ಶಾಲಾ ಶಿಕ್ಷಣ ಇಲಾಖೆಯಲ್ಲಿ ಶೇ.70ರಷ್ಟು ಹುದ್ದೆ ಕಡಿತ?
ಪ್ರತಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲೂ ಒಬ್ಬರು ಪ್ರಿನ್ಸಿಪಾಲ್, ನಾಲ್ವರು ಹಿರಿಯ ಉಪನ್ಯಾಸಕರು, ಹಾಗೂ 4 ಉಪನ್ಯಾಸಕರಿಗೆ ಸೀಮಿತಗೊಳಿಸಲಾಗುತ್ತದೆ
ಬೆಂಗಳೂರು, ಫೆಬ್ರವರಿ 3: ಕರ್ನಾಟಕ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಗಳಲ್ಲಿ ಬರೋಬ್ಬರಿ ಶೇಕಡ 70ರಷ್ಟು ಹುದ್ದೆಗಳನ್ನು ಕಡಿತ ಮಾಡಲು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಚಿಂತನೆ ನಡೆಸಿದೆ.
ಅನಗತ್ಯ ಸಿಬ್ಬಂದಿ ತಗ್ಗಿಸುವ ಉದ್ದೇಶದಿಂದ ಡಯಟ್ಗಳಲ್ಲಿನ ಹುದ್ದೆಗಳ ಕಡಿತ ಚಿಂತನೆ ಮಾಡಲಾಗಿದೆ ಎಂದು ಪ್ರಜಾವಾಣಿ ವರದಿ ಮಾಡಿದೆ. ಪ್ರತಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲೂ ಒಬ್ಬರು ಪ್ರಿನ್ಸಿಪಾಲ್, ನಾಲ್ವರು ಹಿರಿಯ ಉಪನ್ಯಾಸಕರು, ಹಾಗೂ 4 ಉಪನ್ಯಾಸಕರಿಗೆ ಸೀಮಿತಗೊಳಿಸಿಬೇಕಿದೆ. ಅದಕ್ಕಾಗಿ ಶೇಕಡ 70ರಷ್ಟು ಹುದ್ದೆಗಳನ್ನು ರದ್ದು ಮಾಡಬಹುದು ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೀಶ್ ಕುಮಾರ್ ಸಿಂಗ್ ಅವರು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ಪ್ರಸ್ತಾವ ಸಲ್ಲಿಸಿದ್ದಾರೆ.
ಈ ಪ್ರಸ್ತಾವ ಅನುಷ್ಠಾನಕ್ಕೆ ಬಂದರೆ ಶೇಕಡ 70ರಷ್ಟು ಹುದ್ದೆಗಳು ಕಡಿತವಾಗಲಿರುವುದರಿಂದ ಈ ನಿರ್ಧಾರಕ್ಕೆ ಕರ್ನಾಟಕ ಶಿಕ್ಷಣ ಸೇವೆಯ(ಕೆಇಎಸ್) ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಶಾಲಾ ಶಿಕ್ಷಕರು ಹಾಗೂ ಪ್ರೈಮರಿ ಹಂತದ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಜವಾಬ್ದಾರಿ ನಿಭಾಯಿಸಬೇಕಿರುವ ಈ ಸಮಯದಲ್ಲಿ ಶಿಕ್ಷಣ ಇಲಾಖೆ ಈ ಕ್ರಮ ಸರಿಯಲ್ಲ ಎಂದು ಅಭಿಪ್ರಾಯವ್ಯಕ್ತಪಡಿದ್ದಾರೆ.
Breaking; ಶಿಕ್ಷಕರ ಸ್ಥಳ ನಿಯುಕ್ತಿ ಕೌನ್ಸಿಲಿಂಗ್ಗೆ ತಡೆ
ಕರ್ನಾಟಕದ ಹೊಸ ಜಿಲ್ಲೆಯಾಗಿರುವ ವಿಜಯನಗರ ಹೊರತುಪಡಿಸಿ ರಾಜ್ಯದಲ್ಲಿ 34 ಡಯಟ್ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ರಾಜ್ಯದೆಲ್ಲೆಡೆ ಈಗ ಪ್ರಾಂಶುಪಾಲರು ಉಪನ್ಯಾಸಕರು ಸೇರಿದಂತೆ ಪ್ರಸ್ತುತ 711 ನೌಕರರು ಕೆಲಸ ಮಾಡುತ್ತಿದ್ದಾರೆ. ಇಲಾಖೆಯಲ್ಲಿ ಹುದ್ದೆಗಳ ಕಡಿತ ಮಾಡಿದರೆ ಹಿರಿಯ ಉಪನ್ಯಾಸಕರು ಬಿಇಒ, ಡಿಡಿಪಿಐ ಕಚೇರಿಗಳಲ್ಲಿನ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಹಾಗೂ ಉಪನ್ಯಾಸಕರು ಪ್ರೌಢಶಾಲಾ ಮುಖ್ಯ ಶಿಕ್ಷಕರ ಹುದ್ದೆಗೆ ಹೊರಡಬೇಕಿರುತ್ತದೆ.
