ರಾಜ್ಯದಲ್ಲಿ ಎಸಿಬಿ ದಾಳಿ; ಗದಗ ಕೃಷಿ ಅಧಿಕಾರಿ ಮನೆಯಲ್ಲಿ 7 ಕೆಜಿ ಚಿನ್ನ ಪತ್ತೆ
ಬೆಂಗಳೂರು, ನವೆಂಬರ್ 24: ರಾಜ್ಯದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ನಡೆಸಿದ್ದು, ಒಟ್ಟು 60 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 400ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಅಕ್ರಮ ಆಸ್ತಿ ಸಂಪಾದನೆ ಪರಿಶೀಲನೆ ಮಾಡುತ್ತಿದ್ದಾರೆ.
ಬುಧವಾರ ಬೆಳ್ಳಂಬೆಳಗ್ಗೆ 8 ಎಸ್ಪಿಗಳು, 100 ಅಧಿಕಾರಿಗಳು ಮತ್ತು 300 ಸಿಬ್ಬಂದಿಯ ತಂಡದಿಂದ 15 ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 60 ಸ್ಥಳಗಳಲ್ಲಿ ಎಸಿಬಿ ಶೋಧ ನಡೆಸಿದೆ.

ಬೆಂಗಳೂರು ನಗರದಲ್ಲಿ ಬೆಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ದಾಳಿಗೆ ಮಾಡಿದ್ದು, ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆಯಲ್ಲಿ ಅಧಿಕಾರಿಗಳು, ಸಿಬ್ಬಂದಿ ಸೇರಿ ನಾಲ್ವರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆಯ ಫಿಜಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಸೇರಿ ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಇಇ ಕೆ.ಎಸ್.ಲಿಂಗೇಗೌಡ, ಮಂಡ್ಯ ಹೆಚ್ಎಲ್ಬಿಸಿ ಇಇ ಕೆ.ಶ್ರೀನಿವಾಸ್, ದೊಡ್ಡಬಳ್ಳಾಪುರದ ಕಂದಾಯ ನಿರೀಕ್ಷಕ ಲಕ್ಷ್ಮೀನರಸಿಂಹಯ್ಯ, ಮಾಜಿ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್, ಬೆಂಗಳೂರು ನಿರ್ಮಿತಿ ಕೇಂದ್ರದ ಮಾಜಿ ಪ್ರಾಜೆಕ್ಟ್ ಮ್ಯಾನೇಜರ್, ಜನರಲ್ ಮ್ಯಾನೇಜರ್ ಬಿ.ಕೃಷ್ಣಾರೆಡ್ಡಿ, ಬೆಂಗಳೂರು ನಂದಿನಿ ಡೇರಿಯ ಜನರಲ್ ಮ್ಯಾನೇಜರ್, ಗದಗ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ಸಹಕಾರಿ ಅಭಿವೃದ್ಧಿ ಅಧಿಕಾರಿ ಎ.ಕೆ. ಮಸ್ತಿ ತಂಡದಿಂದ ದಾಳಿ ನಡೆದಿದೆ.

ಪಿಡಬ್ಲೂಡಿ ಜೆಇ ಶಾಂತಗೌಡ ಬಿರಾದಾರ್ ಮನೆ ಮೇಲೆ ಎಸಿಬಿ ದಾಳಿ
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯ ಜೆ.ಇ. ಶಾಂತಗೌಡ ಬಿರಾದಾರ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿನ ಪಿಡಬ್ಲೂಡಿ ಜೆ.ಇ. ಶಾಂತಗೌಡ ಬಿರಾದಾರ್ ಮನೆ, ಕಚೇರಿ ಮತ್ತು ಯಡ್ರಾಮಿಯಲ್ಲಿರುವ ತೋಟದ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಸದ್ಯ ಎಸಿಬಿ ಅಧಿಕಾರಿಗಳು, ಜೆ.ಇ. ಶಾಂತಗೌಡ ಬಿರಾದಾರ್ಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮಂಗಳೂರು ಸ್ಮಾರ್ಟ್ ಸಿಟಿ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ
ಕರಾವಳಿ ನಗರಿ ಮಂಗಳೂರಿನಲ್ಲಿ ಎಸಿಬಿ ದಾಳಿ ನಡೆದಿದ್ದು, ಸ್ಮಾರ್ಟ್ ಸಿಟಿ ಇಂಜಿನಿಯರ್ ಲಿಂಗೇಗೌಡ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಚಾಮರಾಜನಗರ, ಹಾಸನ, ಮೈಸೂರು ಎಸಿಬಿ ಅಧಿಕಾರಿಗಳ ತಂಡದಿಂದ ದಾಳಿ ನಡೆದಿದೆ.

