7th Pay Commission: ಅನುದಾನಿತ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ವಿಮೆ ಶಿಫಾರಸುಗಳು
ಬೆಂಗಳೂರು, ಅಕ್ಟೋಬರ್ 01: ರಾಜ್ಯ ಸರ್ಕಾರ ರಚನೆ ಮಾಡಿದ್ದ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರ ಕುರಿತು ಅನೇಕ ಶಿಫಾರಸುಗಳನ್ನು ಮಾಡಿದೆ. ಇವುಗಳಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ವಿಮೆ ಕುರಿತು ವಿವರಣೆಯನ್ನು ನೀಡಿದೆ. ಸರ್ಕಾರ ಸಾಮಾಜಿಕ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊರಬೇಕು ಎಂದು ಹೇಳಿದೆ.
ಅನುದಾನಿತ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ವಿಮೆ. ದಿನಾಂಕ 1/4/2006ರ ನಂತರ ನೇಮಕಾತಿ ಹೊಂದಿರುವ ಹಲವಾರು ಅನದಾನಿತ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳು ಅವರಿಗೆ ಯಾವುದೇ ನಿವೃತ್ತಿ ಸೌಲಭ್ಯಗಳು ಇರುವುದಿಲ್ಲ ಎಂದು ಈ ಆಯೋಗದ ಮುಂದೆ ಮನವಿ ಸಲ್ಲಿಸಿರುತ್ತಾರೆ. ಸಾಮಾಜಿಕ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನು ಸಹ ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಎನ್ಪಿಎಸ್ ಯೋಜನೆಯಡಿ ಸೇರ್ಪಡಿಸಿ ನೌಕರರ ವಂತಿಗೆಯನ್ನು ಪಾವತಿಸಬೇಕು ಅಥವಾ ಪರ್ಯಾಯವಾಗಿ ಅವರನ್ನು ಹಳೆಯ ಪಿಂಚಣಿ ವ್ಯಾಪ್ತಿಗೆ ತರಬೇಕೆಂದು ಬಲವಾಗಿ ವಾದಿಸಿದ್ದಾರೆ.

ಈ ಸಮಸ್ಯೆಯ ಹಿನ್ನೆಲೆ ಈ ಕೆಳಗಿನಂತಿದೆ. ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೊದಲು ಸರ್ಕಾರಿ ನೌಕರರು ಲಭ್ಯವಾಗುತ್ತಿದ್ದ ನಿವೃತ್ತಿ ಸೌಲಭ್ಯಗಳಿಗೆ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು ಸಹ ಅರ್ಹರಾಗಿದ್ದರು. ಎನ್ಪಿಎಸ್ ಯೋಜನೆ ಜಾರಿಗೆ ಬಂದ ಪರಿಣಾಮವಾಗಿ ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರು ರಾಜ್ಯ ಸರ್ಕಾರಿ ನೌಕರರಂತೆ ಓಪಿಎಸ್ ಸೌಲಭ್ಯಗಳಿಗೆ ಅರ್ಹರಾಗಿರುವುದಿಲ್ಲ. ಮುಂದುವರೆದು, ಎನ್ಪಿಎಸ್ ಯೋಜನೆಯನ್ನು ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರಿಗೆ ಕಡ್ಡಾಯವಾಗಿ ವಿಸ್ತರಿಸಿರುವುದಿಲ್ಲ. ಇದರ ಪರಿಣಾವಾಗಿ ಈ ನೌಕರರು ಯಾವುದೇ ಪಿಂಚಣಿ ಸೌಲಭ್ಯಗಳಿಗೆ ಅಥವಾ ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ.
ಎಲ್ಲಾ ಅನದಾವಿತ ಸಂಸ್ಥೆಗಳ ಸಿಬ್ಬಂದಿಗಳನ್ನು ಎನ್ಪಿಎಸ್ ವ್ಯಾಪ್ತಿಗೆ ಒಳಪಡಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂಬಂಧಪಟ್ಟ ಸಂಸ್ಥೆಗಳ ಆಡಳಿತ ಮಂಡಳಿಗಳು ಎನ್ಪಿಎಸ್ ನಿಧಿಗೆ ಅಗತ್ಯ ವಂತಿಗೆಯನ್ನು ನೀಡುವುದನ್ನು ಕಡ್ಡಾಯ ಮಾಡಲು ಸರ್ಕಾರವು ಸೂಕ್ತ ಕ್ರಮ ಕೈಗೊಳ್ಳುವಂತೆ 6ನೇ ರಾಜ್ಯ ವೇತನ ಆಯೋಗವು ಶಿಫಾರಸ್ಸು ಮಾಡಿರುತ್ತದೆ. ಆದಾಗ್ಯೂ ಖಾಸಗಿ ಅನುದಾನಿತ ಸಂಸ್ಥೆಯ ಆಡಳಿತ ಮಂಡಳಿಯು ಎನ್ಪಿಎಸ್ಗೆ ಉದ್ಯೋಗದಾತನ ಕೊಡುಗೆಯನ್ನು ನೀಡುವ ಹೊಣೆಗಾರಿಕೆಯನ್ನ ವಿಧಿಸಲು ಸಾಧ್ಯವಿಲ್ಲವೆಂದು ಮತ್ತು ಇದು ಆಡಳಿತ ಮಂಡಳಿಯ ವಿವೇಚನೆಗೆ ಬಿಟ್ಟ ವಿಷಯವೆಂದು ಸರ್ಕಾರವು ಅಭಿಪ್ರಾಯ ಪಟ್ಟಿದೆ.
ನೌಕರರ ಮನವಿಗಳ ಪರಿಶೀಲನೆ: ಈ ನೌಕರರುಗಳ ಮನವಿಗಳನ್ನು ಪರಿಶೀಲಿಸಿರುತ್ತೇವೆ. ನೂತನ ಪಿಂಚಣಿ ಯೋಜನೆಯನ್ನು ಜಾರಿಗೆ ತರುವ ಮೊದಲು ಅಂದರ 01.04.2006ಕ್ಕಿಂತ ಮೊದಲು ಅವರುಗಳು ಡಿಸಿಆರ್ಜಿ ಮತ್ತು ಗಳಿಕೆ ರಜೆ ನಗದೀಕರಣ ಸೇರಿದಂತೆ ನಿವೃತ್ತ ಸೌಲಭ್ಯಗಳಿಗೆ ಅರ್ಹರಿದ್ದು, ಆದರೆ ಉದ್ಯೋಗದಾತರ ಆಕ್ಷೇಪಣೆಯಿಂದಾಗಿ ಈ ಪ್ರಯೋಜನಗಳನ್ನು ನಿರಾಕರಿಸಲಾಗಿರುವುದು ಖಂಡಿತವಾಗಿಯೂ ಅನ್ಯಾಯವೆಂದು ತೋರುತ್ತದೆ, ಮತ್ತೊಂದೆಡೆ ಎನ್ಪಿಎಸ್ ಅನ್ನು ಪರಿಚಯಿಸಿದಾಗ ಅದನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಐಚ್ಛಿಕಗೊಳಿಸಲಾಗಿದೆ ಎಂಬುದು ನಿಜ ಮತ್ತು ನಿಸ್ಸಂಶಯವಾಗಿ ಉದ್ಯೋಗದಾತ ಮತ್ತು ಉದ್ಯೋಗಿಗಳು ತಮ್ಮ ವೈಯಕ್ತಿಕ ಪಾಲನ್ನು ಪಿಂಚಣಿ ನಿಧಿಗೆ ಕೊಡುಗೆ ನೀಡಲು ಒಪ್ಪಿಕೊಳ್ಳುವ ಷರತ್ತಿಗೆ ಒಳಪಟ್ಟಿರುತ್ತದೆ.
ಆ ಸಮಯದಲ್ಲಿಯೇ ಉದ್ಯೋಗದಾತನ ಪಾಲನ್ನು ಸಂಸ್ಥೆಗಳ ಆಡಳಿತ ಮಂಡಳಿಗಳು ಭರಿಸಬೇಕೇ ಹೊರತು ರಾಜ್ಯ ಸರ್ಕಾರವಲ್ಲ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಿದೆ. 6ನೇ ರಾಜ್ಯ ವೇತನ ಆಯೋಗದ ಅವಲೋಕನಗಳನ್ನು ನಾವು ಒಪ್ಪುತ್ತೇವೆ ಹಾಗೂ ಅದರ (6ನೇ ರಾ.ವೇ.ಆ.) ಅವಲೋಕನೆ ತಿರಸ್ಕರಿಸುವಲ್ಲಿ ಸರ್ಕಾರವು ನೀಡಿರುವ ಕಾರಣವು ಸಮಂಜಸ ಮತ್ತು ವಾಸ್ತವಿಕವಾಗಿ ಸರಿಯಾಗಿದೆ ಎಂದು ಅಭಿಪ್ರಾಯ ಪಟ್ಟಿರೂ, ಈ ವರ್ಗದ ನೌಕರರ ನೈಜ ಪರಿಸ್ಥಿತಿ ಮತ್ತು ಅವರುಗಳನ್ನು ಓಪಿಎಸ್ ವ್ಯಾಪ್ತಿಯಡಿ ತರಲು ಅವರು ಸೂಚಿಸಿರುವ ಪರ್ಯಾಯ ಮಾರ್ಗ ವನ್ನು ಒಪ್ಪಲು ಸಾಧ್ಯವಿಲ್ಲದ ಕಾರಣ ಈ ಸಮಸ್ಯೆಗೆ ಕಾರ್ಯ ಸಾಧ್ಯವಾದ ಪರಿಹಾರವನ್ನು ಸೂಚಿಸುವಂತೆ ಮತ್ತು ಈ ನೌಕರರ ನಿವೃತ್ತಿಯ ನಂತರ ಕೆಲವೊಂದಾದರೂ ನಿವೃತ್ತಿ ಸೌಲಭ್ಯಗಳನ್ನು ಒದಗಿಸಲು ಸಕಾರವು ತನ್ನ ಔದಾರ್ಯತೆಯನ್ನು ತೋರುವಂತೆ ನಾವು ಒತ್ತಾಯಿಸುತ್ತೇವೆ ಎಂದು ಆಯೋಗ ಹೇಳಿದೆ.












Click it and Unblock the Notifications