ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ
ಬೆಂಗಳೂರು, ಅಕ್ಟೋಬರ್ 10 : ಆಮ್ ಆದ್ಮಿ ಪಕ್ಷ ಅಕ್ಟೋಬರ್ 13ರಿಂದ 17ರ ತನಕ 'ಲಂಚ ಮುಕ್ತ ಕರ್ನಾಟಕ' ಎಂಬ ಅಭಿಯಾನವನ್ನು ಆರಂಭಿಸಲಿದೆ. ಶನಿವಾರ ಅಭಿಯಾನಕ್ಕೆ ಪೂರಕವಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಶನಿವಾರ ಬೆಂಗಳೂರಿನಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಸಹಾಯವಾಣಿಗೆ ಚಾಲನೆ ನೀಡಿದರು. ಅಕ್ಟೋಬರ್ 13ರ ಮಂಗಳವಾರದಿಂದ 17ರ ತನಕ 'ಲಂಚಮುಕ್ತ ಬೆಂಗಳೂರು ಸಪ್ತಾಹ' ವನ್ನು ಆಮ್ ಆದ್ಮಿ ಪಕ್ಷ ಹಮ್ಮಿಕೊಂಡಿದೆ. [ಎಎಪಿಯಿಂದ ಲಂಚಮುಕ್ತ ಕರ್ನಾಟಕ ಅಭಿಯಾನ]

ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುತ್ತಿದ್ದರೆ, ಕೆಲಸ ಮಾಡಿಕೊಡಲು ಸತಾಯಿಸುತ್ತಿದ್ದರೆ ಜನರು
9342522223 ನಂಬರ್ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಪಕ್ಷದ ಕಾರ್ಯಕರ್ತರು ಸರ್ಕಾರಿ ಕಚೇರಿಗಳ ಬಳಿ ತೆರಳಿ ಲಂಚ, ಕಿರುಕುಳಗಳಿಲ್ಲದ ರೀತಿಯಲ್ಲಿ ಕೆಲಸ ಮಾಡಿಕೊಡುವಂತೆ ನೋಡಿಕೊಳ್ಳಲಿದ್ದಾರೆ. [ನೂರು ರೂ. ಲಂಚಪಡೆದವನಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ]
'ಪಕ್ಷದ ಕಚೇರಿಗೆ ಮತ್ತು ಕಾರ್ಯಕರ್ತರಿಗೆ ರಾಜ್ಯದ ವಿವಿಧ ಭಾಗಗಳಿಂದ ಲಂಚ ಮತ್ತು ಭ್ರಷ್ಟಾಚಾರದ ವಿಚಾರವಾಗಿ ಕರೆಗಳು ಬರುತ್ತಿರುತ್ತಿವೆ. ಸ್ಥಳೀಯ ಲೋಕಾಯುಕ್ತಕ್ಕೆ ತಿಳಿಸಿ ಎಂದರೆ ಲೋಕಾಯುಕ್ತ ಎಲ್ಲಿದೆ? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ ಆದ್ದರಿಂದ ಈ ಅಭಿಯಾನ ಆರಂಭಿಸಲಾಗುತ್ತಿದೆ' ಎಂದು ರವಿಕೃಷ್ಣಾ ರೆಡ್ಡಿ ಹೇಳಿದರು.

ಈ ಅಭಿಯಾನ ಯಾವುದೇ ಸರ್ಕಾರಿ ಅಧಿಕಾರಿಗಳ ವಿರುದ್ಧವಾಗಲಿ, ಒಂದು ರಾಜಕೀಯ ಪಕ್ಷದ ವಿರುದ್ಧವಾಗಲಿ ಮಾಡುತ್ತಿರುವ ಚಳವಳಿ ಅಲ್ಲ. ಇದು ಒಟ್ಟಾರೆ ಭ್ರಷ್ಟ ವ್ಯವಸ್ಥೆಯ ವಿರುದ್ಧ ಆಮ್ ಆದ್ಮಿ ಪಕ್ಷ ಜನರೊಂದಿಗೆ ಸೇರಿ ಮಾಡುತ್ತಿರುವ ಸಂಘಟಿತ ಹೋರಾಟವಾಗಿದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.












Click it and Unblock the Notifications