ಹಿಂದಿ ಹೇರಿಕೆ ವಿರುದ್ಧ ದನಿ ಎತ್ತಿದ ನಿಖಿಲ್ ಕುಮಾರಸ್ವಾಮಿ
ಬೆಂಗಳೂರು, ಆಗಸ್ಟ್ 19: ತ್ರಿಭಾಷಾ ಸೂತ್ರದಡಿ ಮಕ್ಕಳು ಹಿಂದಿಯನ್ನು ಮೂರನೇ ಭಾಷೆಯನ್ನಾಗಿ ಕಲಿಯುವಂತೆ ಕಡ್ಡಾಯಗೊಳಿಸುವ ಪ್ರಯತ್ನಕ್ಕೆ ಕನ್ನಡಪರ ಹೋರಾಟಗಾರರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅದಕ್ಕೆ ರಾಜಕೀಯ ಮತ್ತು ಸಿನಿಮಾರಂಗದ ಕೆಲವರು ಮಾತ್ರವೇ ದನಿಗೂಡಿಸುತ್ತಿದ್ದಾರೆ. ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಕೂಡ ಈ ಅಭಿಯಾನಕ್ಕೆ ಬೆಂಬಲ ನೀಡಿದ್ದಾರೆ.
Recommended Video
ಹಲವು ದಶಕಗಳಿಂದಲೂ ನಮ್ಮ ಶಾಲೆಗಳ ಪಠ್ಯಕ್ರಮಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಇದು ಹಿಂದಿ ಹೇರಿಕೆಯಲ್ಲದೆ ಬೇರೇನು? ಹಿಂದಿ ಕಡ್ಡಾಯ ಕಲಿಕೆ ಮಕ್ಕಳಿಗೆ ಹೊರೆಯಾಗಿದೆ. ಇಡೀ ಜಗತ್ತು ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಿದೆ. ಹೀಗಿರುವಾಗ ಮತ್ತೊಂದು ಸಂಪರ್ಕ ಭಾಷೆಯ ನೆಪದಲ್ಲಿ ಹಿಂದಿಯನ್ನು ತರುವ ಅಗತ್ಯವಿಲ್ಲ ಎಂದು ನಿಖಿಲ್ ಹೇಳಿದ್ದಾರೆ.
ಶಿರಾ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧೆಯ ಸುದ್ದಿ: ಸ್ಪಷ್ಟನೆ ನೀಡಿದ ನಿಖಿಲ್ ಕುಮಾರಸ್ವಾಮಿ
ಈ ಹಿಂದಿ ಹೇರಿಕೆಯ ನೀತಿ ಇನ್ನಾದರೂ ಕೊನೆಯಾಗಲಿ ಎಂದಿರುವ ನಿಖಿಲ್, ಇದರ ಹೋರಾಟದಲ್ಲಿ ಜತೆಯಾಗಿರುವುದಾಗಿ ಭರವಸೆ ನೀಡಿದ್ದಾರೆ. ಮುಂದೆ ಓದಿ...