ಇಬ್ಬರು ಡಿವೈಎಸ್ಪಿ ಅಧಿಕಾರಿಗಳ ನೇತೃತ್ವದಲ್ಲಿ 25ಕ್ಕೂ ಅಧಿಕ ಅಧಿಕಾರಿಗಳು ದಾಳಿ ಮಾಡಿದ್ದು, ಮಹಾನಗರ ಪಾಲಿಕೆಯಲ್ಲಿನ ಲಿಂಗೇಗೌಡ ಕಚೇರಿ, ಉರ್ವಾದಲ್ಲಿನ ಮನೆ ಮೇಲೆ ದಾಳಿ ಮಾಡಲಾಗಿದೆ.
ಲಿಂಗೇಗೌಡ 30ಕ್ಕೂ ಹೆಚ್ಚು ವರ್ಷಗಳಿಂದ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 15 ವರ್ಷಗಳ ಹಿಂದೆ ಲಿಂಗೇಗೌಡ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು.
ಮಂಗಳೂರು ಮಹಾನಗರ ಪಾಲಿಕೆಯ ಜೂನಿಯರ್ ಇಂಜಿನಿಯರ್ ಆಗಿ ಬಂದಿದ್ದ ಲಿಂಗೇಗೌಡ, ಸದ್ಯ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದಾರೆ.

Recommended Video
ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಮನೆಯಲ್ಲಿ 7 ಕೆಜಿ ಚಿನ್ನ ಪತ್ತೆ
ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, 3.5 ಕೋಟಿ ರೂ. ಮೌಲ್ಯದ 7 ಕೆಜಿ ಚಿನ್ನ ಮತ್ತು 15 ಲಕ್ಷ ರೂ. ನಗದನ್ನು ಎಸಿಬಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 15 ಸರಕಾರಿ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ಮಾಡಿದ್ದರು.
ದೊಡ್ಡಬಳ್ಳಾಪುರ ಕಂದಾಯ ಅಧೀಕ್ಷಕನ ಮನೆ ಮೇಲೆ ದಾಳಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿರುವ ಕಂದಾಯ ಅಧೀಕ್ಷಕ ಲಕ್ಷ್ಮೀ ನರಸಿಂಹಯ್ಯ ಮನೆ ಮೇಲೆ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಈವರೆಗೆ 2.5 ಕೆಜಿ ಬೆಳ್ಳಿ, 750 ಗ್ರಾಂ ಚಿನ್ನ, ಒಂದು ಲಕ್ಷಕ್ಕೂ ಅಧಿಕ ನಗದು, ಒಂದು ಸೈಟ್, ಎರಡು ಮನೆ ಸೇರಿದಂತೆ ಜಮೀನು ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಮನೆಯಲ್ಲಿ ಸಿಕ್ಕ ವಸ್ತುಗಳು ದಾಖಲೆಗಳ ಬಗ್ಗೆ ಪರಿಶೀಲನೆ ಮಾಡುತ್ತಿದ್ದು, ಎಸಿಬಿ ಅಧಿಕಾರಿಗಳು ಸಿಬ್ಬಂದಿಯಿಂದ ಎಳನೀರು ಮತ್ತು ಊಟ ತರಿಸಿಕೊಂಡಿದ್ದಾರೆ. ಸಂಜೆವರೆಗೂ ದಾಳಿ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ನೆಲಮಂಗಲದ ನಾಗರಾಜು ಮನೆ ಮೇಲೆ ದಾಳಿ
ನೆಲಮಂಗಲದ ಎಲ್.ಸಿ. ನಾಗರಾಜು ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮನೆಯಲ್ಲಿ ನಗದು ಪತ್ತೆಯಾಗಿದೆ. ಕಪಾಟುವಿನಲ್ಲಿಟ್ಟ ಸೀರೆ ಕೊಡವಿದ್ದಂತೆಲ್ಲಾ ಝಣ ಝಣ ಕಾಂಚಣ ಹೊರ ಬೀಳುತ್ತಿವೆ. ಈಗಾಗಲೇ ಸುಮಾರು 40 ಲಕ್ಷ ಕ್ಕೂ ಹೆಚ್ಚು ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣೆ ಪತ್ತೆಯಾಗಿದೆ.
ಸುಮಾರು 20 ಜನ ಅಧಿಕಾರಿಗಳ ತಂಡದಿಂದ ತಲಾಷ್ ಮಾಡಿದ್ದು, ಲಕ್ಷ ಲಕ್ಷ ನೋಟಿನ ಕಟ್ಟುಗಳನ್ನು ನೋಡಿ ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ವೇಳೆ ಎಸ್ಪಿ ಯತೀಶ್ ಚಂದ್ರ ಭೇಟಿ ನೀಡಿ ಮಾಹಿತಿ ಪಡೆದು ಹೊರಟರು.
ಕಲಬುರಗಿ ಅಧಿಕಾರಿ ಮನೆಯ ಪೈಪ್ನಲ್ಲಿ ಐದು ಲಕ್ಷಕ್ಕೂ ಅಧಿಕ ಹಣ
ಬುಧವಾರ ಬೆಳಗ್ಗೆ ನಡೆದಿರುವ ಎಸಿಬಿ ದಾಳಿ ವೇಳೆ ಪತ್ತೆಯಾದ ಭ್ರಷ್ಟ ಹಣದ ಒಂದು ಸ್ಯಾಂಪಲ್ ಹೀಗಿದೆ. ಕಲಬುರಗಿ ಭ್ರಷ್ಟ ಅಧಿಕಾರಿಯ ಮನೆಯ ಪೈಪ್ನಲ್ಲಿಯೂ ಕಂತೆ ಕಂತೆ ಹಣ ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಬರುತ್ತಿದ್ದಂತೆ ಭ್ರಷ್ಟ ಅಧಿಕಾರಿ ಶಾಂತಗೌಡ ಮತ್ತು ಕುಟುಂಬ ನೀರಿನ ಪೈಪ್ನಲ್ಲಿ ಹಣ ಹಾಕಿದ್ದರು. ಇದೀಗ ಪ್ಲಂಬರ್ನ್ನು ಕರೆಸಿ, ಪೈಪ್ ಕಟ್ ಮಾಡಿಸಿ, ಕಂತೆ ಕಂತೆ ಹಣ ಹೊರಕ್ಕೆ ತೆಗೆದಿದ್ದಾರೆ.
ಮನೆಯ ಬಾತ್ ರೂಂ ಮತ್ತು ವಾಶ್ ಬೇಶನ್ ಪೈಪ್ನಲ್ಲಿ ದುಡ್ಡಿನ ಕಂತೆ ಹಾಕಿದ್ದ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಾಂತಗೌಡ ಮತ್ತು ಆತನ ಪುತ್ರ ವಾಸವಿರುವ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿ ಮನೆಯ ಪೈಪ್ನಲ್ಲಿ ಹಣ ಈ ರೂಪದಲ್ಲಿ ಪತ್ತೆಯಾಗಿದೆ. ಮನೆಯ ಎರಡನೇ ಫ್ಲೋರ್ನಲ್ಲಿ ವಾಸವಾಗಿರುವ ಶಾಂತಗೌಡ ಹಣದ ಕಂತೆಯನ್ನು ಪೈಪ್ನಲ್ಲಿ ಹಾಕಿದ್ದಾರೆ.
ಇದರ ಹೊರತಾಗಿ, ಆಯಾ ಮನೆಗಳ ಪರಿಶೀಲನೆ ನಂತರ ಬ್ಯಾಂಕ್ ಶಾಖೆಗಳಿಗೆ ಕರೆದುಕೊಂಡು ಹೋಗಿ ಪರಿಶೀಲನೆ ನಡೆಸಲು ಎಸಿಬಿ ತೀರ್ಮಾನಿಸಿದೆ ಎಂದು ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಇನ್ನೂ ದೊಡ್ಡ ಮಟ್ಟದಲ್ಲಿ ದಾಖಲೆಗಳು, ಚಿನ್ನ ಹಾಗೂ ಸಂಪತ್ತು ಪತ್ತೆಯಾಗುವ ಸಾಧ್ಯೆತೆಯಿದೆ ಎಂದು ತಿಳಿದುಬಂದಿದೆ.












Click it and Unblock the Notifications