7th pay commission: ಕೇರಳ ಮಾದರಿ ಭತ್ಯೆ, ವೇತನ ಏರಿಕೆ ಏನು?
ಬೆಂಗಳೂರು, ಮಾರ್ಚ್ 06: ಕರ್ನಾಟಕದ ಸರ್ಕಾರಿ ನೌಕರರ ಸಂಘ ಮತ್ತು ಸರ್ಕಾರಿ ಸಚಿವಾಲಯದ ನೌಕರರ ಸಂಘವು ವೇತನ, ಭತ್ಯೆ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ಮುಂದೆ ಮನವಿ ಸಲ್ಲಿಕೆ ಮಾಡಿದೆ.
ಈ ಮನವಿಗಳಲ್ಲಿ ಕೇಂದ್ರ ಸರ್ಕಾರದ ಮಾದರಿ, ಕೇರಳ ರಾಜ್ಯದ ಮಾದರಿಯಲ್ಲಿ ವೇತನ, ಭತ್ಯೆಗಳನ್ನು ಹೆಚ್ಚಿಸಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಏನಿದು ಕೇರಳ ಮಾದರಿಯ ಭತ್ಯೆ, ವೇತನ ಹೆಚ್ಚಳ ಎಂಬ ವಿವರ ಇಲ್ಲಿದೆ.

ಕರ್ನಾಟಕದ ಕಾಂಗ್ರೆಸ್ ಸರ್ಕಾರ 2023ರ ನವೆಂಬರ್ನಲ್ಲಿ ರಾಜ್ಯ 7ನೇ ವೇತನ ಆಯೋಗದ ಅವಧಿಯನ್ನು 15/3/2024ರ ತನಕ ವಿಸ್ತರಣೆ ಮಾಡಿದೆ. ಆಯೋಗದ ವರದಿಯನ್ನು ಸರ್ಕಾರ ಸ್ವೀಕಾರ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.
ಏನಿದು ಕೇರಳ ಮಾದರಿ?: ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ ದರಗಳಲ್ಲಿ ಉಂಟಾಗಿರುವ ವ್ಯತ್ಯಾಸಗಳನ್ನು ಕರ್ನಾಟಕ ಸರ್ಕಾರಿ ನೌಕರರ ಸಂಘ ಪಟ್ಟಿ ಮಾಡಿದೆ.
ಕೇಂದ್ರ ಹಾಗೂ ಇತರೆ ರಾಜ್ಯಗಳ ವಾರ್ಷಿಕ ವೇತನ ಬಡ್ತಿ ದರಗಳ ವ್ಯತ್ಯಾಸ. ಕೇಂದ್ರ ಸರ್ಕಾರ ಶೇ 3 ಮತ್ತು ಕೇರಳ ಸರ್ಕಾರ ಶೇ 3.04, ಕರ್ನಾಟಕ ಸರ್ಕಾರ ಶೇ 2.35ರಷ್ಟು ಎಂದು ವೇತನ ಆಯೋಗಕ್ಕೆ ಮನವಿಯಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರವು 6ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಿದ ಸಂದರ್ಭದಲ್ಲಿ ಪೇ ಬ್ಯಾಂಡ್ ವ್ಯವಸ್ಥೆ ಜೊತೆಗೆ ವಾರ್ಷಿಕ ವೇತನ ಬಡ್ತಿ ದರಗಳನ್ನು ನಿರ್ಧಿಷ್ಟ ಪ್ರಮಾಣಕ್ಕೆ ಬದಲಾಗಿ ಮೂಲ ವೇತನದ ಶೇ. 3 ರಷ್ಟು ವೇತನ ಬಡ್ತಿ ದರವನ್ನು ದಿನಾಂಕ 01/01/2006ರಿಂದ ಜಾರಿ ಮಾಡಿ ಇಂದಿನವರೆಗೂ ಮುಂದುವರಿಸಿರುತ್ತದೆ.
ಕೇಂದ್ರ ಸರ್ಕಾರಿ ನೌಕರರಿಗೆ ವಾರ್ಷಿಕ ಬಡ್ಡಿ ದರವನ್ನು ಶೇ. 3 ಹಾಗೂ ಕೇರಳ ರಾಜ್ಯ ಸರ್ಕಾರವು ಶೇ. 3.04 ರಷ್ಟು ವಾರ್ಷಿಕ ವೇತನ ಬಡ್ತಿ ದರವನ್ನು ನೀಡುತ್ತಿವೆ. ಕರ್ನಾಟಕ ಸರ್ಕಾರವು ಶೇ. 2.35 ನೀಡುತ್ತಿದ್ದು, ಇದರಿಂದ ರಾಜ್ಯ ಸರ್ಕಾರ ತನ್ನ ನೌಕರರಿಗೆ ನೀಡುತ್ತಿರುವ ವಾರ್ಷಿಕ ವೇತನ ಬಡ್ತಿ ಒಂದರಲ್ಲೇ ಹಲವು ವರ್ಷಗಳಿಂದ ರಾಜ್ಯ ಸರ್ಕಾರಿ ನೌಕರರು ಆರ್ಥಿಕ ನಷ್ಟಕ್ಕೆ ಗುರಿಯಾಗಿರುತ್ತಾರೆ.
ವಾರ್ಷಿಕ ವೇತನ ಬಡ್ತಿ ದರವನ್ನು ಕೇರಳ ರಾಜ್ಯ ಸರ್ಕಾರದ ಮಾದರಿಯಲ್ಲಿ ಕನಿಷ್ಠ ಮೂಲವೇತನಕ್ಕೆ ಶೇ. 3.04 ರಷ್ಟು ವೇತನ ಬಡ್ತಿ ದರವನ್ನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ವೇತನ ಆಯೋಗಕ್ಕೆ ಮನವಿ ಮಾಡಲಾಗಿದೆ.
ಕೇರಳ ರಾಜ್ಯ ಸರ್ಕಾರಿ ನೌಕರರಿಗೆ ಹೊಲಿಸಿದಲ್ಲಿ ರಾಜ್ಯ ಸರ್ಕಾರಿ ನೌಕರರ ಮೂಲ ವೇತನವು ಕಡಿಮೆ ಇರುತ್ತದೆ. ಕೇರಳದಲ್ಲಿ ವಾರ್ಷಿಕ ಮುಂಬಡ್ತಿ ದರ ಶೇ 3.04 ಇದ್ದು, ರಾಜ್ಯದಲ್ಲಿ ಮೂಲ ವೇತನ ಹೆಚ್ಚಳದ ಸಂದರ್ಭದಲ್ಲಿ ಕೇರಳ ಮಾದರಿ ಅನುಸರಿಸಬೇಕು ಎಂದು ಆಯೋಗಕ್ಕೆ ಮನವಿ ಸಲ್ಲಿಸಲಾಗಿದೆ.
ಕೇರಳ ರಾಜ್ಯದಲ್ಲಿ ತುಟ್ಟಿಭತ್ಯೆದರವು ಶೇ 34ರಷ್ಟಿದ್ದು, ರಾಜ್ಯ ಸರ್ಕಾರದಲ್ಲಿ ಈ ದರವು ಶೇ 31ರಷ್ಟು ಆಗಿದೆ. ಈ ದರ ಕಡಿಮೆ ಇದೆ ಎಂದು ವೇತನ ಆಯೋಗಕ್ಕೆ ಸರ್ಕಾರಿ ನೌಕರರ ಸಂಘ ಹೇಳಿದೆ.
ರಾಜ್ಯ 7ನೇ ವೇತನ ಆಯೋಗ ಸರ್ಕಾರಿ ನೌಕರರಿಗೆ ಪ್ರಶ್ನಾವಳಿಯನ್ನು ಸಿದ್ಧಪಡಿಸಿತ್ತು. ಈ ಪ್ರಶ್ನಾವಳಿಗಳಿಗೆ ಉತ್ತರ ನೀಡುವಾಗ ಅನುಕೂಲವಾಗುವ ಕೇಂದ್ರ ಮತ್ತು ಕೇರಳ ರಾಜ್ಯ ನೌಕರರ ವೇತನ ಭತ್ಯೆಗಳನ್ನು ಪರಿಗಣಿಸುವುದು ಎಂದು ಉತ್ತರ ನೀಡಲಾಗಿದೆ.












Click it and Unblock the Notifications