7th pay commission; ಆಡಳಿತ ಸುಧಾರಣೆಗೆ KSGEA ಶಿಫಾರಸುಗಳು
ಬೆಂಗಳೂರು, ಅಕ್ಟೋಬರ್ 26: ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ವರದಿಯಲ್ಲಿ ಸಚಿವಾಲಯದ ಕಾರ್ಯ ವ್ಯವಹರಣೆಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕೆಂದರೆ ಈ ಅಂಶಗಳನ್ನು ಸರ್ಕಾರದ ಗಮನಕ್ಕೆ ತರುವ ಅಗತ್ಯತೆ ಇದೆ ಎಂದು ವರದಿಯೊಂದನ್ನು ಸಲ್ಲಿಕೆ ಮಾಡಿದೆ.
ರಾಜ್ಯ ಸರ್ಕಾರ ನೇಮಕ ಮಾಡಿರುವ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗಕ್ಕೆ ಕರ್ನಾಟಕ ಸರ್ಕಾರ ಸಚಿವಾಲಯಗಳ ನೌಕರರ ಸಂಘ ಆಡಳಿತ ಸುಧಾರಣೆಯ ವಿಚಾರದಲ್ಲಿ ಹಲವು ಸಲಹೆಗಳನ್ನು ನೀಡಿದೆ. ಸಚಿವಾಲಯದಲ್ಲಿ ಸೇವೆ ಸಲ್ಲಿಸುವವರಿಗೆ ಅವರ ಸೇವಾ ಅವಧಿಯಲ್ಲಿ ಕನಿಷ್ಟ 4 ಮುಂಬಡ್ತಿ ಅವಕಾಶಗಳು ದೊರೆಯುವಂತಾಗಬೇಕು ಎಂದು ವರದಿಯಲ್ಲಿ ಹೇಳಿದೆ.

ಈ ಹಿಂದೆ ಸಚಿವಾಲಯದಲ್ಲಿ 662 ಮಂಜೂರಾದ ಗ್ರೂಪ್ 'ಡಿ' ಹುದ್ದೆಗಳಿದ್ದವು. ಕಾಲಕ್ರಮೇಣ ಈ ಹುದ್ದೆಗಳಲ್ಲಿ ತೀವ್ರ ಇಳಿಕೆಯಾಗಿದ್ದು, ಕೆಲವೇ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊರಗುತ್ತಿಗೆ ಆಧಾರದ ಮೇಲೆ ಸಚಿವಾಲಯದ ಗ್ರೂಪ್ 'ಡಿ' ಹುದ್ದೆಗಳನ್ನು ತುಂಬುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಖಾಯಂ ಆಗಿ ಗ್ರೂಪ್ 'ಡಿ' ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕು ಎಂದು ವರದಿಯಲ್ಲಿ ಮನವಿ ಮಾಡಲಾಗಿದೆ.
ಯಾವ-ಯಾವ ಶಿಫಾರಸುಗಳು?; ಸಚಿವಾಲಯದ ಕಾರ್ಯ ವ್ಯವಹರಣೆಯಲ್ಲಿ ಇನ್ನಷ್ಟು ಸುಧಾರಣೆಯಾಗಬೇಕೆಂದರೆ ಈ ಕೆಳಗಿನ ಅಂಶಗಳನ್ನು ಆಯೋಗವು ಸರ್ಕಾರದ ಗಮನಕ್ಕೆ ತರುವ ಅಗತ್ಯತೆ ಇದೆ. ಆಡಳಿತದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು 6ನೇ ವೇತನ ಆಯೋಗವು ತನ್ನ ಶಿಫಾರಸ್ಸಿನಲ್ಲಿ ತಿಳಿಸಿರುವಂತೆ ಅತ್ಯಂತ ಯೋಗ್ಯವಾದ ಕಚೇರಿ ವಾತಾವರಣವನ್ನು ಕಲ್ಪಿಸಬೇಕು ಎಂದು ಮನವಿ ಮಾಡಿದೆ.
* ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಅಧಿಕಾರಿ/ ನೌಕರರಿಗೆ ಕಾರ್ಪೋರೇಟ್ ಕಚೇರಿಗಳ ಮಾದರಿಯಲ್ಲಿ ಸೀಟಿಂಗ್ ಅರೇಂಜ್ ಮೆಂಟ್ ಮಾಡಬೇಕು. ಕಡತಗಳನ್ನು ಇಟ್ಟುಕೊಳ್ಳಲು ಸೂಕ್ತ ಭದ್ರತಾ ವ್ಯವಸ್ಥೆ, ಸ್ವಚ್ಛತೆ, ಉತ್ತಮ ಗಾಳಿ, ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಬೇರೆ ಬೇರೆ ಕಡೆ ಹಂಚಿಕೆಯಾಗಿರುವ ಸಚಿವಾಲಯದ ಇಲಾಖೆಗಳು ಒಂದೇ ಕಡೆ ಕಾರ್ಯ ನಿರ್ವಹಿಸಲು ಅಗತ್ಯ ಕ್ರಮವಹಿಸಬೇಕು.
* ಸಚಿವಾಲಯದ ಎಲ್ಲಾ ವೃಂದದ ಹುದ್ದೆಗಳಿಗೆ ಕೇಂದ್ರ ಸರ್ಕಾರ ಸಚಿವಾಲಯದ ಮಾದರಿಯಲ್ಲಿ 4 ಹಂತಗಳ ತರಬೇತಿಯನ್ನು ನೀಡುವಂತಾಗಬೇಕು.
* ಸಚಿವಾಲಯ ತರಬೇತಿ ಸಂಸ್ಥೆಗೆ ಎಲ್ಲಾ ಸೌಲಭ್ಯಗಳುಳ್ಳ ಸ್ವತಂತ್ರ ಕಟ್ಟಡ ನಿರ್ಮಾಣವಾಗಬೇಕು.
ಈಗಿನ ತರಬೇತಿ ಮಾದರಿಯನ್ನು ಸಂಪೂರ್ಣ ಬದಲಾಯಿಸಿ, ಐ.ಎಸ್.ಟಿ.ಎಮ್. ಮಾದರಿಯಲ್ಲಿ ಪಠ್ಯಗಳನ್ನು ರೂಪಿಸಿ, ಅದಕ್ಕನುಗುಣವಾಗಿ ಸಚಿವಾಲಯದ ಅಧಿಕಾರಿ/ ನೌಕರರಿಗೆ ತರಬೇತಿ ಒದಗಿಸುವಂತಾಗಬೇಕು.
* ಪ್ರಸ್ತುತ ಮೇಲಿನ ಪ್ರತ್ಯೇಕ ತರಬೇತಿ ವ್ಯವಸ್ಥೆ ಜಾರಿಗೆ ಬರುವವರೆಗೆ ಶಾಖಾಧಿಕಾರಿಗಳು ಹಾಗೂ ಮೇಲಿನ ಹುದ್ದೆಗಳಿಗೆ ಬಡ್ತಿ ಪಡೆಯುವ ಎಲ್ಲಾ ಅಧಿಕಾರಿಗಳಿಗೆ ಮೈಸೂರು ತರಬೇತಿ ಸಂಸ್ಥೆಯಲ್ಲಿ ನಿಗದಿತ ಅವಧಿಗೆ ತರಬೇತಿ ನೀಡುವಂತಾಗಬೇಕು.
* ಸಚಿವಾಲಯದಲ್ಲಿ ಒಂದು ಹುದ್ದೆಯಿಂದ ಅದರ ನಂತರದ ಹುದ್ದೆಗೆ ಮುಂಬಡ್ತಿ ನೀಡುವಾಗ, ಅದಕ್ಕೆ ಪೂರ್ವಭಾವಿಯಾಗಿ ಹೆಚ್ಚಿನ ತರಬೇತಿಯನ್ನು ವೈಜ್ಞಾನಿಕರೂಪದಲ್ಲಿ ನೀಡುವಂತಾಗಬೇಕು.
* ಸಚಿವಾಲಯದ ಎಲ್ಲಾ ಶಾಖೆಗಳಿಗೆ ಒದಗಿಸಲಾಗಿರುವ ಬಹುತೇಕ ಕಂಪ್ಯೂಟರ್ಗಳು ಔಟ್ ಡೇಟೆಡ್ ಆಗಿರುತ್ತವೆ, ಇಂಟರ್ ನೆಟ್ ಸೌಲಭ್ಯ ಸೂಕ್ತ ಪ್ರಿಂಟರ್ಗಳು ಇಲ್ಲದಿರುವುದು, ಅಸಮರ್ಪಕ ನಿರ್ವಹಣೆ, ಸಚಿವಾಲಯದ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡದೇ ಇರುವುದು ಇವೆಲ್ಲವುಗಳನ್ನು ಆದ್ಯತೆಯ ಮೇರೆಗೆ ಬಗೆಹರಿಸಬೇಕು.
* ಸಚಿವಾಲಯದ ಸಿಬ್ಬಂದಿಗಳ ಆರೋಗ್ಯ ದೃಷ್ಟಿಯಿಂದ ಸಚಿವಾಲಯ ಇಲಾಖೆಗಳು ಕಾರ್ಯನಿರ್ವಹಿಸುತ್ತಿರುವ ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿಗಳ ಕಟ್ಟಡದಲ್ಲಿ ಸೂಕ್ತ ಡಿಸ್ಪೆನ್ಸರಿಗಳನ್ನು ಉನ್ನತಿಕರಿಸಬೇಕು.
* ಪ್ರಸ್ತುತ ಬಹುಮಹಡಿ ಕಟ್ಟಡ ಹಾಗೂ ವಿಧಾನಸೌಧ ಕಟ್ಟಡದಲ್ಲಿ ಈ ಡಿಸ್ಪೆನ್ಸರಿಗಳು ಕಾರ್ಶೆಡ್ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಡಿಸ್ಪೆನ್ಸರಿಗೆ ಇರಬೇಕಾದ ಯಾವುದೇ ಮಾನದಂಡಗಳನ್ನು ಈ ಡಿಸ್ಪೆನ್ಸರಿಗಳು ಹೊಂದಿರುವುದಿಲ್ಲ.
* ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುವ ಮಹಿಳಾ ಉದ್ಯೋಗಿಗಳಿಗೆ ಸುರಕ್ಷತಾ ದೃಷ್ಟಿಯಿಂದ ವಿಶ್ರಾಂತಿ ಕೊಠಡಿ ಹಾಗೂ ಡ್ರೆಸ್ ಚೇಂಜಿಂಗ್ ಕೊಠಡಿಗಳನ್ನು ಮೂರು ಕಟ್ಟಡಗಳಲ್ಲಿಯೂ ಕ್ರಮವಾಗಿ ಒದಗಿಸಬೇಕು.
* ಬೆಂಗಳೂರು ಮಹಾನಗರದ ಯಾವುದೇ ಇಲಾಖೆಗಳಲ್ಲಿಯೂ ಕೂಡ ಸಚಿವಾಲಯದ ಮಾದರಿಯಲ್ಲಿ ಸರಿಸುಮಾರು 10 ಸಾವಿರ ಸರ್ಕಾರಿ ನೌಕರರು ಒಂದೇ ಕಡೆ ಕಾರ್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಸಚಿವಾಲಯದ ಸಿಬ್ಬಂದಿಗಳ ಅನುಕೂಲಕ್ಕಾಗಿ ಉತ್ತಮ ಕ್ಯಾಂಟಿನ್ ಸೌಲಭ್ಯಗಳನ್ನು ಹಾಗೂ ಪ್ರತಿ ಕಟ್ಟಡದಲ್ಲಿ ಶಿಶುಪಾಲನಾ ಕೇಂದ್ರ ಪ್ರಾರಂಭಿಸಬೇಕು.











Click it and Unblock the Notifications