ರೈತರಿಗೆ ಗುಡ್ ನ್ಯೂಸ್: "7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಗುರಿ ನಿಗದಿ"
ಬೆಳಗಾವಿ: ರಾಜ್ಯದ ಎಥೆನಾಲ್ ಹಾಗೂ ಡಿಸ್ಟಲರಿ ಕಾರ್ಖಾನೆಗಳಿಂದ ಬೆಂಬಲ ಬೆಲೆಯಡಿ 7 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಸಲು ಗುರಿ ನಿಗಿದ ಮಾಡಲಾಗಿದೆ ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಶಾಸಕರುಗಳಾದ ಎನ್.ಹೆಚ್.ಕೋನರೆಡ್ಡಿ ಹಾಗೂ ಬಸವರಾಜ ಶಿವಗಂಗಾ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಅವರು ಮಾತನಾಡಿದರು. ಸರ್ಕಾರದ ಮಧ್ಯಪ್ರವೇಶದಿಂದ ಮೆಕ್ಕೆಜೋಳದ ಮಾರುಕಟ್ಟೆ ದರ ಪ್ರತಿ ಟನ್ಗೆ ರೂ.1600 ರಿಂದ ರೂ.2,170 ಗಳಿಗೆ ಹೆಚ್ಚಳವಾಗಿದೆ.

ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರದಲ್ಲಿ ಮೆಕ್ಕೆಜೋಳದ ದರ ರಾಜ್ಯಕ್ಕಿಂತ ಕಡಿಮೆಯಿದೆ. ಆದರೆ ಉತ್ತರ ಪ್ರದೇಶದಲ್ಲಿ ಉತ್ತಮ ದರವಿದೆ. ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಸುಧಾರಿಸುವ ನಿರೀಕ್ಷೆಯಿದೆ. ಸರ್ಕಾರ ಎಥನಾಲ್ ಹಾಗೂ ಡಿಸ್ಟಲರಿ ಕಾರ್ಖಾನೆಗಳು, ಪೌಲ್ಟ್ರೀ ಜೊತೆಗೆ ಕೆ.ಎಂ.ಎಫ್ ನಿಂದಲೂ ಬೆಂಬಲ ಬೆಲೆಯಡಿ ಮೆಕ್ಕೆಜೋಳ ಖರೀದಿ ಮಾಡುತ್ತಿದೆ. ಕೆ.ಎಂ.ಎಫ್ ಗೆ ಇನ್ನೂ ಹೆಚ್ಚಿನ ಮೆಕ್ಕೆಜೋಳ ಖರೀದಿಸಲು ನಿರ್ದೇಶನ ನೀಡಲಾಗುವುದು. ಮಯನ್ಮಾರ್ ದೇಶಕ್ಕೆ ಮೆಕ್ಕೆಜೋಳ ಆಮದು ಮಾಡಿಕೊಳ್ಳುತ್ತಿರುವುದ ಸಹ ಬೆಲೆ ಕಡಿಮೆಯಾಗಲು ಒಂದು ಕಾರಣವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದರು.
ಧಾರವಾಡ ಜಿಲ್ಲೆಯಲ್ಲಿ 50,000 ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಳೆದಿದ್ದಾರೆ. ಸರ್ಕಾರ ಕೆ.ಎಂ.ಎಫ್ಗೆ 730 ಮೆಟ್ರಿಕ್ ಟನ್ ಖರೀದಿ ಮಾತ್ರ ಗುರಿ ನಿಗದಿಪಡಿಸಿದೆ. ಇದನ್ನು ಹೆಚ್ಚಿಸಬೇಕು. ಖಾಸಗಿ ಮಾರುಕಟ್ಟೆಯಲ್ಲಿ ಪ್ರತಿಟನ್ಗೆ ರೂ.1600 ರಿಂದ ರೂ.1,800 ಗಳನ್ನು ದೊರಕುತ್ತಿದ್ದು ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಶಾಸಕ ಕೋನರೆಡ್ಡಿ ಹೇಳಿದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುವ ರೈತರಿದ್ದಾರೆ. ಸರ್ಕಾರ ಇವರ ಹಿತಕಾಪಡಬೇಕು ಎಂದು ಶಾಸಕ ಬಸವರಾಜ ಶಿವಗಂಗಾ ಅವರು ಮನವಿ ಮಾಡಿದರು.












Click it and Unblock the Notifications