7th pay commission: ಆಯೋಗದ ಅವಧಿ ಅಂತ್ಯ, ಸಿಎಂ ಹೇಳಿಕೆ ಏನು?
ಬೆಂಗಳೂರು, ಮಾರ್ಚ್ 01: ಕೆ. ಸುಧಾಕರ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಅವಧಿ ಅಂತ್ಯಗೊಳ್ಳಲು 14 ದಿನ ಬಾಕಿ ಇದೆ. ಕರ್ನಾಟಕದ ಸರ್ಕಾರಿ ನೌಕರರು ಆಯೋಗದಿಂದ ವರದಿಯನ್ನು ಪಡೆದು ಅದನ್ನು ಅನುಷ್ಠಾನಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕರ್ನಾಟಕ ಬಜೆಟ್ 2024-25 ಮತ್ತು ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ 7ನೇ ವೇತನ ಆಯೋಗದ ಕುರಿತು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದರು.

ಬಜೆಟ್ ಅಧಿವೇಶನದ ಕೊನೆಯ ದಿನವಾದ ಗುರುವಾರ ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಧೀರ್ಘ ಉತ್ತರ ನೀಡಿದರು. ಆಗ ಸರ್ಕಾರಿ ನೌಕರರಿಗೆ ಸಮಾಧಾನವಾಗುವ ಕೆಲವು ಅಂಶಗಳನ್ನು ಹೇಳಿದರು. ಅವುಗಳ ಮಾಹಿತಿ ಇಲ್ಲಿದೆ.
ಸಿದ್ದರಾಮಯ್ಯ ಉತ್ತರ: ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ವೇತನ ಹಾಗೂ ಪಿಂಚಣಿಯಲ್ಲಿ ಶೇ 25ರಷ್ಟು ಹೆಚ್ಚಳವಾಗಲಿದೆ ಎಂದು ಹೇಳಿದರು. 7ನೇ ವೇತನ ಆಯೋಗದ ಶಿಫಾರಸ್ಸಿನಿಂದ ವೇತನ ಶ್ರೇಣಿಯಲ್ಲಿ ಸಂಭವಿಸಬಹುದಾದ ಹೆಚ್ಚಳವನ್ನು ಅಂದಾಜಿಸಿ 2024-25ನೇ ಸಾಲಿನಲ್ಲಿ ವೇತನ ಹಾಗೂ ಪಿಂಚಣಿಗೆ 1,12,789 ಕೋಟಿ ಅಂದಾಜಿಸಲಾಗಿರುತ್ತದೆ ಎಂದರು.
ಕಳೆದ ಸಾಲಿಗೆ ಹೋಲಿಸಿದರೆ ಇದು ಶೇ 25ರಷ್ಟು ಅಂದರೆ, 22,670 ಕೋಟಿ ಹೆಚ್ಚಳವಾಗಿರುತ್ತದೆ. 7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ 13,000 ಕೋಟಿ ಆಯವ್ಯಯದಲ್ಲಿ ಒದಗಿಸಲಾಗಿದ್ದು, ಆಯೋಗದ ವರದಿ ಅನುಸರಸಿ ಇನ್ನೂ ಹೆಚ್ಚಿನ ಅನುದಾನದ ಅವಶ್ಯಕತೆ ಉಂಟಾದರೆ ಪೂರಕ ಅಂದಾಜಿನಲ್ಲಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಫೆಬ್ರವರಿ 16ರಂದು ಬಜೆಟ್ ಮಂಡಿಸಿದ್ದ ಸಿದ್ದರಾಮಯ್ಯ, 7ನೇ ರಾಜ್ಯ ವೇತನದ ಆಯೋಗದ ವರದಿ ಜಾರಿಯ ಮುನ್ಸೂಚನೆ ನೀಡಿದ್ದರು. ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ವರದಿ ಸ್ವೀಕರಿಸಿದ ನಂತರ ಪರಿಶೀಲಿಸಿ ಕ್ರಮವಹಿಸಲಾಗುತ್ತದೆ ಎಂದು ಭಾಷಣದಲ್ಲಿ ಹೇಳಿದ್ದರು.
ಆದರೆ ಬಜೆಟ್ನಲ್ಲಿ ಖಚಿತವಾದ ಭರವಸೆ ಸಿಕ್ಕಿಲ್ಲ ಎಂದು ಸರ್ಕಾರಿ ನೌಕರರು ಅಸಮಾಧಾನಗೊಂಡಿದ್ದರು. ಫೆಬ್ರವರಿ 27ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಸಹ ವರದಿ ಬಂದ ಬಳಿಕ ಪರಿಶೀಲಿಸಿ ಮುಂದಿನ ತೀರ್ಮಾನ ಎಂದು ಹೇಳಿದ್ದು, ಸರ್ಕಾರಿ ನೌಕರರಿಗೆ ನಿರಾಸೆ ಉಂಟು ಮಾಡಿತ್ತು.
ಕೆ. ಸುಧಾಕರ್ ನೇತೃತ್ವದ ತ್ರಿ ಸದಸ್ಯರ 7ನೇ ರಾಜ್ಯ ವೇತನ ಆಯೋಗದ ಅವಧಿ 2023ರ ನವೆಂಬರ್ನಲ್ಲಿ ಅಂತ್ಯವಾಗಬೇಕಿತ್ತು. ಆಗ ಆಯೋಗ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತ್ತು. ಆದರೆ ವರದಿ ಸಲ್ಲಿಸಿರಲಿಲ್ಲ.
ಕರ್ನಾಟಕ ಸರ್ಕಾರ ಬಳಿಕ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಆಯೋಗ ವರದಿಯನ್ನು ಮಾರ್ಚ್ 15ಕ್ಕೆ ಸರ್ಕಾರಕ್ಕೆ ಸಲ್ಲಿಕೆ ಮಾಡುವ ನಿರೀಕ್ಷೆ ಇದೆ. ಈಗ ವರದಿ ಸಲ್ಲಿಕೆಗೆ 14 ದಿನ ಬಾಕಿ ಇರುವಾಗ ಮುಖ್ಯಮಂತ್ರಿಗಳು ಆಯೋಗ, ಅನುದಾನ ಮೀಸಲಿಟ್ಟ ಕುರಿತು ಮಾತನಾಡಿದ್ದಾರೆ.
ಮಾರ್ಚ್ 10ರ ಬಳಿಕ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ನಿರೀಕ್ಷೆ ಇದೆ. ಆದ್ದರಿಂದ ಬೇಗ ವೇತನ ಆಯೋಗದ ವರದಿಯನ್ನು ಪಡೆದು ಅನುಷ್ಠಾನಗೊಳಿಸುವ ಆದೇಶ ಪ್ರಕಟಿಸಬೇಕು ಎಂದು ಸರ್ಕಾರಿ ನೌಕರರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರ ಬೇಡಿಕೆಯಂತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. ಬಳಿಕ ಎರಡು ಬಾರಿ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಸರ್ಕಾರ ವರದಿ ಪಡೆದು ಜಾರಿಗೊಳಿಸುವ ಮುನ್ನ ಅದರಿಂದ ಆಗುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಅನುದಾನವನ್ನು ಮೀಸಲಿಡುತ್ತದೆ.











Click it and Unblock the Notifications