5 ಮನೆಗೆ ಕನ್ನ ಹಾಕಿದ್ದ ಖತರ್ನಾಕ್ ಕಳ್ಳನ ಬಂಧನ
ಕಾರವಾರ, ಅಕ್ಟೋಬರ್ 12: ತಾಲ್ಲೂಕಿನ ಕದ್ರಾ ಭಾಗದ ಐದು ಮನೆಗಳಲ್ಲಿ ಕಳ್ಳತನ ನಡೆಸಿ, ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದ ಖತರ್ನಾಕ್ ಕಳ್ಳ ಸಂಜಯ ಪಾಟೀಲನನ್ನು ಕದ್ರಾ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಲ್ಲಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯ ಗಾಂಧಿನಗರದಲ್ಲಿ ಮನೆ ಕಳ್ಳನತ, ಕುರ್ನಿಪೇಟ್ ಹೆಗಡೆ ಏಜೆನ್ಸಿಯಲ್ಲಿ ಮೊಬೈಲ್ ಕನ್ನತನ ಪ್ರಕರಣ, ಕೆರವಡಿ ಹಾಗೂ ಇರ್ಫಾಗಿ ಎನ್ನುವಲ್ಲಿನ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನ ಬಂಧನಕ್ಕೆ ಬಲೆ ಬೀಸಿದ್ದರು.

ಇತ್ತೀಚೆಗೆ ತನ್ನ ಬೈಕ್ ಬಳಸಿಕೊಂಡು ತನ್ನ ಮನೆಯ ಪಕ್ಕದ ದತ್ತಾತ್ರೆಯ ನಾಯ್ಕ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿದ್ದ. ರಾಜೇಶ ಎನ್ನುವವರ ಮನೆಯ ಅಡುಗೆ ಕೋಣೆಯ ಮೇಲ್ಚಾವಣಿ ಹಂಚು ತೆಗೆದು ಬಂಗಾರದ ಕಿವಿಯೋಲೆ ಸೇರಿದಂತೆ ಎರಡು ಬಂಗಾರದ ಸರ, ನಾಲ್ಕ ಸಾವಿರ ನಗದು ಸೇರಿ ಒಟ್ಟೂ 24 ಸಾವಿರ ರೂ. ಮೊತ್ತನ್ನು ದೋಚಿದ್ದ.
ಮಲ್ಲಿಕಾ ಭೋವಿ ಎನ್ನುವವರ ಮನೆಬಾಗಿಲನ್ನು ಮುರಿದು ಕಪಾಟಿನಲ್ಲಿದ್ದ ಬಂಗಾರದ ಸರ, ನಕ್ಲೇಸ್, ಕಿವಿಯೊಲೆ ಸೇರಿದಂತೆ ಇನ್ನಿತರ ಚಿನ್ನದ ಆಭರಣ ಹಾಗೂ 40 ಸಾವಿರ ರೂ. ನಗದು ಕದ್ದು ಪರಾರಿಯಾಗಿದ್ದ.
ಇದೇ ಅವಧಿಯಲ್ಲಿ ಮಲ್ಲಾಪುರದ ನಿವಾಸಿ ಅರುಣ ಕುಮಾರ ಹೆಗಡೆ ಎನ್ನುವವರ ಮೊಬೈಲ್ ಅಂಗಡಿಯ ಹಿಂಭಾಗದ ಬಾಗಿಲು ಮುರಿದು 33,615 ರೂ. ಮೌಲ್ಯದ ಒಟ್ಟೂ 6 ಮೊಬೈಲ್ ಹಾಗೂ 10,600 ನಗದು ಕದ್ದಿದ್ದ. ಅದರಂತೆ ಕೈಗಾದ ಬಾಬುರಾವ್ ರಾಯ್ ಎನ್ನುವವರ ಮನೆಯಲ್ಲಿ ಎರಡು ಬಂಗಾರದ ಮಂಗಲಸೂತ್ರ, ಒಂದು ನೆಕ್ಲೆಸ್, ಒಂದು ಚೈನ್, ಎರಡು ಬಳೆ, ಐದು ಉಂಗುರ ಸೇರಿದಂತೆ ಒಟ್ಟೂ 3.40 ಲಕ್ಷ ನಗದು ಕದ್ದ ಬಗ್ಗೆ ಮಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಕಳ್ಳನನ್ನು ಪತ್ತೆ ಹಚ್ಚಿರುವ ಪೊಲೀಸರು ಆತನಿಂದ 6 ಲಕ್ಷ ರೂ. ಮೌಲ್ಯದ 250ಗ್ರಾಂ ಬಂಗಾರ, ಒಂದು ಕಾರು ಹಾಗೂ ಮೊಬೈಲ್ ವಶಕ್ಕೆ ಪಡೆದುಕೊಂಡಿದ್ದಾರೆ.












Click it and Unblock the Notifications