಲರಿಗೂ ಸ್ನೇಹಿತರು. ಎಲ್ಲದಕ್ಕಿಂತ ಹೆಚ್ಚಾಗಿ ಇದು ಕೋರ್ಟ್ನಲ್ಲಿದೆ. ಹಾಗಾಗಿ ನಾವ್ಯಾರೂ ಏನೂ ಮಾತಾಡುವುದಕ್ಕೆ ಹೋಗಬಾರದು. ರೇಣುಕಾಸ್ವಾಮಿಯವರ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಕೇಳುತ್ತಾ, ಕಾನೂನು ಪ್ರಕಾರ ಏನೆಲ್ಲ ಆಗಬೇಕೋ ಅದೆಲ್ಲ ಆಗುತ್ತಿದೆ. ಕಾನೂನು ಪ್ರಕಾರ ಯಾವುದೂ ದೊಡ್ಡದಲ್ಲ. ಇದರ ಮೇಲೆ ದಯವಿಟ್ಟು ಏನೂ ಕೇಳುವುದಕ್ಕೆ ಹೋಗಬೇಡಿ ಎಂದು ದ ಪ್ರೇಮ್ ಹೇಳಿದ್ದಾರೆ.
ಜೈಲಿನಲ್ಲಿ ದರ್ಶನ್ ಹೇಗಿದ್ದಾರೆ ಅನ್ನೋ ಪ್ರಶ್ನೆಗೆ ರಕ್ಷಿತಾ ಪ್ರೇಮ್ ಅವರು ಉತ್ತರಿಸಿದ್ದು, ಇಂತಹ ಸಮಯದಲ್ಲಿ ಯಾರಾದರೂ ಆರಾಮಾಗಿ ಇರುತ್ತಾರಾ? ಎಂದಿದ್ದಾರೆ. ಅವರು ಹೇಗಿದ್ದಾರೆ ಅಂತ ಕೇಳುವುದಕ್ಕೆ ಬಂದಿದ್ವಿ. ಇಂತಹ ಸಮಯದಲ್ಲಿ ನಾರ್ಮಲ್ ಆಗಿ ಇರುವುದಕ್ಕೆ ಆಗುತ್ತಾ? ಎಂದು ನಟಿ ರಕ್ಷಿತಾ ಪ್ರೇಮ್ ಹೇಳಿದ್ದಾರೆ.












Click it and Unblock the Notifications