9 ಭ್ರಷ್ಟರಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಶಾಕ್: ರಾಜ್ಯದ ಅನೇಕ ಕಡೆ ದಾಳಿ
ಬೆಂಗಳೂರು, ಮಾರ್ಚ್ 9: ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಒಂಬತ್ತು ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಕುರಿತಾದ ದೂರಿನ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಯಾದಗಿರಿಯಲ್ಲಿ ಇಬ್ಬರು ಅಧಿಕಾರಿಗಳ ನಿವಾಸದ ಮೇಲೆ ಎಸ್ಪಿ ಅರುಣ್ ಮತ್ತು ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ದಾಳಿ ನಡೆಸಿರುವ 15ಕ್ಕೂ ಹೆಚ್ಚು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಮೈಸೂರು ಆರ್ಟಿಒದಲ್ಲಿ ಎಫ್ಡಿಎ ಆಗಿರುವ ವಿ. ಚೆನ್ನವೀರಪ್ಪ ಅವರಿಗೆ ಸೇರಿರುವ ಮಂಡ್ಯದಲ್ಲಿನ ಎರಡು ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿದೆ. ಮಂಡ್ಯದ ಕುವೆಂಪುನಗರದ ನಿವಾಸ ಹಾಗೂ ಅವರ ಸ್ವಂತ ಗ್ರಾಮ ಅಲಕೆರೆಯಲ್ಲಿನ ಮನೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಅಕ್ರಮ ಭೂದಾಖಲೆಗಳು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ನಗರ ಯೋಜನೆ ಅಧಿಕಾರಿ ದೇವೇಂದ್ರಪ್ಪ ಮನೆ ಮೇಲೆ ಎಸಿಬಿ ದಾಳಿ
ಯಾದಗಿರಿಯ ಸಹಾರಾ ಕಾಲೋನಿಯಲ್ಲಿರುವ ಜೆಸ್ಕಾಂ ಲೆಕ್ಕಾಧಿಕಾರಿ ರಾಜು ಪತ್ತಾರ್ ಅವರ ನಿವಾಸದಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. 20 ವರ್ಷಗಳಿಂದ ಕೆಇಬಿ ಲೆಕ್ಕಾಧಿಕಾರಿಯಾಗಿರುವ ರಾಜು ಪತ್ತಾರ್ ಅವರು ಅಕ್ರಮ ಅಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಆರೋಪದಡಿ ಎಸಿಬಿ ಎಸ್ಪಿ ಮಹೇಶ್ ಮೇಘಣ್ಣವರ್ ಹಾಗು ಡಿವೈಎಸ್ಪಿ ಉಮಾಕಾಂತ್ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ವಿಧವಾ ವೇತನಕ್ಕಾಗಿ ಲಂಚ ಸ್ವೀಕರಿಸಿ ಜೈಲಿಗೆ ಹೋದ ಗ್ರಾಮಲೆಕ್ಕಾಧಿಕಾರಿ
ಒಟ್ಟು 9 ಅಧಿಕಾರಿಗಳ ವಿರುದ್ಧ 11 ಜಿಲ್ಲೆಗಳಲ್ಲಿನ 28 ಸ್ಥಳಗಳಲ್ಲಿ ದಾಳಿ ನಡೆದಿದೆ. ಮುಂದೆ ಓದಿ.
ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ಕೃಷ್ಣೇಗೌಡ
ಚಿಕ್ಕಬಳ್ಳಾಪುರದ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಕೃಷ್ಣೇಗೌಡ ಅವರಿಗೆ ಸೇರಿದ ಕೋಲಾರ ಮತ್ತು ಚಿಕ್ಕಬಳ್ಳಾಪುರದ ಮನೆಗಳು, ಚಿಕ್ಕಬಳ್ಳಾಪುರದ ಕಚೇರಿ ಹಾಗೂ ಕೋಲಾರದಲ್ಲಿನ ಅವರ ಸಹೋದರನ ಮನೆಗಳಲ್ಲಿ ಕೇಂದ್ರ ಪಡೆ ಎಸ್ಪಿ ಕಲಾ ಕೃಷ್ಣಮೂರ್ತಿ ನೇತೃತ್ವದಲ್ಲಿ ಪರಿಶೀಲನೆ ನಡೆದಿದೆ.
ಬೆಳಗಾವಿ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹನುಮಂತ ಶಿವಪ್ಪ
ಬೆಳಗಾವಿ ವೃತ್ತದ ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಹನುಮಂತ ಶಿವಪ್ಪ ಅವರು ವಾಸಿಸುವ ಬೆಳಗಾವಿಯ ಅಂಗೋಲದಲ್ಲಿನ ಚನ್ನಮ್ಮನಗರದ ಫ್ಲಾಟ್, ಬೆಳಗಾವಿ ವೃತ್ತ ಕಚೇರಿ ಅವರ ಮೂಲ ಗ್ರಾಮ ಜಮಖಂಡಿ ತಾಲ್ಲೂಕಿನ ಗೊಳಂಭಾವಿ ಹಾಗೂ ಕಿತ್ತೂರುರಾಣಿ ಚನ್ನಮ್ಮ ನಗರದಲ್ಲಿರುವ ಅವರ ಮತ್ತೊಂದು ಮನೆಯ ಮೇಲೆ ಎಸ್ಪಿ ನೇಮಗೌಡ ನೇತೃತ್ವದ ತಂಡ ದಾಳಿ ನಡೆಸಿದೆ.