ಹಿಂದಿ ಹೇರಿಕೆಯ ಮಹಾ ಹುನ್ನಾರ
ಹಲವು ದಶಕಗಳಿಂದ ಕರ್ನಾಟಕದ ಪಠ್ಯಕ್ರಮದಲ್ಲಿ ಹಿಂದಿ ವಿಷಯವನ್ನು ಕಡ್ಡಾಯವಾಗಿ ಕಲಿಯಲೇಬೇಕೆನ್ನುವ ನಿಯಮವಿದೆ. ಒಂದು ವಿಷಯವಾಗಿ ಕಡ್ಡಾಯವಾಗಿ ಹಿಂದಿಯನ್ನು ಕಲಿಯಲೇಬೇಕೆನ್ನುವ ನಿಯಮ ಹಿಂದಿ ಹೇರಿಕೆಯಲ್ಲದೆ ಮತ್ತೇನು? ಕರ್ನಾಟಕ ಪಠ್ಯದಲ್ಲಿ ಹಿಂದಿ ಸೇರಿಸಿರುವುದು ಹಿಂದಿ ಹೇರಿಕೆಯ ಮಹಾ ಹುನ್ನಾರ ಎಂದು ನಿಖಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಸಂಪರ್ಕ ಭಾಷೆ ಬೇಕಿಲ್ಲ
ಪಠ್ಯಕ್ರಮದಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಿರುವುದು ಶಾಲಾ ಮಕ್ಕಳಿಗೆ ಅನಗತ್ಯ ಹೊರೆಯಾಗಿದೆ. ಹಿಂದಿ ಕಲಿಕೆಗೆ ಮೀಸಲಿಡುವ ಸಮಯವನ್ನು ಜೀವನ ಕೌಶಲ್ಯಗಳನ್ನು ಕಲಿಯಲು ಉಪಯೋಗಿಸಿಕೊಳ್ಳಬಹುದು. ಇಂಗ್ಲಿಷ್ ಅನ್ನು ಇಡೀ ಜಗತ್ತು ಸಂಪರ್ಕ ಭಾಷೆಯಾಗಿ ಒಪ್ಪಿರುವಾಗ, ಮತ್ತೊಂದು ಸಂಪರ್ಕ ಭಾಷೆಯಾಗಿ ಹಿಂದಿಯ ಅವಶ್ಯಕತೆಯಿಲ್ಲ ಎಂದಿದ್ದಾರೆ.
ಬಲವಂತದ ಹಿಂದಿ ಬೇಡ, ದ್ವಿಭಾಷಾ ನೀತಿ ಸಾಕು: ಕನ್ನಡಿಗರ ಆಂದೋಲನ
ಈ ಹುನ್ನಾರ ಕೊನೆಯಾಗಲಿ
ಈ ನೀತಿಯನ್ನು ಕನ್ನಡಿಗರು ಇಷ್ಟು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವುದೇ ದುರ್ದೈವ. ಹಿಂದಿ ಹೇರಿಕೆಯ ವಿರುದ್ಧ ಜ್ವಾಲೆ ಎದ್ದಿರುವ ಇದೇ ಸಂದರ್ಭದಲ್ಲಿ ಈ ಹುನ್ನಾರ ಕೊನೆಗಾಣಲಿ ಎಂದು ಆಶಿಸುತ್ತೇನೆ. ಈ ನಮ್ಮ ಹೋರಾಟಕ್ಕೆ ಯಶಸ್ಸು ಸಿಗುವವರೆಗೂ ನಾನು ನಿಮ್ಮ ಜೊತೆಯಲ್ಲಿ ನಿಲ್ಲುತ್ತೇನೆ ಎಂದು ನಿಖಿಲ್ ಭರವಸೆ ನೀಡಿದ್ದಾರೆ.
ಮೂರನೇ ಭಾಷೆಯಾಗಿ ಹಿಂದಿ ಏಕೆ?
ಮೂರನೇ ಭಾಷೆಯಾಗಿ ಹಿಂದಿಯನ್ನು ಹೇರುವ ನೀತಿಗೆ ತಮಿಳುನಾಡು ವಿರೋಧ ವ್ಯಕ್ತಪಡಿಸಿತ್ತು. ಆದರೆ ಕರ್ನಾಟಕ ಸರ್ಕಾರ, ಕೇಂದ್ರ ಸರ್ಕಾರದ ನೀತಿಗೆ ದನಿ ಎತ್ತುವ ಶಕ್ತಿಯಿಲ್ಲದೆ ಅದನ್ನು ಒಪ್ಪಿಕೊಳ್ಳಲು ಹೊರಟಿದೆ ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಹಿಂದಿ ಬೇಡ. ರಾಜ್ಯಕ್ಕೆ ದ್ವಿಭಾಷಾ ನೀತಿಯೇ ಸಾಕು ಎಂದು ಟ್ವಿಟ್ಟರ್ನಲ್ಲಿ ಕನ್ನಡಿಗರ ಅಭಿಯಾನ ಜೋರಾಗಿ ನಡೆದಿದೆ. ಅದಕ್ಕೆ ನಿಖಿಲ್ ಕುಮಾರಸ್ವಾಮಿ ಸಹ ಕೈ ಜೋಡಿಸಿದ್ದಾರೆ.