ಅಡುಗೆ ಅನಿಲಕ್ಕೆ ಆಧಾರ್ ಬೇಕಾ? ಜನತೆಗೆ ಸಚಿವರ ಸ್ಪಷ್ಟನೆ

ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡುತ್ತಿದ್ದ ಸಚಿವರು, ರಾಜ್ಯದ ಜನತೆಗೆ ಒಂದು ವಿಷಯವನ್ನು ಸ್ಪಷ್ಟ ಪಡಿಸುತ್ತೇವೆ. ಆಧಾರ್ ಕಾರ್ಡ್ ಮತ್ತು ಅಡುಗೆ ಅನಿಲ ನೀತಿ ಏನಿದ್ದರೂ ಕೇಂದ್ರ ಸರಕಾರದ್ದು.
ಇದರಲ್ಲಿ ರಾಜ್ಯ ಸರಕಾರ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಈಗಾಗಲೇ ಕೇಂದ್ರ ಇಂಧನ ಸಚಿವ ವೀರಪ್ಪ ಮೊಯ್ಲಿಯವರು ಅಡುಗೆ ಅನಿಲ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. (ಇಂಧನ ಸಚಿವರೇ ಏನ್ರೀ ಇದು ಆಧಾರ್,ಎಲ್ಪಿಜಿ ಕಿರಿಕಿರಿ)
ಗ್ರಾಹಕರಿಗೆ ಆಧಾರ್ ಕಾರ್ಡ್ ಬಗ್ಗೆ ಸಂದೇಶ ಬರುತ್ತಿರುವ ವಿಷಯವು ನಮ್ಮ ಗಮನಕ್ಕೆ ಬಂದಿದೆ. ನಮ್ಮ ರಾಜ್ಯವೂ ಸೇರಿದಂತೆ ದೇಶದ ಹೆಚ್ಚಿನ ರಾಜ್ಯಗಳಲ್ಲಿ ಗ್ರಾಹಕರಿಗೆ ಗೊಂದಲವಿರುವುದು ನಿಜ. ಪೆಟ್ರೋಲಿಯಂ ಸಚಿವಾಲಯ ಇದರ ಬಗ್ಗೆ ಸರಿಯಾದ ನಿರ್ಧಾರ ತೆಗೆದು ಕೊಳ್ಳಲಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬಿಜೆಪಿಯ ರಾಮಚಂದ್ರ ಗೌಡ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸುತ್ತಿದ್ದ ಸಚಿವರು, ಸಬ್ಸಿಡಿ ಹಣ ಪಡೆಯಲು ತೊಂದರೆ ಅನುಭವಿಸುತ್ತಿರುವವರು ಗ್ರಾಹಕರ ನ್ಯಾಯಾಲದಲ್ಲಿ ದೂರು ಸಲ್ಲಿಸ ಬಹುದೆಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಮ್ಮ ಸರಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯಲ್ಲಿ ಲೋಪದೋಷ ಎದುರಾಗಬಾರದು ಎನ್ನುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದೇವೆ. ಸರಕಾರದ ಯೋಜನೆಗೆ ಅಡ್ದಿ ಪಡಿಸುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರಕಾರ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.












Click it and Unblock the Notifications