ಎಸಿಬಿಗೆ ಖರ್ಚು ಮಾಡಿದ್ದು 120 ಕೋಟಿ ರೂ. ಶಿಕ್ಷೆ ಯಾಗಿದ್ದು ನಾಲ್ಕು ಮಂದಿಗೆ!
ಜಂಟಿ ನಿರ್ದೇಶಕ ಸುಬ್ರಮಣ್ಯ
ಮೈಸೂರಿನ ಪಟ್ಟಣ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಸುಬ್ರಮಣ್ಯ ಕೆ. ವಡ್ಡರ್ ಅವರ ಉಡುಪಿ ನಿವಾಸ, ಕಾರವಾರ ಪಟ್ಟಣದಲ್ಲಿನ ಅವರ ತಾಯಿಯ ಮನೆ, ಮೈಸೂರಿನಲ್ಲಿರುವ ಅವರ ಬಾಡಿಗೆ ಮನೆ ಹಾಗೂ ಕಚೇರಿಗಳಲ್ಲಿ ಎಸ್ಪಿ ಬೋಪಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಚೆಸ್ಕಾಂ ಎಂಜಿನಿಯರ್ ಮುನಿಗೋಪಾಲ್ ರಾಜು
ಮೈಸೂರಿನ ಚೆಸ್ಕಾಂನ ಸುಪರಿಂಟೆಂಡೆಂಟ್ ಎಂಜಿನಿಯರ್ ಮುನಿಗೋಪಾಲ್ ರಾಜು ಅವರ ಕುವೆಂಪುನಗರದ ಮನೆ, ಗೋಕುಲಂನಲ್ಲಿನ ನಿವಾಸ, ಮೂಲ ಊರು ಕನಕಪುರ ಹಾಗೂ ಕಚೇರಿಗಳಲ್ಲಿ ಅರುಣಾಂಗ್ಶು ಗಿರಿ ನೇತೃತ್ವದ ತಂಡ ಪರಿಶೀಲನೆ ನಡೆಸಲಾಗಿದೆ.
ಬಿಎಂಟಿಎಫ್ ಇನ್ಸ್ಪೆಕ್ಟರ್ ವಿಕ್ಟರ್ ಸಿಮನ್
ಬಿಎಂಟಿಎಫ್ನ ಪೊಲೀಸ್ ಇನ್ಸ್ಪೆಕ್ಟರ್ ವಿಕ್ಟರ್ ಸಿಮನ್ ಅವರ ಬೆಂಗಳೂರಿನ ಕಸವನಹಳ್ಳಿ ನಿವಾಸ, ಮೈಸೂರಿನಲ್ಲಿರುವ ಅವರ ತಂದೆ ಹಾಗೂ ಮಾವನ ಮನೆಗಳ ಮೇಲೆ ದಾಳಿ ನಡೆದಿದೆ. ಯಲಹಂಕ ವಲಯದ ಬಿಬಿಎಂಪಿ ಪಟ್ಟಣ ಯೋಜನಾ ಕಚೇರಿಯ ಸಹಾಯಕ ನಿರ್ದೇಶಕ ಕಚೇರಿಯ ಕಿರಿಯ ಎಂಜಿನಿಯರ್ ಕೆ ಸುಬ್ರಮಣ್ಯಂ ಅವರ ಸಹಕಾರನಗರದ ನಿವಾಸ ಮತ್ತು ಕಚೇರಿಗಳಲ್ಲಿ ಕುಲದೀಪ್ ಕುಮಾರ್ ಜೈನ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.
Recommended Video
ದಾವಣಗೆರೆಯಲ್ಲಿ ಕೆಎಂ ಪ್ರಥಮ್
ದಾವಣಗೆರೆ ವಿಭಾಗದ ಫ್ಯಾಕ್ಟರೀಸ್ ಮತ್ತು ಬಾಯ್ಲರ್ಸ್ ಉಪ ನಿರ್ದೇಶಕ ಕೆಎಂ ಪ್ರಥಮ್ ಅವರಿಗೆ ಸೇರಿದ ಬೆಂಗಳೂರಿನ ಸಂಜಯನಗರದ ನಾಗಶೆಟ್ಟಿಹಳ್ಳಿನ ನಿವಾಸ, ಸಂಜಯನಗರದಲ್ಲಿರುವ ಅವರ ಸಹೋದರನ ನಿವಾಸ ಹಾಗೂ ದಾವಣಗೆರೆಯ ಕಚೇರಿಗಳಲ್ಲಿ ಎಸ್ಪಿ ಜಯಪ್ರಕಾಶ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗಿದೆ.