7th Pay Commission; ಸರ್ಕಾರದ ಆದೇಶ, ನೌಕರರ ನಿರೀಕ್ಷೆಗಳು
ಬೆಂಗಳೂರು, ನವೆಂಬರ್ 21; ಕರ್ನಾಟಕ ಸರ್ಕಾರ 7ನೇ ರಾಜ್ಯ ವೇತನ ಆಯೋಗವನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು ವೇತನ ಆಯೋಗವನ್ನು ರಚಿಸುವ ಬಗ್ಗೆ ಮಾನ್ಯ ಮುಖ್ಯ ಮಂತ್ರಿಗಳು ಘೋಷಣೆ ಮಾಡಿದ್ದರು.
ರಾಜ್ಯ ಸರ್ಕಾರದ ಆದೇಶದಂತೆ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರಾಗಿದ್ದಾರೆ. ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ ಸದಸ್ಯರಾಗಿದ್ದಾರೆ. ಮೂಲಸೌಲಭ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಕಾರ್ಯದರ್ಶಿಯಾಗಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವೇತನ/ ಭತ್ಯೆಗಳ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ರಚಿಸಿ ಆದೇಶ ಹೊರಡಿಸಿದ ಮುಖ್ಯಮಂತ್ರಿಗಳಿಗೆ ಧಾರವಾಡ ಜಿಲ್ಲೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೃತಜ್ಞತೆ ಸಲ್ಲಿಸಿದೆ. ಧಾರವಾಡ ಜಿಲ್ಲಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಫ್. ಸಿದ್ದನಗೌಡ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ.
ವೇತನ ಆಯೋಗ 6 ತಿಂಗಳಿನಲ್ಲಿ ವರದಿ ನೀಡಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ. ವರದಿ ಬಂದ ಬಳಿಕ ಸರ್ಕಾರ ತೆಗೆದುಕೊಳ್ಳುವ ತೀರ್ಮಾನದಿಂದ ರಾಜ್ಯದ 6 ಲಕ್ಷ ಸರ್ಕಾರಿ ಅಧಿಕಾರಿ, ನೌಕರರರು. 3.40 ಲಕ್ಷ ನಿಗಮ ಮಂಡಳಿ, ಪ್ರಾಧಿಕಾರ ಮತ್ತು ವಿಶ್ವವಿದ್ಯಾಲಯ, ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ 4 ಲಕ್ಷ ನಿವೃತ್ತ ನೌಕರರಿಗೆ ಲಾಭವಾಗಲಿದೆ.

ಆಡಳಿತ ಸುಧಾರಣೆಗೆ ಒತ್ತು
ಮುಖ್ಯಮಂತ್ರಿಗಳು ನೀಡಿದ ಭರವಸೆಯಂತೆ 7ನೇ ವೇತನ ಆಯೋಗವನ್ನು ರಚಿಸಿದ್ದಾರೆ. ಆದೇಶದಲ್ಲಿ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು, ತುಟ್ಟಿಭತ್ಯೆ ಸೂತ್ರವನ್ನು ನಿರ್ಧರಿಸುವುದು, ಮನೆ ಬಾಡಿಗೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಭತ್ಯೆಗಳ ಪ್ರಮಾಣವನ್ನು ಪರಿಶೀಲಿಸುವುದು, ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಲು ಸೂಚನೆ ನೀಡಲಾಗಿದೆ.
ಈ ಹಿಂದಿನ ವೇತನ ಆಯೋಗ ರಚನೆ ಸಂದರ್ಭದಲ್ಲಿ ವೇತನ ಶ್ರೇಣಿ ಪರಿಷ್ಕರಣೆ ಹಾಗೂ ಆಡಳಿತ ಸುಧಾರಣೆಗಳಿಗೆ ಒತ್ತು ನೀಡಿ ಆದೇಶಿಸಲಾಗುತ್ತಿತ್ತು. ಆದರೆ ಈಗ ಆಡಳಿತ ಸುಧಾರಣೆಗೆ ಸಂಬಂಧಿಸಿದಂತೆ ನಿವೃತ್ತ ಐಎಎಸ್. ಅಧಿಕಾರಿ ವಿಜಯಭಾಸ್ಕರ್ ನೇತೃತ್ವದ ಸಮಿತಿ ಇರುವುದರಿಂದ ಈ ಬಗ್ಗೆ ಪ್ರಸ್ತಾಪಿಸಿಲ್ಲ.

ಪರಿಷ್ಕೃತ ವೇತನ ಯಾವಾಗ ಕೈ ಸೇರಲಿದೆ
ಸರ್ಕಾರ ತನ್ನ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ಎಐಸಿಟಿಇ/ಐಸಿಎಆರ್/ಎನ್ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ) ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗಳಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂಡಂತೆ ಲಭ್ಯವಿರುವ ಎಲ್ಲಾ ಕ್ರೋಢೀಕೃತ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು, ಈ ಸಿಬ್ಬಂದಿಗಳ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸಬೇಕು ಎಂದು ಹೇಳಿದೆ.
ಆಯೋಗ ಆರು ತಿಂಗಳಿನಲ್ಲಿ ವರದಿ ನೀಡಲಿದ್ದು, 2023ನೇ ಮಾರ್ಚ್ ಅಂತ್ಯದೊಳಗೆ 7ನೇ ವೇತನ ಆಯೋಗದ ಪರಿಷ್ಕೃತ ವೇತನ ಶ್ರೇಣಿ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯುವ ನಿರೀಕ್ಷೆಯನ್ನು ಸರ್ಕಾರಿ ನೌಕರರು ಹೊಂದಿದ್ದಾರೆ.

ಕೇಂದ್ರದ ಮಾದರಿಯಲ್ಲಿಯೇ ಮನೆ ಬಾಡಿಗೆ ಭತ್ಯೆ
ಕರ್ನಾಟಕ ಸರ್ಕಾರವು ತನ್ನ ಆದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವೃಂದದ ಹುದ್ದೆಗಳನ್ನು ಸಮೀಕರಿಸಿ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದೆ. ರಾಜ್ಯ ಸರ್ಕಾರಿ ನೌಕರರು ಕೇಂದ್ರದ ಮಾದರಿಯಲ್ಲಿಯೇ ಮನೆ ಬಾಡಿಗೆ ಭ್ಯತ್ಯೆ, ನಗರ ಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆಗಳ ಪರಿಷ್ಕರಣೆ ಮಾಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ.
ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಮತ್ತು ವೈದ್ಯಕೀಯ ಮರುಪಾವತಿ ವಿವಿಧ ಭತ್ಯೆಗಳ ಪ್ರಮಾಣವನ್ನು ಸೌಲಭ್ಯಗಳನ್ನೊಳಗೊಂಡಂತೆ ಪರಿಶೀಲಿಸಬೇಕು ಮತ್ತು ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು ಸಲಹೆ ಮಾಡಬೇಕು ಎಂದು ತಿಳಿಸಿದೆ.

ಸರ್ಕಾರಿ ನೌಕರರ ಆರ್ಥಿಕ ನಿರೀಕ್ಷೆಗಳು
ವೇತನ ಆಯೋಗ ರಚನೆ ಸಂದರ್ಭದಲ್ಲಿ ನಿವೃತ್ತಿ ವೇತನ ಮತ್ತು ನಿವೃತ್ತಿ ಸೌಲಭ್ಯಗಳನ್ನು ಪರಿಶೀಲಿಸಬೇಕು. ರಾಜ್ಯ ಸರ್ಕಾರದಿಂದ ವಹಿಸಲ್ಪಡುವ/ ಸೂಚಿಸಬಹುದಾದ ಇತರೆ ವಿಷಯಗಳನ್ನು ಪರಿಶೀಲಿಸಬೇಕು ಎಂದು ಹೇಳಿದೆ. ಆಯೋಗವು ತನ್ನದೇ ಆದ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು ಹಾಗೂ ಪರಿಶೀಲನಾರ್ಹ ಅಂಶಗಳಿಗೆ ಅಗತ್ಯವೆನಿಸಿದ ಮಾಹಿತಿಗಳನ್ನು ವಿವಿಧ ಇಲಾಖೆಗಳಿಂದ ಪಡೆಯಬಹುದಾಗಿರುತ್ತದೆ ಎಂದು ಹೇಳಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ ಪ್ರಸ್ತುತ ರಾಜ್ಯದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ವೃಂದಗಳ ಒಟ್ಟು ನೌಕರರ ಮೂಲ ವೇತನ ರೂ. 23,908. ಪ್ರಸ್ತುತ ತುಟ್ಟಿಭತ್ಯೆ ದರ ಶೇ 31. ರೂ 7,411.48 ಕೋಟಿ. ಪ್ರಸ್ತುತ ಮೂಲ ವೇತನ + 31 % ತುಟ್ಟಿಭತ್ಯೆ ವಿಲೀನ ಸೇರಿ ಒಟ್ಟು ರೂ. 31.319 ಕೋಟಿ ಸೇರಿ ಷರಿಷ್ಕರಣೆ ನಂತರವೂ ಸರ್ಕಾರಕ್ಕೆ ಹೊರೆ ಆಗುವುದಿಲ್ಲ ಎಂದು ವಿವರ ನೀಡಿದೆ.

ಕರ್ನಾಟಕ ಸರ್ಕಾರದಿಂದ ನಿರೀಕ್ಷೆಗಳು
ಕರ್ನಾಟಕ ಸರ್ಕಾರ ತನ್ನ ಆದೇಶದಲ್ಲಿ ಎಲ್ಲಾ ಇಲಾಖೆಗಳು ಆಯೋಗವು ಅಪೇಕ್ಷಿಸುವ ಎಲ್ಲಾ ಮಾಹಿತಿ, ದಾಖಲೆ ಹಾಗೂ ಇನ್ನಿತರೆ ಸಹಕಾರವನ್ನು ಒದಗಿಸತಕ್ಕದ್ದು. ಎಲ್ಲಾ ಸೇವಾ ಸಂಘಟನೆಗಳು, ಸ್ಥಳೀಯ ಸಂಸ್ಥೆಗಳು, ಅನುದಾನಿತ ಸಂಸ್ಥೆಗಳು ಮತ್ತು ಇತರೆ ಸಂಬಂಧಪಟ್ಟವರು ಆಯೋಗಕ್ಕೆ ಅವುಗಳ ಸಂಪೂರ್ಣ ಸಹಕಾರ ಮತ್ತು ನೆರವನ್ನು ನೀಡಲಿದೆ. ವೇತನ ಆಯೋಗವು ತನ್ನ ವರದಿಯನ್ನು ಆರು ತಿಂಗಳೊಳಗೆ ಸಲ್ಲಿಸತಕ್ಕದ್ದು ಎಂದು ಹೇಳಿದೆ.
ನೌಕರರ ಸಂಘವು ಖಾಲಿ ಇರುವ ಹುದ್ದೆಗಳ ಭರ್ತಿ, ನೇಮಕಾತಿ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆ ಶಿಫಾರಸು, ಅನವಶ್ಯಕ ವೆಚ್ಚಗಳಿಗೆ ಕಡಿವಾಣ, ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳ ಸುಧಾರಣೆಯಾಗಲಿದೆ ಎಂದು ಸಹ ನಿರೀಕ್ಷೆ ಇಟ್ಟುಕೊಂಡಿದೆ.











Click it and Unblock the Notifications