Karnataka 7th pay commission; ಖಜಾನೆ ನೌಕರ ಸಂಘದ ಸಭೆ ಕರೆದ ಆಯೋಗ
ಬೆಂಗಳೂರು, ಸೆಪ್ಟೆಂಬರ್ 11; ಕರ್ನಾಟಕ ಸರ್ಕಾರ ರಚನೆ ಮಾಡಿರುವ 7ನೇ ವೇತನ ಆಯೋಗ ಯಾವಾಗ ಸರ್ಕಾರಕ್ಕೆ ವರದಿ ನೀಡಲಿದೆ? ಎಂಬುದು ಸರ್ಕಾರಿ ನೌಕರರ ಪ್ರಶ್ನೆ. ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿ ಪರಿಷ್ಕರಿಸಲು ಮತ್ತು ನೂತನ ವೇತನ ಶ್ರೇಣಿ ರಚನೆ ಇತ್ಯಾದಿಗಳನ್ನು ರೂಪಿಸಲು ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿದೆ.
ಕರ್ನಾಟಕ ರಾಜ್ಯ ಖಜಾನೆ ನೌಕರರ ಸಂಘದ ಸಭೆಯನ್ನು ಸೆಪ್ಟೆಂಬರ್ 12ರಂದು 7ನೇ ವೇತನ ಆಯೋಗ ಕರೆದಿದೆ. ಪತ್ರದ ಮೂಲಕ 7ನೇ ರಾಜ್ಯ ವೇತನ ಆಯೋಗದ ಕಾರ್ಯದರ್ಶಿಯಾದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಈ ಕುರಿತು ಮಾಹಿತಿ ನೀಡಿದ್ದಾರೆ. ಕರ್ನಾಟಕ ರಾಜ್ಯ ಖಜಾನೆ ನೌಕರರ ಸಂಘ, ಖಜಾನೆ ಆಯುಕ್ತಾಲಯ, ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಕೇಂದ್ರ ಬೆಂಗಳೂರು-01 ಇವರಿಗೆ ಪತ್ರವನ್ನು ಕಳಿಸಲಾಗಿದೆ.

ಪತ್ರದಲ್ಲಿನ ವಿಷಯ; ಸೆಪ್ಟೆಂಬರ್ 12ರ ಮಂಗಳವಾರ 1.20 ಗಂಟೆಗೆ ಸಭೆಯನ್ನು ಆಯೋಜನೆ ಮಾಡಲಾಗಿದೆ. ಸಂಘದ ಮುಖ್ಯಸ್ಥರೊಂದಿಗೆ ಸಂಘದ ಪ್ರತಿಕ್ರಿಯೆ/ ಬೇಡಿಕೆಗಳ ಕುರಿತು ಸಭೆ ನಡೆಯಲಿದೆ. 7ನೇ ರಾಜ್ಯ ವೇತನ ಆಯೋಗ ರಚನೆಯ ಸರ್ಕಾರದ ಆದೇಶ ದಿನಾಂಕ 19/11/2022. ಅಧಿಕೃತ ಜ್ಞಾಪನ ಪತ್ರ 17/01/2023 ಮತ್ತು ಕಛೇರಿ ಪತ್ರ ಸಂಖ್ಯೆ 10/02/2023 ಉಲ್ಲೇಖಿಸಲಾಗಿದೆ.
ಪತ್ರದಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಲು ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿದೆ ಎಂದು ತಿಳಿಸಿದೆ.
ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾರ್ಹ ಅಂಶಗಳ ಕುರಿತು ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು, ಸಂಘ ಸಂಸ್ಥೆಗಳಿಂದ ಮುಕ್ತ ಸಲಹೆ, ಅನಿಸಿಕೆ ಅಲ್ಲದೇ ಇಲಾಖೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆ ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ವಿವಿಧ ಪುಶ್ನಾವಳಿಗಳನ್ನು ರಚಿಸಿ ಕರ್ನಾಟಕ ರಾಜ್ಯಪತ್ರ-ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಿಸಿದೆ.
ಪ್ರಶ್ನಾವಳಿಗಳಿಗೆ ತಮ್ಮ ಸಂಘದ ವತಿಯಿಂದ ಪ್ರತಿಕ್ರಿಯೆಗಳು/ ಉತ್ತರಗಳು/ ಬೇಡಿಕೆಗಳು ಆಯೋಗದಲ್ಲಿ ಸ್ವೀಕೃತಗೊಂಡಿರುತ್ತದೆ. ಈ ಹಿನ್ನಲೆಯಲ್ಲಿ ಆಯೋಗ ತಮ್ಮ ಸಂಘದ ಬೇಡಿಕೆಗಳು/ ವಿನಂತಿಗಳು/ ಅಭಿಪ್ರಾಯಗಳ ಕುರಿತು ಚರ್ಚಿಸಲು ಇಚ್ಛಿಸುತ್ತದೆ ಎಂದು ವಿವರಣೆ ನೀಡಲಾಗಿದೆ.
ಆದ್ದರಿಂದ ದಿನಾಂಕ 12/09/2023ರಂದು, ಸಭಾ ಕೊಠಡಿ, 7ನೇ ರಾಜ್ಯ ವೇತನ ಆಯೋಗ, 3ನೇ ಮಹಡಿ, ಹಳೆಯ ಕಲ್ಲು ಕಟ್ಟಡ, ಔಷಧ ನಿಯಂತ್ರಣ ಸಂಕೀರ್ಣ, ಅರಮನೆ ರಸ್ತೆ, ಬೆಂಗಳೂರು ಇಲ್ಲಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಸಭೆಗೆ ತಮ್ಮ ಸಂಘದ ವತಿಯಿಂದ ಈ ಅಂಶಗಳನ್ನು ಒಳಗೊಂಡಿರುವ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತಪಡಿಸಬಹುದು ಎಂದು ಹೇಳಿದೆ. ಪ್ರಶ್ನಾವಳಿಯ ಉತ್ತರಗಳು, ಬೇಡಿಕೆಗಳು ಮತ್ತು ಇತರೆ ವಿಷಯಗಳ ಸಂಕ್ಷಿಪ್ತ ಮಾಹಿತಿ, ಮಾಹಿತಿಯು ವಸ್ತುನಿಷ್ಟ ಹಾಗೂ ನಿರ್ದಿಷ್ಟವಾಗಿರಲಿ. ಪ್ರಾತ್ಯಕ್ಷಿಕೆಯು 10 ಸ್ಲೈಡ್ಗಳಿಗೆ ಸೀಮಿತಗೊಳಿಸುವುದು. ಮಾಹಿತಿಯು/ ಸ್ಲೈಡ್ಗಳು ಪುನರಾವರ್ತನೆಯಾಗದಿರಲಿ, ಸಭೆಗೆ ಪೂರ್ವ ಸಿದ್ಧತೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಹಾಜರಾಗುವಂತೆ ಈ ಮೂಲಕ ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಲಾಗಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆಯೋಗಕ್ಕೆ ನಿಗದಿಪಡಿಸಿರುವ ಕಾಲಾವಧಿಯನ್ನು ದಿನಾಂಕ 19/5/2023 ರಿಂದ 6 ತಿಂಗಳು ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ನವೆಂಬರ್ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ನೀಡುವ ನಿರೀಕ್ಷೆ ಇದೆ.
ರಾಜ್ಯ 7ನೇ ವೇತನ ಆಯೋಗ ವೇತನ, ಭತ್ಯೆ, ಪಿಂಚಣಿ, ರಜೆ ಸೌಲಭ್ಯ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಸರ್ಕಾರದ ವಿವಿಧ ಇಲಾಖೆಗಳ ನೌಕರರ ಜೊತೆ ಸಭೆಗಳನ್ನು ನಡೆಸುತ್ತಿದೆ. ನೌಕರರ ಸಂಘದ ಅಭಿಪ್ರಾಯಗಳನ್ನು ಸಂಗ್ರಹಿಸಿ ತನ್ನ ಪರಿಶೀಲನಾ ಅಂಶಗಳಿಗೆ ಸೇರ್ಪಡೆ ಮಾಡಿಕೊಳ್ಳುತ್ತಿದೆ. ಅಂತಿಮ ವರದಿಯಲ್ಲಿ ಎಷ್ಟು ವೇತನ ಹೆಚ್ಚಳಕ್ಕೆ ಶಿಫಾರಸು ಮಾಡಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications