7th Pay Commission: ಒಪಿಎಸ್, ಎನ್ಪಿಎಸ್ ಸರ್ಕಾರಿ ನೌಕರರ ಮುಂದಿನ ದಾರಿ?
ಬೆಂಗಳೂರು, ಸೆಪ್ಟೆಂಬರ್ 23: ಕರ್ನಾಟಕದ ಸರ್ಕಾರಿ ನೌಕರ ಮೂರು ಪ್ರಮುಖ ಬೇಡಿಕೆಗಳಲ್ಲಿ ಒಂದು ಈಡೇರಿದೆ. 2ನೇ ಬೇಡಿಕೆ ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ರದ್ದುಗೊಳಿಸಿ, ಹಳೆಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಮರು ಸ್ಥಾಪನೆ ಮಾಡಬೇಕು ಎಂಬುದು. ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗವು ಈ ವಿಚಾರದಲ್ಲಿ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ. ಬೇರೆ ರಾಜ್ಯಗಳಲ್ಲಿನ ಪಿಂಚಣಿ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿ, 558 ಪುಟಗಳ ಸಂಪುಟ-1ರ ವರದಿಯಲ್ಲಿ ಉಲ್ಲೇಖಗಳನ್ನು ಮಾಡಿದೆ. ಹಾಗಾದರೆ ಈ ವಿಚಾರದಲ್ಲಿ ಸರ್ಕಾರಿ ನೌಕರರ ಮುಂದಿನ ದಾರಿ ಯಾವುದು?.
ಒಪಿಎಸ್ v/s ಎನ್ಪಿಎಸ್ ಚರ್ಚೆಯಲ್ಲಿ ಉದ್ಭವವಾದ ವಾದಗಳೆಂದರೆ, ಒಪಿಎಸ್ ಪಿಂಚಣಿ ಪಾವತಿ ಭರವಸೆಯೊಂದಿಗೆ, ಹಣದುಬ್ಬರ ಸೂಚಕವಾಗಿದ್ದು ಮತ್ತು ನಿಯತಕಾಲಿಕವಾಗಿ ಪರಿಷ್ಕೃತಗೊಂಡು ನೌಕರರಿಂದ ಯಾವುದೇ ವಂತಿಗೆಯನ್ನು ನಿರೀಕ್ಷಿಸುವುದಿಲ್ಲ. ಮತ್ತೊಂದೆಡೆ, ಎನ್ಪಿಎಸ್ ಯೋಜನೆಯು ಉದ್ಯೋಗದಾತ ಮತ್ತು ಉದ್ಯೋಗಿಯ ವಂತಿಗೆಯ ಮೇಲೆ ನಿರ್ಮಿತವಾಗಿದ್ದು, ಮಾರುಕಟ್ಟೆ ಆಧಾರಿತ ಆದಾಯಗಳಿದ್ದು, ನಿವೃತ್ತಿಯ ಸಂದರ್ಭದಲ್ಲಿ ವೇತನದ ಅನುಪಾತಕ್ಕೆ ಅನುಗುಣವಾಗಿ ನಿಗದಿತ ಮೊತ್ತವಾಗಿರುವುದಿಲ್ಲ. ಮುಂದುವರೆದು, ದಿನಾಂಕ 01.04.2006ರಂದು ಮತ್ತು ಅದರ ನಂತರ ಸೇವೆಗೆ ಸೇರಿದ ಸರ್ಕಾರಿ ನೌಕರರು ಮತ್ತು ಅದಕ್ಕೂ ಮೊದಲು ನೇಮಕಾತಿಯಾದವರ ನಡುವೆ ತಾರತಮ್ಯವನ್ನು ಸೃಷ್ಟಿಸುತ್ತದೆ ಎಂಬುದು.

ಆಯೋಗ ತನ್ನ ವರದಿಯಲ್ಲಿ ದಿನಾಂಕ 01.04.2006ರ ನಂತರ ಸರ್ಕಾರಕ್ಕೆ ಸೇರಿದ ನೌಕರರು ತಮಗೆ ಲಭ್ಯವಿರುವ ನಿವೃತ್ತಿ ವೇತನ ಸೌಲಭ್ಯಗಳ ಬಗ್ಗೆ ಸ್ಪಷ್ಟ ಜ್ಞಾನವನ್ನು ಹೊಂದಿದ್ದರೂ, ಪ್ರಜ್ಞಾಪೂರ್ವಕವಾಗಿ ಮತ್ತು ರಾಷ್ಟ್ರದ ಆರ್ಥಿಕತೆಯ ಹಿತಾಸಕ್ತಿಯಿಂದ ಬಹಳ ವಿಚಾರ ಮಾಡಿದ ನಂತರ ಕೈಬಿಟ್ಟ ವ್ಯವಸ್ಥೆಯನ್ನು ಪುನ: ಜಾರಿಗೊಳಿಸುವಂತೆ ಬೇಡಿಕೆ ಸಲ್ಲಿಸುವುದು ಎಷ್ಟು ಸಮಂಜಸ ಎಂದು ಕೆಲವು ಅರ್ಥಶಾಸ್ತ್ರಜ್ಞರು ಪ್ರಶ್ನಿಸುತ್ತಿದ್ದಾರೆ.
ನೌಕರನು ತನ್ನ ನೇಮಕಾತಿಯ ಪರಿಸ್ಥಿತಿಗಳನ್ನು ಉತ್ತಮಗೊಳಿಸಲು ಬಯಸುವಂತೆಯೇ, ಒಪಿಎಸ್ ಅನ್ನು ಮರುಪರಿಚಯಿಸುವ ಅನ್ವೇಷಣೆಯ ಭಾಗವಾಗಿ ನೌಕರರು ಒಕ್ಕೊರಲಿನಲ್ಲಿ ಬೇಡಿಕೆ ಮಂಡಿಸಿರುವುದನ್ನು ಸಹ ಅರ್ಥಮಾಡಿಕೊಳ್ಳಬಹುದಾಗಿದೆ. ದೀರ್ಘಾವಧಿಯಲ್ಲಿ ಇದು ಸಮರ್ಥನೀಯವೇ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಈ ವಿಷಯವನ್ನು ಆರ್ಥಿಕತೆಗಿಂತಲೂ ಹೆಚ್ಚಾಗಿ ರಾಜಕೀಯ ಪರಿಗಣನೆಗಳಿಂದ ನಿರ್ಧರಿಸಲಾಗುತ್ತದೆ ಎಂದು ಆಯೋಗ ಹೇಳಿದೆ.
ಮುಂದಿನ ಹಾದಿ ಏನು?; ನೀತಿ ನಿರೂಪಕರು ಮತ್ತು ಅರ್ಥಶಾಸ್ತ್ರಜ್ಞರಿಗೆ ಒಪಿಎಸ್ಗೆ ಬದಲಾಯಿಸುವುದು ಗಂಭೀರ ವಿಷಯವಾಗಿದ್ದು, ಕಳೆದ ಎರಡು ದಶಕಗಳಲ್ಲಿ ಇದ್ದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪಿಂಚಣಿ ಹೊಣೆಗಾರಿಕೆಯು ಮುಂಬರುವ ವರ್ಷಗಳಲ್ಲಿಯೂ ಏರಿಕೆಯಾಗಲಿದೆ ಎಂದು ಗಮನಿಸಿರುತ್ತಾರೆ. ಸೆಪ್ಟೆಂಬರ್ 2023ರ ಆರ್ಬಿಐ ಬುಲೆಟಿನ್ನಲ್ಲಿ ಗಮನಿಸಿರುವಂತೆ ಪಿಂಚಣಿಗಳ ಮೇಲಿನ ಭಾರತೀಯ ರಾಜ್ಯಗಳ ವೆಚ್ಚವು 1990ರ ದಶಕದ ಆರಂಭದಲ್ಲಿ ಜಿಡಿಪಿಯ ಶೇ.0.6 ರಿಂದ 2022-23ನೇ ಸಾಲಿನಲ್ಲಿ (ಆ.ಅಂ.) ಜಿಡಿಪಿಯ ಶೇ.1.7 ರಷ್ಟಕ್ಕೆ ಏರಿಕೆಯಾಗಿ, ರಾಜಸ್ಯ ಸ್ವೀಕೃತಿಗಳ ಆದಾಯವನ್ನು ಮೀರಿಸುತ್ತದೆ.
ರಾಜ್ಯಗಳ ಪಿಂಚಣಿ ಹೊರೆಯು ಕೇಂದ್ರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಅವುಗಳ ರಾಜಸ್ವ ಸ್ವೀಕೃತಿಗಳ ಶೇಕಡಾವಾರು ಪುಮಾಣವು ಸಂಪೂರ್ಣವಾಗಿ ಹೆಚ್ಚಿದೆ. ಒಪಿಎಸ್ಗೆ ಹಿಂತಿರುಗುವ ಬಗ್ಗೆ ಎಚ್ಚರಿಕೆಯನ್ನು ನೀಡುತ್ತಾ, ಒಪಿಎಸ್ಗೆ ಹಿಂತಿರುಗುವುದರಿಂದ ರಾಜ್ಯದ ಮೇಲಿನ ಹಣಕಾಸು ಹೊರೆಯು ಎನ್ಪಿಎಸ್ಗಿಂತಲೂ ನಾಲ್ಕೂವರೆ ಪಟ್ಟು ಹೆಚ್ಚಾಗುವುದೆಂದು ವರದಿಯು ಉಲ್ಲೇಖಿಸಿದ ಮತ್ತು ಮುಂದುವರೆದು ವೇತನ ದರ ಮತ್ತು ರಿಯಾಯಿತಿ ದರವು ಅಂದಾಜು ಶೇ.2 ರಷ್ಟು ವ್ಯತ್ಯಾಸವಾದ ನಂತರವೂ ಇದು ಎನ್ಪಿಎಸ್ಗಿಂತಲೂ 3 ಪಟ್ಟು ಹೆಚ್ಚು ಹೊರೆಯಾಗಿ ಉಳಿಯುತ್ತದೆ. ಅದೇ ಕಾಳಜಿಯನ್ನು ಎಂಟಿಎಫ್ಪಿ 2024-28 ಗಮನಿಸಿ ಒಪಿಎಸ್ಗೆ ಹಿಂತಿರುಗುವುದು ದೀರ್ಘಾವಧಿಯಲ್ಲಿ ರಾಜ್ಯದ ಹಣಕಾಸುಗಳಿಗೆ ಆರ್ಥಿಕವಾಗಿ ಹಾನಿಕಾರಕವಾಗಿದೆ ಮತ್ತು ಕಲ್ಯಾಣ ಮತ್ತು ಅಭಿವೃದ್ಧಿ ವೆಚ್ಚಗಳನ್ನು ಕಡಿತಗೊಳಿಸಲು ಕಾರಣವಾಗುತ್ತದೆ ಎಂದು ಅವಲೋಕಿಸಿದೆ ಎಂದು ಆಯೋಗ ವರದಿಯಲ್ಲಿ ತಿಳಿಸಿದೆ.
ಹಾಗಿದ್ದರೆ, ಮುಂದಿನ ದಾರಿ ಯಾವುದು?. ನೌಕರರಿಗೆ ಸಮ್ಮತವಾದ ಆರ್ಥಿಕವಾಗಿ ಕಾರ್ಯಸಾಧ್ಯವಿರುವ ಪರಿಹಾರಕ್ಕೆ ದ್ವಿಗುಣ ಕಾರ್ಯನೀತಿಯ ಅಗತ್ಯವಿದೆ. ಒಂದು, ನೌಕರರು ತಮ್ಮ ವೇತನದ ಶೇ.10 ರಷ್ಟನ್ನು ವಂತಿಗೆ ನೀಡುವುದನ್ನು ಮುಂದುವರೆಸುವುದು ಅಥವಾ ಅವರಿಗೆ ಪಿಎಫ್ ಮಾದರಿಯ ಪ್ರಯೋಜನಗಳನ್ನು ಪಡೆಯಲು ಬೇಕಾಗುವಷ್ಟು ಮೊತ್ತದ ವಂತಿಗೆ ಮತ್ತು ಎರಡು, ಉದ್ಯೋಗದಾತರು (ಈ ಪ್ರಕರಣದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ನೌಕರನು ಅಂತಿಮವಾಗಿ ಪಡೆಯುವ ವೇತನದ ಶೇ.50 ರಷ್ಟು ಮೊತ್ತಕ್ಕೆ ಸಮನಾದ ಲಾಭವನ್ನು ತರುವಂತಹ ಮಾದರಿಯೆನಿಸುವ ಮತ್ತು ಮಾರ್ಪಡಿಸಿದ ವರ್ಷಾಶನಕ್ಕೆ ತನ್ನ ವಂತಿಗೆಯನ್ನು ಎನ್ಪಿಎಸ್ಗೆ ನೀಡಬಹುದು.
ಈ ರೀತಿಯ ವಿಧಾನವು ಸಾರ್ವಜನಿಕ ಬೊಕ್ಕಸದ ಮೇಲಿನ ಹೊರೆಯ ಪ್ರಮಾಣವನ್ನು ನಿವಾರಿಸುವುದಲ್ಲದೆ ಅದೇ ಸಂದರ್ಭದಲ್ಲಿ, ಪ್ರಸ್ತುತ ಒಪಿಎಸ್ ನೀಡುತ್ತಿರುವ ಮೊತ್ತಕ್ಕೆ ಸಮನಾದ ಪಿಂಚಣಿಯ ಭರವಸೆಯನ್ನು ನೀಡುತ್ತದೆ. ನಿಶ್ಚಿತ ಪಿಂಚಣಿಯು, ನೌಕರನು ತನ್ನ ಅಂತಿಮ ವೇತನವನ್ನು ಪಡೆದ ಶೇ.50 ರಷ್ಟು ಮೊತ್ತದೊಂದಿಗೆ ಒಪಿಎಸ್ಗೆ ಸಮನಾಗಿದ್ದು ಮತ್ತು ಇದು ಹಣದುಬ್ಬರ ಸೂಚಿಯಾಗಿದ್ದು, ಆದರೆ ನೌಕರರಿಂದ ಬರುವ ಈ ವಂತಿಗೆಯು ತೋರಿಕೆಯಂತೆ ಕಾಣುವ ಆಯ್ಕೆಯಾಗಿದ್ದು, ನೌಕರರಿಗೆ ಮತ್ತು ರಾಜ ಸರ್ಕಾರಗಳಿಗೆ ಸಮಾಧಾನಕರವಾಗಿರುತ್ತದೆ.
ಸ್ಪಷ್ಟವಾಗಿ, ಒಪಿಎಸ್ಗೆ ಹಿಂತಿರುಗುವುದಕ್ಕಾಗಿ ನೌಕರರ ಮುಷ್ಕರಕ್ಕೆ ರಾಜಕೀಯ ಬೆಂಬಲ ಹೆಚ್ಚುತ್ತಿರುವಾಗ, ಇದಕ್ಕೆ ನೀಡುವ ಉತ್ತರವು, ನೌಕರರ ವ್ಯಥೆಯನ್ನು ಶಮನಗೊಳಿಸುವಂತಿರಬೇಕು ಮತ್ತು ಪಿಂಚಣಿ ಹೊರೆ ಹೆಚ್ಚಳದ ಬಗ್ಗೆ ಚಿಂತಿಸುವವರ ಕಳವಳವನ್ನು ಸಹ ಒಂದು ನಿರ್ದಿಷ್ಟ ಮಟ್ಟಿಗೆ ನೀಗಿಸುವಂತಿರಬೇಕು. ಎನ್ಪಿಎಸ್ ವಂತಿಗೆಗಳು ಅತ್ಯಲ್ಪ ಎಂದು ಪರಿಗಣಿಸುವಂತಿಲ್ಲ. ಆದರೆ ಒಪಿಎಸ್ ಅಡಿಯಲ್ಲಿ ಒದಗಿಸಲಾದ ಸೌಲಭ್ಯಗಳು ಗಮನಾರ್ಹವಾಗಿ ಹೆಚ್ಚು ಎಂದು ನೋಡಲಾಗುತ್ತದೆ ಎಂದು ಆಯೋಗ ಹೇಳಿದೆ.












Click it and Unblock the Notifications