ಯಡಿಯೂರಪ್ಪನವರ ಬೆಂಗಳೂರು ನಗರ ವೀಕ್ಷಣೆ ಕೇವಲ ಪುಗಸಟ್ಟೆ ಪ್ರಚಾರಕ್ಕಾಗಿ
ಬೆಂಗಳೂರು, ನವೆಂಬರ್ 02: 40% ಕಮಿಷನ್ ಆಸೆಗಾಗಿ ಬೆಂಗಳೂರಿಗರ ಜೀವದ ಜೊತೆ ಚೆಲ್ಲಾಟವಾಡಿ, ಈಗ ಪುಗಸಟ್ಟೆ ಪ್ರಚಾರಕ್ಕಾಗಿ ಯಡಿಯೂರಪ್ಪನವರು ಬೆಂಗಳೂರು ನಗರ ವೀಕ್ಷಣೆ ಮಾಡಲು ಹೊರಟಿರುವುದು ನಿಜಕ್ಕೂ ಅಸಹ್ಯಕರ ಸಂಗತಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, 2019ರಲ್ಲಿ ಆಪರೇಷನ್ ಕಮಲದಿಂದ ರಚನೆಯಾದ ಬಿಜೆಪಿ ಅನೈತಿಕ ಸರ್ಕಾರದ ಕಾಲಾವಧಿಯಲ್ಲಿ ಬೆಂಗಳೂರಿನ ರಸ್ತೆ ಗುಂಡಿಗಳಿಂದಾಗಿ ನೂರಾರು ಬೆಂಗಳೂರಿಗರು ಬಲಿಯಾದದ್ದು ನಿಜಕ್ಕೂ ದುರಂತದ ಸಂಗತಿ. ಇವರ 40% ಕಮಿಷನ್ ಆಸೆಗಾಗಿ ಬೆಂಗಳೂರಿಗರ ಜೀವದ ಜೊತೆ ಚೆಲ್ಲಾಟವಾಡಿ, ಈಗ ಪುಗಸಟ್ಟೆ ಪ್ರಚಾರಕ್ಕಾಗಿ ಯಡಿಯೂರಪ್ಪನವರು ಬೆಂಗಳೂರು ನಗರ ವೀಕ್ಷಣೆ ಮಾಡಲು ಹೊರಟಿದ್ದಾರೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಬೆಂಗಳೂರಿನ ರಸ್ತೆಗಳ ಸುಧಾರಣೆಗಾಗಿ 20,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೇವೆಂದು ಅಂದು ಸದನಕ್ಕೆ ತಿಳಿಸಿದ್ದರು. ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ತೀವ್ರವಾಗಿ ಪರಿಗಣಿಸಿ ಆಮ್ ಆದ್ಮಿ ಪಕ್ಷವು ರಸ್ತೆ ರಸ್ತೆಗಳಲ್ಲಿ ತೀವ್ರ ಹೋರಾಟವನ್ನು ನಡೆಸಿತ್ತು. ಅನೇಕ ಕೇಸುಗಳನ್ನು ಸಹ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಬಿಜೆಪಿ ಸರ್ಕಾರ ನೂರಾರು ಕೇಸುಗಳನ್ನು ಜಡಿದಿದ್ದರು.
ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ವೈಟ್ ಟ್ಯಾಪಿಂಗ್ ಮತ್ತು ಬ್ಲಾಕ್ ಟ್ಯಾಪಿಂಗ್ ಎಂದು ಹೇಳಿಕೊಂಡು ಸಾವಿರಾರು ಕೋಟಿ ರೂಪಾಯಿಗಳನ್ನು ಲೂಟಿ ಮಾಡಿ, 4ಜಿ ವಿನಾಯತಿಯ ಹೆಸರಿನಲ್ಲಿ
ಕೆ ಆರ್ ಐ ಡಿ ಎಲ್ ಸಂಸ್ಥೆಯನ್ನು ತಮ್ಮ ಎಟಿಎಂನ್ನಾಗಿ ಬಳಸಿಕೊಂಡ ಬಿಜೆಪಿ ಮಂತ್ರಿಗಳು - ಶಾಸಕರುಗಳು ಅಂದು ನೂರಾರು ಅಮಾಯಕರನ್ನು ಬಲಿ ತೆಗೆದುಕೊಂಡಿದ್ದರು.
ರಸ್ತೆಗೆ ಬಲಿಯಾದ ಅಮಾಯಕರ ಮನೆಗಳಿಗೆ ಮಂತ್ರಿ ಮಹೋದಯಗಳು ಭೇಟಿ ನೀಡಿ ಸಾಂತ್ವನ ಹೇಳುವುದು ಇರಲಿ ಅಲ್ಲಿನ ಸ್ಥಳೀಯ ಶಾಸಕರು ಸಹ ಅವರನ್ನು ಭೇಟಿ ಮಾಡದೆ ತಮ್ಮ ಭಂಡತನವನ್ನು ಪ್ರದರ್ಶಿಸಿದ್ದರು. ಇವರ ಬದುಕು ಇಂದು ಮೂರಾಬಟ್ಟೆಯಾಗಿದೆ. ಇವರಿಗೆ ನಯಾ ಪೈಸಾ ಪರಿಹಾರ ಕೊಡದ ಬಿಜೆಪಿ ನಾಯಕರುಗಳು ಯಡಿಯೂರಪ್ಪನವರ ನೇತೃತ್ವದಲ್ಲಿ ಯಾವ ಮುಖ ಇಟ್ಟುಕೊಂಡು ಬೆಂಗಳೂರು ವೀಕ್ಷಣೆಗೆ ಹೊರಟಿದ್ದಾರೆ ಗೊತ್ತಿಲ್ಲ ಎಂದು ಮೋಹನ್ ದಾಸರಿ ಟೀಕಿಸಿದರು.












Click it and Unblock the Notifications