ಎಸಿಬಿ ವಿವಾದ : ಸೋನಿಯಾ ಮತ್ತು ರಾಹುಲ್ಗೆ ಪ್ರತಿಪಕ್ಷಗಳ ಪತ್ರ
ಬೆಂಗಳೂರು, ಮಾರ್ಚ್ 23 : ಭ್ರಷ್ಟಾಚಾರ ನಿಗ್ರಹ ದಳ ರಚನೆ ವಿವಾದ ಹೈಕಮಾಂಡ್ ಅಂಗಳ ತಲುಪಿದೆ. ಬಿಜೆಪಿ ಮತ್ತು ಜೆಡಿಎಸ್ ಈ ಬಗ್ಗೆ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿವೆ. ಎಸಿಬಿ ರಚನೆ ವಿರೋಧಿಸಿ ಬಿಜೆಪಿ ಮಾರ್ಚ್ 28ರಂದು ಬೆಂಗಳೂರಿನಲ್ಲಿ ಒಂದು ದಿನದ ಧರಣಿ ಹಮ್ಮಿಕೊಂಡಿದೆ.
ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau- ACB) ಸ್ಥಾಪನೆ ಮಾಡಿರುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆಗಳನ್ನು ನೀಡುತ್ತಲೇ ಇದ್ದಾರೆ. ಆದರೆ, ಪ್ರತಿಪಕ್ಷಗಳು ತಮ್ಮ ಹೋರಾಟವನ್ನು ಕೈಬಿಟ್ಟಿಲ್ಲ. ['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']
ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಎಸಿಬಿ ರಚನೆ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿವೆ. ಆದರೆ, ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದ್ದರಿಂದ, ಪ್ರತಿಪಕ್ಷಗಳು ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಈ ಬಗ್ಗೆ ಪತ್ರ ಬರೆದಿವೆ. [ಎಸಿಬಿ ರಚನೆ : ಸರ್ಕಾರಕ್ಕೆ ಶೆಟ್ಟರ್ ಕೇಳಿದ ಪ್ರಶ್ನೆಗಳು]
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸಹ ಉಭಯ ನಾಯಕರಿಗೆ ಪತ್ರ ಬರೆದು, ಸರ್ಕಾರದ ನಿರ್ಧಾರ ವಾಪಸ್ ಪಡೆಯಲು ಸೂಚನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಎಸಿಬಿ ರಚನೆ ವಿವಾದದ ವಿವರಗಳು ಚಿತ್ರಗಳಲ್ಲಿ.... [ಎಸಿಬಿ ಬಗ್ಗೆ ಗೊಂದಲ : ಸಿದ್ದರಾಮಯ್ಯ ನೀಡಿದ ಸ್ಪಷ್ಟನೆಗಳು]
'ಲೋಕಾಯುಕ್ತ ಬಲಪಡಿಸಲು ಸಹಕರಿಸಿ'
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡುವ ಮೂಲಕ ಕರ್ನಾಟಕ ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚುವ ಹುನ್ನಾರ ನಡೆಸಿದೆ. ಲೋಕಾಯುಕ್ತವನ್ನು ಬಲಪಡಿಸಲು ಎಸಿಬಿ ರಚನೆ ಆದೇಶವನ್ನು ವಾಪಸ್ ಪಡೆಯುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಪತ್ರ ಬರೆದಿವೆ.
ಪದಚ್ಯುತಿ ಯತ್ನ, ನೇಮಕ ವಿಳಂಬ
ಉಪ ಲೋಕಾಯುಕ್ತ ಸುಭಾಷ್ ಅಡಿ ಅವರ ಪದಚ್ಯುತಿಗೆ ಪ್ರಸ್ತಾಪವನ್ನು ಕಾಂಗ್ರೆಸ್ ಶಾಸಕರೇ ಸಹಿ ಹಾಕಿ ಮಂಡಿಸಿದ್ದಾರೆ. ನ್ಯಾ.ಭಾಸ್ಕರರಾವ್ ಅವರ ರಾಜೀನಾಮೆ ನಂತರ ನೂತನ ಲೋಕಾಯುಕ್ತರನ್ನು ನೇಮಕ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ. ಈಗ ಎಸಿಬಿ ರಚನೆ ಮೂಲಕ ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಪತ್ರದಲ್ಲಿ ದೂರಿವೆ.
ಲೋಕಾಯುಕ್ತ ಕಾಯ್ದೆ ಜಾರಿ ಮಾಡಲಾಯಿತು
ಭ್ರಷ್ಟಾಚಾರ ನಿಗ್ರಹದ ವಿಷಯದಲ್ಲಿ ರಾಜ್ಯದಲ್ಲಿ ವಿಚಕ್ಷಣಾ ದಳ ರಚನೆ ಮಾಡಲಾಗಿತ್ತು. ಅದು ಸರಿಯಾಗಿ ಕೆಲಸ ಮಾಡದ ಕಾರಣ 1984ರಲ್ಲಿ ಲೋಕಾಯುಕ್ತ ರಚನೆ ಮಾಡಲಾಯಿತು. ಲೋಕಾಯುಕ್ತ ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿದೆ. ಆದರೂ ಸರ್ಕಾರ ಎಸಿಬಿ ರಚನೆ ಮಾಡಲು ಹೊರಟಿದೆ ಎಂದು ಪ್ರತಿಪಕ್ಷಗಳು ಪತ್ರದಲ್ಲಿ ಹೈಕಮಾಂಡ್ ನಾಯಕರಿಗೆ ತಿಳಿಸಿವೆ.
ಅಧಿಕಾರ ಕಸಿದುಕೊಳ್ಳಲಾಗಿದೆ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿರುವ ಸರ್ಕಾರ ಲೋಕಾಯುಕ್ತ ಪೊಲೀಸ್ ವಿಭಾಗಕ್ಕಿದ್ದ ಅಧಿಕಾರವನ್ನು ಕಸಿದುಕೊಂಡಿದೆ. ಎಸಿಬಿ ರಾಜ್ಯ ಸರ್ಕಾರದ ಅಡಿಯಲ್ಲಿಯೇ ಕೆಲಸ ಮಾಡುವಂತೆ ಮಾಡಲಾಗಿದೆ. ಈ ಆದೇಶವನ್ನು ವಾಪಸ್ ಪಡೆಯಲು ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಮಾ.28ರಂದು ದಿನವಿಡೀ ಧರಣಿ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆ ಮಾಡಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ಮಾ.28ರಂದು ದಿನವಿಡೀ ಧರಣಿ ಹಮ್ಮಿಕೊಂಡಿದೆ. ಬೆಂಗಳೂರಿನಲ್ಲಿ ಧರಣಿ ನಡೆಯಲಿದ್ದು, ಪಕ್ಷದ ಎಲ್ಲಾ ನಾಯಕರು ಧರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.