ರಾಜ್ಯದಲ್ಲಿ ಮಳೆ ಅಭಾವ: ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸಿಎಂಗೆ ಎಎಪಿ ಪತ್ರ
ಬೆಂಗಳೂರು, ಆಗಸ್ಟ್ 20: ರಾಜ್ಯದಲ್ಲಿ ಸಮಯೋಚಿತ ಮಳೆ ಕೊರತೆ ತಲೆದೋರಿದ್ದು, ಈಗಾಗಲೇ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಈ ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ನೆರೆಯ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ನಡೆಸಬೇಕು ಹಾಗೂ ಸರ್ವಪಕ್ಷಗಳ ನಿಯೋಗವನ್ನು ಪ್ರಧಾನಿಯನ್ನು ಭೇಟಿ ಮಾಡಲು ಕಳುಹಿಸಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ರಾಜ್ಯದ ಜಲಸಂಪನ್ಮೂಲದ ವಾಸ್ತುಸ್ಥಿತಿ ಅರಿಯುವ ನಿಟ್ಟಿನಲ್ಲಿ ಹಾಗೂ ನೀರಿನ ಅಭಾವವನ್ನು ನಿವಾರಿಸುವ ಕಾರ್ಯಯೋಜನೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧ್ಯಕ್ಷತೆಯಲ್ಲಿ ಸರ್ವಪಕ್ಷ ಸಭೆ ಕರೆಯಬೇಕು ಎಂದು ಪಕ್ಷದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಅವರು ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಸರ್ವೋಚ್ಛ ನ್ಯಾಯಾಲಯದ ಮುಂದೆ ಕಾವೇರಿ ನದಿ ನೀರು ವಿಚಾರವಾಗಿ ಕರ್ನಾಟಕದ ಪರವಾಗಿ ನ್ಯಾಯ ಮಂಡಿಸಿದ ಹಿರಿಯ ವಕೀಲರು ಎಎಪಿ ಪಕ್ಷದಲ್ಲಿ ಇದ್ದಾರೆ. ಸರ್ವಪಕ್ಷ ಸಭೆ ಹಾಗೂ ನಿಯೋಗದಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಲು ಸಿದ್ಧರಿದ್ದಾರೆ ಎಂದು ಪತ್ರದಲ್ಲಿ ಮು.ಚಂದ್ರು ಅವರು ಉಲ್ಲೇಖಿಸಿದ್ದಾರೆ.
ಕನ್ನಡ ನಾಡು, ನುಡಿ, ಗಡಿ, ಜಲ ಸಂಪನ್ಮೂಲ ವಿಚಾರವಾಗಿ ಅನೇಕ ಹೋರಾಟ ನೆಡಸಿರುವ ಮುಖಂಡರುಗಳು, ಕಾವೇರಿ ಜಲ ವಿವಾದ ನ್ಯಾಯಮಂಡಳಿ ಮುಂದೆ ಹಾಗು ನೀರು ಹಂಚಿಕೆ ವಿವಾದದಗಳ ಮೊಕದ್ದಮೆಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಂದೆ ಕರ್ನಾಟಕದ ಪರವಾಗಿ ನ್ಯಾಯ ಮಂಡಿಸಿದ ಹಿರಿಯ ವಕೀಲರಗಳು ಆಮ್ ಆದ್ಮ ಪಾರ್ಟಿಯಲ್ಲಿದ್ದು ಈ ಸಭೆ ಹಾಗು ನಿಯೋಗಗಳಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ಕೊಡಲು ಸಿದ್ಧರಿದ್ದೇವೆ ಎಂದು ನಿಮ್ಮ ಗಮನಕ್ಕೆ ತರಲು ಬಯಸುತ್ತೇನೆ. ರಾಷ್ಟ್ರೀಯ ಪಕ್ಷವಾಗಿ ರಾಜ್ಯ ಸರಕಾರಕ್ಕೆ ಸಮಯೋಚಿತವಾಗಿ ಸಲಹೆ ಸೂಚನೆ ಕೊಡುವುದು ನಮ್ಮ ಕರ್ತವ್ಯ ಎಂದು ಎಎಪಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.












Click it and Unblock the Notifications