'ನಾನೂ ಸಿಎಂ' ಅಖಾಡಕ್ಕೆ ಬಂದ 'ಮಹಿಳಾ ಸಿಎಂ', ಯಾರು ಗೊತ್ತಾ?
ರಾಜ್ಯ ಕಾಂಗ್ರೆಸ್ನಲ್ಲಿ ಈಗಾಗಲೇ ಸಿಎಂ ಸ್ಥಾನವನ್ನು ಸಿದ್ದರಾಮಯ್ಯ ಅಲಂಕರಿಸಿದ್ದಾಗಿದೆ. ಇದಾಗಿಯೂ ನಾನು ಕೂಡ ಸಿಎಂ ಆಗುತ್ತೇನೆ ಎಂದು ಕ್ಯೂನಲ್ಲಿ ನಿಂತಿರುವ ನಾಯಕರು ಒಬ್ಬಿಬ್ಬರಲ್ಲ. ಮೊದಲಾದರೆ ನಾಲ್ಕೈದು ಮಂದಿ ಅಷ್ಟೇ ಸಿಎಂ ರೇಸ್ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಎರಡು ವಾರಗಳಿಂದ ಕಾಂಗ್ರೆಸ್ನಲ್ಲಿ ಬಹುತೇಕರು ನಾನು ಕೂಡ ಸಿಎಂ ಆಗಿಬಿಡುವೆ ಎಂದು ಹೇಳುತ್ತಲೇ ಇದ್ದಾರೆ. ಒಂದು ರೀತಿ ಟೋಕನ್ ಪಡೆದಂತೆ ಮುಂದಿನ ಸಿಎಂ ನಾನೇ ಆಗುತ್ತೇನೆ ಎಂತಲೂ ಕುರ್ಚಿ ಮೇಲೆ ಕರ್ಚೀಫ್ ಹಾಕುತ್ತಿದ್ದಾರೆ.
ಇಲ್ಲಿಯವರೆಗೆ ಪುರುಷರು ಸಿಎಂ ರೇಸ್ನಲ್ಲಿದ್ದರು. ಆದರೆ ಇದೀಗ ಮಹಿಳಾ ಸಿಎಂ ಎನ್ನುವ ಮತ್ತೊಂದು ಬಿರುಗಾಳಿ ಎದ್ದಿದೆ. ಪುರುಷರಿಗೆ ಸೆಡ್ಡು ಹೊಡೆಯುವಂತೆ ಮಹಿಳಾ ಸಿಎಂ ಕೂಗು ಕೂಡ ಜೋರಾಗಿ ಕೇಳಿಬರುತ್ತಿದೆ. ಇದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ಮಹಿಳಾ ಸಿಎಂ ಆಕಾಂಕ್ಷಿ ಯಾರಪ್ಪಾ? ಎಂದು ಬೆರಗಾಗಿ ನೋಡುವಂತಾಗಿದೆ.

ಇಷ್ಟಕ್ಕೂ ಇಲ್ಲಿ ನಾನೂ ಸಿಎಂ ಆಗುತ್ತೇನೆ ಎಂದು ಯಾವುದೇ ನಾಯಕರಿಯರು ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಆದರೆ, ರಾಜ್ಯಕ್ಕೆ ಮಹಿಳಾ ಸಿಎಂ ಬೇಕು ಎನ್ನುವ ಅಭಿಯಾನ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಅದರಲ್ಲೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ಬಗ್ಗೆ ಒಂದು ಅಭಿಯಾನವೇ ಶುರುವಾಗಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳ್ಕರ್, ರಾಜ್ಯಕ್ಕೆ ಮಹಿಳಾ ಸಿಎಂ ಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಆರಂಭಿಸಿದ್ದರೆ ಅದು ಸದ್ಯಕ್ಕೆ ಮಹತ್ವದ ವಿಚಾರವೇನಲ್ಲ. ಅದಕ್ಕೆ ನಾನು ಒಪ್ಪುವುದೂ ಇಲ್ಲ ಎಂದಿದ್ದಾರೆ. ಸಿಎಂ ಯಾರು ಆಗಬೇಕು? ಎನ್ನುವುದು ಬೀದಿ ಬೀದಿಗಳಲ್ಲಿ ಚರ್ಚೆ ಮಾಡುವ ವಿಷಯವಲ್ಲ. ಸದ್ಯ ಸಿದ್ದರಾಮಯ್ಯ ಅವರು ಬಲಿಷ್ಠವಾದ ನಾಯಕರು. ಹೈಕಮಾಂಡ್ ಹೇಳುವವರೆಗೂ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ಬಿಜೆಪಿಯವರು ಸುಳ್ಳು ದಾಖಲೆ ಸೃಷ್ಟಿಸಿ ಮುಡಾ ಹೆಸರಲ್ಲಿ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಶಾಸಕರೆಲ್ಲರೂ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತಿದ್ದೇವೆ. ಅದನ್ನು ಬಿಟ್ಟು ನಾನು ಮಹಿಳಾ ಸಿಎಂ ಆಗಬೇಕು ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಈಗಾಗಲೇ ಸಿಎಂ ಆಗಬೇಕೆನ್ನುವ ಕನಸಿನ ಬಗ್ಗೆ ಹಲವು ನಾಯಕರು ಮಾತನಾಡಿರಬಹುದು. ಆದರೆ ನಾನು ಒಂದು ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿ, ಇಲ್ಲಿ ಪಕ್ಷ ಬಯಸಬೇಕೇ ಹೊರತು ನಾವು ಬಯಸುವುದಲ್ಲ ಎಂದು ಪಕ್ಷದ ನಾಯರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿರುವ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲದಿರುವಾಗ ಮುಂದೆ ಯಾರು ಮುಖ್ಯಮಂತ್ರಿ? ಎನ್ನುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಮತ್ತೊಮ್ಮೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications