ಡಿಸೆಂಬರ್ 8ರ ಭಾರತ್ ಬಂದ್; ಏನಿರುತ್ತೆ, ಏನಿರಲ್ಲ?
ಬೆಂಗಳೂರು, ಡಿಸೆಂಬರ್ 07: ಕೇಂದ್ರ ಸರ್ಕಾರದ ವಿರುದ್ಧ ನವದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದೆ. ಡಿಸೆಂಬರ್ 8ರಂದು ' ಭಾರತ್ ಬಂದ್'ಗೆ ರೈತರು ಕರೆ ಕೊಟ್ಟಿದ್ದಾರೆ. ಕರ್ನಾಟಕದಲ್ಲಿಯೂ ಬಂದ್ ನಡೆಯಲಿದೆ.
ಕರ್ನಾಟಕದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಭಾರತ್ ಬಂದ್ಗೆ ಬೆಂಬಲ ಘೋಷಣೆ ಮಾಡಿವೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಂಗಳವಾರ ಬೆಳಗ್ಗೆ 6 ರಿಂದ ಸಂಜೆ 6ರ ತನಕ ಬಂದ್ ನಡೆಯಲಿದೆ.
ಬೆಂಗಳೂರು ನಗರಕ್ಕೆ ಮಂಗಳವಾರ ಸುಮಾರು 10 ಸಾವಿರ ರೈತರು ಆಗಮಿಸಲಿದ್ದಾರೆ. ನಗರದಲ್ಲಿ ಬೃಹತ್ ಜಾಥಾ ನಡೆಸಲಿದ್ದು, ಸರ್ಕಾರದ ವಿರುದ್ಧ ಬಾರುಕೋಲು ಚಳವಳಿ ಮಾಡಲಿದ್ದಾರೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಣೆ ಮಾಡಿದ್ದಾರೆ.
ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡುವುದಾಗಿ ರೈತರು ಹೇಳಿದ್ದಾರೆ. ಕರ್ನಾಟಕದಲ್ಲಿ ಬಂದ್ ಬಿಸಿ ಜನರಿಗೆ ತಟ್ಟಲಿದೆ. ಆಟೋ, ಕ್ಯಾಬ್, ಲಾರಿ ಚಾಲಕರು ರೈತರಿಗೆ ಬೆಂಬಲ ನೀಡಿದ್ದಾರೆ. ಬಂದ್ ದಿನ ಏನಿರುತ್ತೆ?, ಏನಿರಲ್ಲ ಎಂಬ ಮಾಹಿತಿ ಇಲ್ಲಿದೆ.

ಬಂದ್ ದಿನ ಏನಿರುತ್ತದೆ?
ಭಾರತ್ ಬಂದ್ದಿನ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದೆ. ಆಸ್ಪತ್ರೆ, ಮೆಡಿಕಲ್ ಶಾಪ್, ದಿನಸಿ ಅಂಗಡಿಗಳು, ಹಾಲು ದೊರೆಯುತ್ತದೆ. ಬೆಳಗ್ಗೆ 6 ರಿಂದ ಸಂಜೆ 6 ಗಂಟೆಯ ತನಕ ಬಂದ್ ಮಾಡಲಾಗುತ್ತದೆ ಎಂದು ರೈತ ಸಂಘಟನೆಗಳು ಹೇಳಿವೆ.

ಬಸ್, ಆಟೋ ಸಂಚಾರವಿದೆ
ಭಾರತ್ ಬಂದ್ ದಿನ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಇರುತ್ತದೆ. ಬೆಂಗಳೂರು ನಗರದಲ್ಲಿ ಆಟೋ ಚಾಲಕರು ಬಂದ್ಗೆ ನೈತಿಕ ಬೆಂಬಲವನ್ನು ಮಾತ್ರ ನೀಡಿದ್ದಾರೆ. ಆದ್ದರಿಂದ, ಆಟೋಗಳು ಸಂಚಾರ ನಡೆಸಲಿವೆ.

ಹೋಟೆಲ್, ಟ್ಯಾಕ್ಸಿ ಸೇವೆ
ಹೋಟೆಲ್ ಮಾಲೀಕರ ಸಂಘ ಬಂದ್ಗೆ ನೈತಿಕ ಬೆಂಬಲ ನೀಡಿದೆ. ಓಲಾ ಮತ್ತು ಊಬರ್ ಕ್ಯಾಬ್ಗಳ ಸಂಚಾರ ಸ್ಥಗಿತಗೊಳಿಸುವ ತೀರ್ಮಾನವನ್ನು ಚಾಲಕರಿಗೆ ಬಿಡಲಾಗಿದೆ. ಲಾರಿ ಮಾಲೀಕರು ಬೆಂಬಲ ನೀಡಿದ್ದಾರೆ. ಎಂಪಿಎಂಸಿಯ ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ಬಂದ್ಗೆ ಬೆಂಬಲ ಕೊಟ್ಟಿದ್ದು ವ್ಯಾಪಾರ ವಹಿವಾಟು ಸ್ಥಗಿತವಾಗುವ ನಿರೀಕ್ಷೆ ಇದೆ.

ಹೆದ್ದಾರಿಗಳು ಬಂದ್?
ನಗರಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳನ್ನು ಬಂದ್ ಮಾಡಲಾಗುತ್ತದೆ ಎಂದು ರೈತರು ಹೇಳಿದ್ದಾರೆ. ಇದರಿಂದಾಗಿ ಹೆದ್ದಾರಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ರೈತರು ಸಂಜೆಯ ತನಕ ಹೆದ್ದಾರಿ ಬಂದ್ ಮಾಡಲಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ.

ಹಣ್ಣು, ತರಕಾರಿ ಪೂರೈಕೆ ತಡೆ
ಲಾರಿ ಮಾಲೀಕರು ಬಂದ್ಗೆ ಬೆಂಬಲ ನೀಡಿದ್ದಾರೆ. ರೈತರು ಹೆದ್ದಾರಿ ತಡೆಯುವುದಾಗಿ ಹೇಳಿದ್ದಾರೆ. ಇದರಿಂದಾಗಿ ನಗರಕ್ಕೆ ಹಣ್ಣು, ತರಕಾರಿ, ಸೊಪ್ಪು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ.












Click it and Unblock the Notifications