ಕೊರೊನಾ ಬಗ್ಗೆ 30 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯಲ್ಲಿ ಮಾಹಿತಿ!
ಬೆಂಗಳೂರು, ಮಾರ್ಚ್ 6: ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಗತ್ತಿನ ತುಂಬ ಬಗೆ ಬಗೆಯ ವರದಿಗಳು, ಸಂಗತಿಗಳು ಹೊರ ಬರುತ್ತಿವೆ. ಕೊರೊನಾದ ಬಗ್ಗೆ ಹಲವು ವರ್ಷಗಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಸಿನಿಮಾದಲ್ಲಿ ತೋರಿಸಲಾಗಿತ್ತು ಎಂದು ವರದಿಗಳು ಬಂದಿವೆ.
Recommended Video
ಚೀನಾದ ನಂತರ ಭಾರತದಲ್ಲಿ ಕಾಣಿಸಿಕೊಂಡು, ಕರ್ನಾಟಕದ್ದೂ ನಿದ್ದೆಗೆಡಿಸಿರುವ ಕೊರೊನಾ ವೈರಸ್ ಬಗ್ಗೆ ಬರೊಬ್ಬರಿ 30 ವರ್ಷಗಳ ಹಿಂದೆಯೇ ಕನ್ನಡ ಪತ್ರಿಕೆಯೊಂದರಲ್ಲಿ ಮಾಹಿತಿ ನೀಡಿದ್ದು ಈಗ ಸದ್ದು ಮಾಡುತ್ತಿದೆ.
ಜನಪ್ರಿಯ ಕನ್ನಡ ವಾರ ಪತ್ರಿಕೆಯಾದ ಮಂಗಳೂರಿನಿಂದ ಹೊರಡುವ 'ತರಂಗ' ವಾರಪತ್ರಿಕೆಯಲ್ಲಿ ಕೊರೊನಾ ವೈರಸ್ ಬಗ್ಗೆ ಓದುಗರಿಗೆ ಮಾಹಿತಿ ನೀಡಲಾಗಿತ್ತು ಎಂಬ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತರಂಗ ವಾರ ಪತ್ರಿಕೆಯ 1989 ರ ಸಂಚಿಕೆಯಲ್ಲಿ ಕೊರೊನಾ ವೈರಸ್ ಬಗ್ಗೆ ಬರೆಯಲಾಗಿತ್ತು. 1989ರ ಜುಲೈ 16ರ ತರಂಗ ಸಂಚಿಕೆಯಲ್ಲಿ ಕೊಳ್ಳೆಗಾಲ ಶರ್ಮಾ ಎನ್ನುವ ಆಹಾರ ಸಂಸ್ಕರಣಾ ವಿಜ್ಞಾನಿ ಕೊರೊನಾ ಬಗ್ಗೆ ಲೇಖನ ಬರೆದಿದ್ದರು.

ಕೊರೊನಾ ಪ್ರಾಣಿಗಳಲ್ಲಿ ಬದುಕುವುದಿಲ್ಲ
1989 ರ ಜುಲೈ 16ರ ತರಂಗ ಸಂಚಿಕೆಯಲ್ಲಿ ಕೊಳ್ಳೆಗಾಲ ಶರ್ಮಾ ಎನ್ನುವ ಆಹಾರ ಸಂಸ್ಕರಣಾ ವಿಜ್ಞಾನಿ ಈ ಲೇಖನ ಬರೆದಿದ್ದರು. ಕೊರೊನಾ ವೈರಸ್ ಮನುಷ್ಯನ ಹೊರತು ಯಾವುದೇ ಪ್ರಾಣಿಗಳಲ್ಲಿ ಬದುಕುವುದಿಲ್ಲ. ಕೊರೊನಾ ವೈರಸ್ ಎಂಬುದು ಸಂತಾನ ವೃದ್ಧಿ ಮಾಡಬೇಕಾದರೆ ಅದು ಮನುಷ್ಯನ ದೇಹ ಸೇರಲೇಬೇಕು. ಪ್ರತಿರೋಧಕ ಶಕ್ತಿ ಕಡಿಮೆ ಇದ್ದವರನ್ನು ಕೊರೊನಾ ವೈರಸ್ ಬೇಗ ಆಹುತಿ ತೆಗೆದುಕೊಳ್ಳುತ್ತದೆ ಎಂದು ಅದರಲ್ಲಿ ಬರೆಯಲಾಗಿದೆ.

ಕೊರೊನಾ ಎಂಬುದು ವೈರಸ್ಗಳ ಗುಂಪು
ಕೊರೊನಾ ಎಂಬುದು ವೈರಸ್ಗಳ ಗುಂಪು. ಇದೊಂದು ಅತ್ಯಂತ ಮಾರಕ ವೈರಸ್ ಪ್ರಕಾರವಾಗಿದೆ. ಆದರೆ, ಈಗ ಚೀನಾದಲ್ಲಿ ಕಾಣಿಸಿಕೊಂಡಿರುವುದು ನಾವೆಲ್ ಕೊರೊನಾ ವೈರಸ್ ಆಗಿದೆ. ಆದರೆ ಶರ್ಮಾ ಅವರು 30 ವರ್ಷಗಳ ಹಿಂದೆಯೇ ಕೊರೊನಾ ಎಂಬ ವೈರಸ್ ಬಗ್ಗೆ ಲೇಖನ ಬರೆದಿರುವುದು ಈಗ ಕೊರೊನಾ ಎಂಬ ಕಾರಣಕ್ಕೆ ಗಮನ ಸೆಳೆದಿದೆ.

'ಎಂಡ್ ಆಫ್ ಡೇಸ್' ಪುಸ್ತಕದಲ್ಲಿ
ಅಮೆರಿಕ ಮೂಲದ ಬರಹಗಾರ್ತಿ ಸಿಲ್ವಿಯಾ ಬ್ರೌನ್ ಅವರು 2008ರಲ್ಲಿ 'ಎಂಡ್ ಆಫ್ ಡೇಸ್' ಪುಸ್ತಕದಲ್ಲಿ ಕೊರೊನಾ ವೈರಸ್ ಅಂತಹ ಭಯಾನಕ ಕಾಯಿಲೆ ಬಗ್ಗೆ ಚರ್ಚಿಸಿದ್ದರು ಎಂಬ ವಿಷಯ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಕೊರೊನಾ ವೈರಸ್ ರೋಗದ ಲಕ್ಷಣಗಳ ಬಗ್ಗೆ ಆಗಲೇ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಪುಸ್ತಕದ ಅಂಶಗಳು ಸ್ಕ್ರೀನ್ ಶಾಟ್ ಈಗ ಟ್ರೆಂಡ್ ಆಗುತ್ತಿದೆ. ಆದರೆ, ಇದಕ್ಕೂ ತುಂಬಾ ಮೊದಲೇ 1978ರಲ್ಲಿ ಖ್ಯಾತ ಕಾದಂಬರಿಕಾರ ಬರೆದ ಕೃತಿಯಲ್ಲಿ ಕೊರೊನಾ ಮಾದರಿ ಕಾಯಿಲೆ ವಿಶ್ವವನ್ನು ಆವರಿಸುವ ಬಗ್ಗೆ ಬರೆಯಲಾಗಿದೆ.

ವೆಂಕಟ್ ಸುಬ್ರಹ್ಮಣ್ಯ ಶರ್ಮಾ
59 ವಯಸ್ಸಿನ ಕೊಳ್ಳೆಗಾಲ ಶರ್ಮಾ ಅವರ ಪೂರ್ಣ ಹೆಸರು ಕಲ್ಯಾಣ ವೆಂಕಟ್ ಸುಬ್ರಹ್ಮಣ್ಯ ಶರ್ಮಾ. ಅವರು ಸದ್ಯ ಮೈಸೂರಿನ ಕೇಂದ್ರೀಯ ಆಹಾರ ಸಂಸ್ಕರಣಾ ತಂತ್ರಜ್ಙಾನ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಣಿಪಾಲ್ ವಿವಿಯಲ್ಲಿ ಪಿಎಚ್ಡಿ ಮಾಡುವ ವೇಳೆ ಲೇಖನ ಬರೆದಿದ್ದರು.












Click it and Unblock the Notifications