ಲಂಚ ಪ್ರಕರಣ: ಸಚಿವ ಪುಟ್ಟರಂಗ ಶೆಟ್ಟಿಗೆ ಎಸಿಬಿ ನೊಟೀಸ್
ಬೆಂಗಳೂರು, ಫೆಬ್ರವರಿ 14: ವಿಧಾನಸೌಧದಲ್ಲಿ ತಮ್ಮ ಕಚೇರಿ ಸಿಬ್ಬಂದಿ ಬಳಿ 25.76 ಲಕ್ಷ ಹಣ ಸಿಕ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗ ಶೆಟ್ಟಿ ಅವರಿಗೆ ಎಸಿಬಿ ನೊಟೀಸ್ ಜಾರಿ ಮಾಡಿದೆ.
ಸಮಾಜಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಅವರ ಕಚೇರಿಯ ಟೈಪಿಸ್ಟ್ ಎಸ್.ಜೆ.ಮೋಹನ್ ಎಂಬುವರ ಬಳಿ ವಿಧಾನಸೌಧದಲ್ಲಿಯೇ 25.76 ಲಕ್ಷ ಹಣ ದೊರಕಿತ್ತು.
ಮೋಹನ್ ಅವರನ್ನು ವಶಕ್ಕೆ ಪಡೆದಿದ್ದ ಪೊಲೀಸರು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆದಾಗ ಇದು ಗುತ್ತಿಗೆದಾರರು ನೀಡಿದ ಹಣವೆಂದು ಮೋಹನ್ ಒಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಗುತ್ತಿಗೆದಾರರನ್ನೂ ಸಹ ವಿಚಾರಣೆ ಮಾಡಲಾಗಿತ್ತು.

ಪ್ರಕರಣವು ಈಗ ಸಚಿವ ಪುಟ್ಟರಂಗ ಶೆಟ್ಟಿ ಅವರ ವರೆಗೂ ಬಂದಿದ್ದು, ಭ್ರಷ್ಟಾಚಾರ ನಿಗ್ರಹ ದಳವು ಪುಟ್ಟರಂಗಶೆಟ್ಟಿಗೆ ನೊಟೀಸ್ ಜಾರಿ ಮಾಡಿದೆ. ಬಿಜೆಪಿಯ ಆಫರೇಷನ್ ಕಮಲ ಆಡಿಯೋದ ವಿರುದ್ಧ ಪ್ರತಿಭಟಿಸುತ್ತಿರುವ ಮೈತ್ರಿ ಸರ್ಕಾರಕ್ಕೆ ಇದು ಭಾರಿ ಹಿನ್ನಡೆ ಉಂಟು ಮಾಡಲಿದೆ.
ನೊಟೀಸ್ಗೆ ಸಂಬಂಧಿಸಿದಂತೆ ಎಸಿಬಿ ಮುಂದೆ ಹಾಜರಾಗಲು ಸಮಯದ ಕಾಲಾವಕಾಶವನ್ನು ಪುಟ್ಟರಂಗ ಶೆಟ್ಟಿ ಕೇಳಿದ್ದಾರೆ. ನಾಳೆ ಅಥವಾ ಶನಿವಾರ ಪುಟ್ಟರಂಗ ಶೆಟ್ಟಿ ಅವರು ಎಸಿಬಿ ಮುಂದು ಹಾಜರಾಗಬಹುದು ಅಥವಾ ಲಿಖಿತ ಉತ್ತರ ನೀಡಬಹುದು. ಪುಟ್ಟರಂಗ ಶೆಟ್ಟಿ ಅವರ ಉತ್ತರ ಸಮಂಜಸವಾಗಿಲ್ಲದಿದ್ದರೆ ಅವರ ವಿರುದ್ಧ ಎಫ್ಐಆರ್ ದಾಖಲಾಗುವ ಸಾಧ್ಯತೆ ಇದೆ.












Click it and Unblock the Notifications