ಹಾವೇರಿ: ಕಂಡಕ್ಟರ್ ಗೆ ರಜೆ ಬೇಕಿದ್ರೆ ಡಿಪೋ ಮ್ಯಾನೇಜರ್ ಗೆ ಲಂಚ ಕೊಡ್ಬೇಕಂತೆ
ಹಾವೇರಿ, ಜೂನ್ 28 : ಧಾರವಾಡ ಘಟಕದ ನಿರ್ವಾಹಕರೊಬ್ಬರು ರಜೆ ಕೇಳಿದ್ದಕ್ಕೆ ಬಸ್ ಡಿಪೋ ಮ್ಯಾನೇಜರೊಬ್ಬರು ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದ. ಘಟನೆ ಇನ್ನು ಹಸಿ ಇರುವಾಗಲೇ ರಾಣೆಬೆನ್ನೂರು ಡಿಪೋದಲ್ಲಿ ಮತ್ತೊಂದು ಮೇಲಾಧಿಕಾರಿಗಳ ಕಿರುಕುಳ ನಡೆದಿರುವುದು ಬೆಳಕಿಗೆ ಬಂದಿದೆ.
ತನಗೆ ನ್ಯಾಯಯುತವಾಗಿ ಸಿಗಬೇಕಾದ ರಜೆ ಮಂಜೂರು ಮಾಡಲು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ರಾಣೆಬೆನ್ನೂರು ಡಿಪೋ ಮ್ಯಾನೇಜರ್ ಆರ್.ಎಸ್.ಸಂತೋಷ್ ಅವರು ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ನಿವಾರ್ಹಕ ವೆಂಕಣ್ಣ ಹೊಳಿಯಾಚಿ ಕೋರ್ಟ್ ಮೆಟ್ಟಿಲೇರಿದ್ದಾರೆ.

ಮೇಲಾಧಿಕಾರಿಯ ಧೋರಣೆಯಿಂದ ಬೇಸತ್ತು ತನಗೆ ನ್ಯಾಯ ಕೊಡಿಸುವಂತೆ ಕೋರಿ ವೆಂಕಣ್ಣ ಎನ್ನುವರು ರಾಣೆಬೆನ್ನೂರಿನ 2ನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಾಮಾಣಿಕವಾಗಿ ದುಡಿದರೂ ನಮ್ಮ ಹಕ್ಕಿನ ರಜೆಗಾಗಿ ಮೇಲಾಧಿಕಾರಿಗಳಿಗೆ ಲಂಚ ಕೊಡಬೇಕಾದ ಅನಿವಾರ್ಯತೆ ಸಂಸ್ಥೆಯಲ್ಲಿ ನಿರ್ಮಾಣವಾಗಿದೆ ಎಂದು ಅಸಮದಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ವೆಂಕಣ್ಣ ಮೇಲಾಧಿಕಾರಿಗಳ ವರ್ತನೆಯನ್ನು ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಹಾಗೂ ಡಿವೈಎಸ್ಪಿ ಅನಿಲಕುಮಾರ ಭೂಮರಡ್ಡಿ ಅವರ ಗಮನಕ್ಕೆ ತಂದಿದ್ದರು.
ಆಗ ಇಬ್ಬರೂ ರಾಜಿ ಮಾಡಿಕೊಳ್ಳುವಂತೆ ಸೂಚಿಸಿದ್ದ ಕೋಳಿವಾಡ ಹಾಗೂ ಪೊಲೀಸ್ ಅಧಿಕಾರಿಯೊಬ್ಬರು ಘಟನೆಗೆ ತಾತ್ಕಾಲಿಕವಾಗಿ ತೇಪೆ ಹಚ್ಚಿದ್ದರು.
ಆದರೆ, ಡಿಪೋ ಮ್ಯಾನೇಜರ್ ಸಂತೋಷ್ ಅವರು ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದು, ರಜೆ ಪಡೆಯುವ ಸಂದರ್ಭದಲ್ಲಿ ಲಂಚದ ಹಣಕ್ಕಾಗಿ ಪದೇ ಪದೇ ಬೇಡಿಕೆ ಇಡುತ್ತಿದ್ದಾರೆ.
ಒಂದು ಬಾರಿ ಲಂಚ ಕೇಳುವುದಿಲ್ಲ. ಪ್ರತಿ ತಿಂಗಳು 2 ಸಾವಿರ ರೂಪಾಯಿ ಲಂಚ ಕೊಡಬೇಕು. ಅಂದರೆ. ಮಾತ್ರ ಸಾಕಷ್ಟು ರಜೆ ಮಂಜೂರು ಮಾಡಲಾಗುತ್ತದೆ ಎಂದು ಸಂತೋಷ್ ಅವರು ಹೇಳುತ್ತಿದ್ದಾರೆ. ಈ ಕಾರಣದಿಂದಲೇ ನಾನು ಕೋರ್ಟ್ ಮೆಟ್ಟಿಲೇರಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications