ವಿವಿಧ ಜಿಲ್ಲೆಯಲ್ಲಿ ಎಸಿಬಿ ದಾಳಿ; ನಗದು, ಚಿನ್ನಾಭರಣಗಳು ಪತ್ತೆ
ಬೆಂಗಳೂರು, ಮಾರ್ಚ್ 09: ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ದಾಳಿ ಮಾಡಿದ್ದಾರೆ. 11 ಜಿಲ್ಲೆಯ 28 ಕಡೆಗಳಲ್ಲಿ ದಾಳಿಯನ್ನು ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ ಚಿಕ್ಕಬಳ್ಳಾಪುರ, ಉಡುಪಿ, ಮೈಸೂರು, ಕಾರವಾರ, ಬೆಳಗಾವಿ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ದಾಳಿಯನ್ನು ನಡೆಸಲಾಗಿದೆ.
ಅಕ್ರಮ ಆಸ್ತಿಗಳಿಕೆಯ ಮಾಹಿತಿ ಅನ್ವಯ ದಾಳಿಯನ್ನು ನಡೆಸಲಾಗಿದೆ. ಅಧಿಕಾರಿಗಳಿಗೆ ಸೇರಿದ ಆಸ್ತಿಗಳ ದಾಖಲೆಗಳನ್ನು ಎಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದಾವಣಗೆರೆಯಲ್ಲಿ ಸಹ ದಾಳಿ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.
ಕೆಲವು ಅಧಿಕಾರಿಗಳ ಐಷಾರಾಮಿ ಮನೆಯಲ್ಲಿ ಚಿನ್ನ, ಬೆಳ್ಳಿಯ ಆಭರಣ, ಹಣ, ಐಷಾರಾಮಿ ವಾಚು ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದು, ಸಂಜೆಯ ವೇಳೆಗೆ ಅಂತಿಮ ಚಿತ್ರಣ ಲಭಿಸುವ ನಿರೀಕ್ಷೆ ಇದೆ.

ಕಾರವಾರದಲ್ಲಿ ಪರಿಶೀಲನೆ
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಇಲಾಖೆ ಜಂಟಿ ಆಯುಕ್ತ ಸುಬ್ರಹ್ಮಣ್ಯ ವಡ್ಡರ್ ಅವರ ಕಾರವಾರ ನಿವಾಸದ ಮೇಲೆ ಎಸಿಬಿ ದಾಳಿ ಮಾಡಿದೆ. ಅರ್ಜುನ್ ಥಿಯೇಟರ್ ಹಿಂಬದಿಯಲ್ಲಿರುವ ಮನೆ ಮೇಲೆ ಎಸಿಬಿ ಡಿವೈಎಸ್ಪಿ ಮಂಜುನಾಥ ಕೌರಿ ನೇತೃತ್ವದ ತಂಡ ದಾಳಿ ನಡೆಸಿದ್ದು, ದಾಖಲಾತಿಗಳ ಪರಿಶೀಲನೆ ನಡೆಸುತ್ತಿದೆ. ಮೈಸೂರಿನಲ್ಲಿ ನಡೆದ ದಾಳಿ ಸಂಬಂಧ ಕಾರವಾರದಲ್ಲಿರುವ ಅವರ ತಾಯಿ ಚಿನ್ನಮ್ಮ ವಡ್ಡರ್ ಹೆಸರಿನಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ.

ಉಡುಪಿಯಲ್ಲಿಯೂ ದಾಳಿ
ಉಡುಪಿಯಲ್ಲಿರುವ ಮೈಸೂರು ಟೌನ್ & ಕಂಟ್ರಿ ಪ್ಲ್ಯಾನಿಂಗ್ ಜಂಟಿ ನಿರ್ದೇಶಕ ಸುಬ್ರಹ್ಮಣ್ಯ ಕೆ. ವಡ್ಡರ್ ಮನೆ ಮೇಲೆ ದಾಳಿಯನ್ನು ಮಾಡಲಾಗಿದೆ. ಉಡುಪಿಯ ಹೊರವಲಯದ ಪುತ್ತೂರು ಎಂಬಲ್ಲಿರುವ ಮನೆ ಮೇಲೆ ಮಂಗಳೂರು ವಿಭಾಗದ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಮೈಸೂರಿನಲ್ಲಿಯೂ ದಾಳಿ
ಮೈಸೂರಿನಲ್ಲಿ ಚೆಸ್ಕಾಂ ಸೂಪರಿಡೆಂಟ್ ಇಂಜಿನಿಯರ್ ಆಗಿರುವ ಮುನಿಗೋಪಾಲ್ ರಾಜು ಅವರ ಮನೆ ಮೇಲೆ 10 ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಗೋಕುಲಂ 3ನೇ ಹಂತದ 8ನೇ ಅಡ್ಡರಸ್ತೆಯಲ್ಲಿರುವ ಮನೆ ಮತ್ತು ವಿಜಯನಗರದ ಕಚೇರಿ, ಚನ್ನಪಟ್ಟಣದ ಮೇಲೆ ದಾಳಿ ನಡೆಸಿರುವ ಎಸಿಬಿ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
Recommended Video

ಕೋಲಾರದಲ್ಲಿ ಎಸಿಬಿ ದಾಳಿ
ಕೋಲಾರದಲ್ಲಿಯೂ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಿರ್ಮಿತ ಕೇಂದ್ರದ ನಿರ್ದೇಶಕ ಕೃಷ್ಣೇಗೌಡ ಮನೆ ಮೇಲೆ ದಾಳಿ ಮಾಡಲಾಗಿದೆ. ಕೋಲಾರ ತಾಲೂಕಿನ ವೆಲಗಲಬುರ್ರೆ ಗ್ರಾಮದಲ್ಲಿರುವ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಆರು ವರ್ಷಗಳ ಹಿಂದೆ ಗ್ರಾಮದಲ್ಲಿ 2 ಅಂತಸ್ತಿನ ಮನೆಯನ್ನು ನಿರ್ಮಾಣ ಮಾಡಲಾಗಿತ್ತು.











Click it and Unblock the Notifications