ಮೈಸೂರಿನ 11 ಕ್ಷೇತ್ರದಲ್ಲೂ ಸ್ಪರ್ಧಿಸಲಿದೆ ಆಮ್ ಆದ್ಮಿ ಪಕ್ಷ
ಮೈಸೂರು, ಮಾರ್ಚ್ 21: ಸಾಂಸ್ಕೃತಿಕ ನಗರಿಯಲ್ಲಿ ಬಿಸಿಲಿನ ಝಳದೊಂದಿಗೆ ಚುನಾವಣಾ ಕಾವು ಕೂಡ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಸ್ಥಳೀಯ ಜೆಡಿಎಸ್ ನೊಂದಿಗೆ ಠಕ್ಕರ್ ಕೊಡಲು 11 ಪಕ್ಷಗಳಲ್ಲಿ ಸ್ಪರ್ಧಿಸಲು ಪೊರಕೆ ಹಿಡಿದು ಆಪ್ ಸಜ್ಜಾಗಿದೆ. ಈಗಾಗಲೇ ಚಾಮರಾಜ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿರುವ ಸಾಫ್ಟ್ ವೇರ್ ಎಂಜಿನಿಯರ್ ಮಾಲವಿಕ ಗುಬ್ಬಿವಾಣಿ ಪ್ರಚಾರ ಕಾಯಕದಲ್ಲಿ ತೊಡಗಿದ್ದಾರೆ.
ಟಿಕೆಟ್ ನೀಡಲು ನಾಲ್ಕು ಮಾನದಂಡ ರೂಪಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷದ ರಾಜ್ಯ ಸಮಿತಿ ಮುಂದಾಗಿದೆ. ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ವೀಕ್ಷಕ ಪಂಕಜ್ ಗುಪ್ತ, ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಸಹ ಸಂಚಾಲಕ, ಮೈಸೂರು ಉಸ್ತುವಾರಿ ಶಿವಕುಮಾರ್ ಚೆಂಗಲರಾಯ ಹಾಗೂ ಸಮಿತಿ ಸದಸ್ಯರು ಅಭ್ಯರ್ಥಿಗಳ ಅರ್ಜಿ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಅಭ್ಯರ್ಥಿ ಮೇಲೆ ಭ್ರಷ್ಟಾಚಾರದ ಆರೋಪ, ಕ್ರಿಮಿನಲ್ ಮೊಕದ್ದಮೆ ಇರಬಾರದು. ಕೋಮುವಾದದಲ್ಲಿ ತೊಡಗಿರಬಾರದು. ಮಹಿಳೆಯರ ಬಗ್ಗೆ ಗೌರವ ಹೊಂದಿರಬೇಕು. ಯಾವುದೇ ದೂರು ಇರಬಾರದು. ಇಂತಹವರನ್ನು ಟಿಕೆಟ್ ನೀಡಲು ಪರಿಗಣಿಸಲಾಗುತ್ತದೆ. ಯುವಕರಿಗೆ ಆದ್ಯತೆ ನೀಡಲಾಗುವುದು ಎಂದು ಪಕ್ಷದ ಮಾಧ್ಯಮ ಸಂಚಾಲಕ ವಿದ್ಯಾರಣ್ಯ ತಿಳಿಸುತ್ತಾರೆ. ಸದ್ಯ ಚಾಮರಾಜ ಕ್ಷೇತ್ರದ ಅಭ್ಯರ್ಥಿ ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಮಾಲವಿಕ ಪ್ರಚಾರ ರಂಭಿಸಿದ್ದಾರೆ. ನಮ್ಮಲ್ಲೂ ರಾಜ್ಯ, ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರಕ್ಕೆಂದು ಪ್ರತ್ಯೇಕವಾಗಿ ಪ್ರಣಾಳಿಕೆ ತಯಾರಿಸಲಾಗುತ್ತಿದೆ. ಅಭ್ಯರ್ಥಿಗಳೂ ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಪ್ರಣಾಳಿಕೆ ಸಿದ್ದಪಡಿಸುತ್ತಾರೆ ಎನ್ನುತ್ತಾರೆ ವಿದ್ಯಾರಣ್ಯ.

ಘಟಾನುಘಟಿಗಳ ನಡುವೆ ಗೆಲ್ಲುತ್ತಾರಾ ಮಾಲವಿಕ ?
ಎಂಜಿನಿಯರಿಂಗ್ ಪಧವೀದರೆ ಮಾಲವಿಕ ಅವರು ಇನ್ಫೋಸಿಸ್ ಮಾಜಿ ಉದ್ಯೋಗಿ. ಸಾಫ್ಟ್ವೇರ್ ಎಂಜಿನಿಯರ್ ಆಗಿ 15 ವರುಷ ಕೆಲಸ ಮಾಡಿರುವ ಇವರಿಗೆ ಸಮಾಜಸೇವೆಯಲ್ಲಿ ಆಸಕ್ತಿ ಹೆಚ್ಚು. ಚುನಾವಣೆ ವೆಚ್ಚಕ್ಕಾಗಿ ಅವರೀಗ ಜನರಿಂದಲೇ ದೇಣಿಗೆ ಸಂಗ್ರಹಿಸಲು ಮುಂದಾಗಿದ್ದಾರೆ. ಅದಕ್ಕಾಗಿ ಅವರು ಕ್ಷೇತ್ರದಲ್ಲಿ ಕರಪತ್ರ ಹಂಚುತ್ತಿದ್ದಾರೆ.

ವ್ಯವಸ್ಥೆ ಬಗ್ಗೆ ಗೊಣಗುತ್ತಿರುವ ಯಾರಾದರೂ ವ್ಯವಸ್ಥೆಯನ್ನು ತಿದ್ದಬೇಕು. ಆದರೆ ಅದನ್ನು ಯಾರು ಮಾಡುತ್ತಿಲ್ಲ. ನಾನು ಆ ನಿಟ್ಟಿನಲ್ಲಿ ಪ್ರಯತ್ನ ಮಾಡೋಣವೆಂದು ರಾಜಕೀಯಕ್ಕೆ ಬಂದಿದ್ದೇನೆ. ಅದಕ್ಕೆ ಆಮ್ ಆದ್ಮಿ ಪಕ್ಷ ವೇದಿಕೆ ನೀಡಿದೆ. ಗೆಲ್ಲುವ ಹಂಬಲವಿದೆ ಎನ್ನುತ್ತಾರೆ ಮಾಲವಿಕ. ಒಟ್ಟಾರೆ ಅದೇನೇ ಇರಲಿ ಚುನಾವಣೆಯಲ್ಲಿ ಜನಬೆಂಬಲ ಮ್ ಆದ್ಮಿಯ ಕೈ ಹಿಡಿಯುತ್ತದೆಯಾ ಕಾದು ನೋಡಬೇಕಿದೆ. ದೆಹಲಿಯ ಹವಾ ರಾಜ್ಯದಲ್ಲಿನ ಕಾರ್ಯಕರ್ತರು ಹೇಗೆ ಮೂಡಿಸುತ್ತಾರೆ ಎಂಬುದು ಎಲ್ಲರ ಮುಂದಿರುವ ಕುತೂಹಲ.












Click it and Unblock the Notifications