ಎಲ್ಲ ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಳ, ವಿವಿಧ ತರಬೇತಿಗಳ ನಿರಂತರ ಆಯೋಜನೆ, ಶಿಕ್ಷಣ ಪೂರ್ವ ತರಗತಿಗಳಿಗೆ ಪಾಠ, ವಸ್ತುನಿಷ್ಠ ಸಮೀಕ್ಷೆ, ಆಧ್ಯಯನ, ವಿವಿಧ ಪರೀಕ್ಷೆಗಳನ್ನು ನಡೆಸುವ ಹೊಣೆಗಾರಿಕೆಯನ್ನು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಶಿಕ್ಷಕರು ನಡೆಸುತ್ತಾ ಬಂದಿದ್ದಾರೆ. ಎನ್ಇಪಿ ಜಾರಿಗಾಗಿ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳಲ್ಲಿ ಸೇವಾಪೂರ್ವ ಶಿಕ್ಷಕರ ಸಂಯೋಜಿತ ಬಿಇಡಿ ಕೋರ್ಸ್ಗಳನ್ನು ಆರಂಭಿಸಲಾಗುತ್ತದೆ. ಗುಣಮಟ್ಟ ಶಿಕ್ಷಣಕ್ಕಾಗಿ ಪ್ರತಿ ಜಿಲ್ಲೆಯಲ್ಲೂ 5ರಿಂದ 6 ಸಾವಿರ ಶಿಕ್ಷಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿಭಾಯಿಸಲಾಗುತ್ತಿದೆ.
ಪ್ರೌಢಶಾಲಾ ಶಿಕ್ಷಕರ ನೇಮಕ: ಅಧಿಸೂಚನೆ ಯಾವಾಗ, ಎಷ್ಟು ಹುದ್ದೆಗಳು, ಮೀಸಲೆಷ್ಟು? ಇಲ್ಲಿ ತಿಳಿಯಿರಿ
ಪಿಯು ಉಪನ್ಯಾಸಕರಿಗೂ ತರಬೇತಿ
ಪ್ರಾಥಮಿಕ ಹಂತದ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2022ರ ಶಿಫಾರಸ್ಸಿನಂತೆ ಪ್ರತಿ ಜಿಲ್ಲೆಯಲ್ಲೂ ಅಂಗನವಾಡಿ ಶಿಕ್ಷಕರಿಗೆ ಸೇವಾನಿರತರಂತೆಯೇ ತರಬೇತಿ ನೀಡಿ ಹೆಚ್ಚುವರಿಯಾಗಿ ಕಾರ್ಯನಿರ್ವಹಣೆ ಮಾಡಬೇಕಿದೆ. ಇವರಿಗೆ ತರಬೇತಿ ನೀಡಲಬೇಕಿದೆ. ಪದವಿ ಪೂರ್ವ ಶಿಕ್ಷಣವನ್ನು ಹಿರಿಯ ಪ್ರೌಢಶಾಲೆಗಳಾಗಿ ಸರ್ಕಾರ ಮರು ರೂಪಿಸುತ್ತಿದ್ದು, ಪಿಯು ಉಪನ್ಯಾಸಕರಿಗೂ ಡಯಟ್ಗಳಲ್ಲಿ ತರಬೇತಿ ಅಯೋಜಿಸಲಾಗುತ್ತಿದೆ.
ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿ
ಶಾಲೆಗಳಿಗೆ ಭೇಟಿ ನೀಡಿ ಸಲಹೆ ಮತ್ತು ತರಬೇತಿಯನ್ನು ನೀಡಲು ಡಯಟ್ಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ಇಂತಹ ಸಮಯದಲ್ಲಿ ಇಲಾಖೆಯ ನಿರ್ಧಾರ ಗುಣಮಟ್ಟದ ಶಿಕ್ಷಣಕ್ಕೆ ಅಡ್ಡಿಯಾಗತ್ತದೆ ಎನ್ನಲಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಹುದ್ದೆಗಳನ್ನು ದ್ವಿಗುಣಗೊಳಿಸುವ ಮೂಲಕ ಬಲಪಡಿಸಲಾಗಿದೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲೂ ಅನುಸರಿಸಬೇಕು ಎಂದು ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಜಿ. ಅಂಜನಪ್ಪ ಅಭಿಪ್ರಾಯಪಟ್ಟಿದ್ದಾರೆ.
ಡಾ. ರಾಜಾರಾಮಣ್ಣ ವರದಿ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಗ್ರಾಮೀಣ ವಿಶ್ವವಿದ್ಯಾನಿಲಯಗಳಂತೆ ಅಭಿವೃದ್ಧಿಪಡಿಸಲು 2003ರಲ್ಲಿ ಡಾ. ರಾಜಾರಾಮಣ್ಣ ಅವರ ನೇತೃತ್ವದ ಸಮಿತಿ ಶಿಫಾರಸು ಮಾಡಿತ್ತು. ಆದರೆ ಆ ವರದಿ ಇದುವರೆಗೂ ಜಾರಿಯಾಗಿಲ್ಲ. ಡಯಟ್ಗಳ ಹುದ್ದೆಗಳು ಕೇಂದ್ರ ಸರ್ಕಾರದ ನಿರ್ದೇಶನ ಹಾಗೂ ಸಂರಂಚನೆಯ ರೀತಿ ದೇಶದ ಎಲ್ಲ ರಾಜ್ಯಗಳಲ್ಲೂ ಒಂದೇ ಮಾದರಿಯಲ್ಲಿದೆ. ಉಪನ್ಯಾಸಕರು ಮತ್ತು ಇತರೆ ಸಿಬ್ಬಂದಿಯ ಶೇಕಡ 60ರಷ್ಟು ನೌಕರರ ವೇತನವನ್ನು ಕೇಂದ್ರ ಸರ್ಕಾರ ನೀಡುತ್ತದೆ.
ಚೈತನ್ಯಶೀಲ ಹಾಗೂ ಉನ್ನತ ಗುಣಮಟ್ಟ
ಅನ್ವೇಷಿಕ ಶಿಕ್ಷಣ ಶಾಸ್ತ್ರ, ಪಠ್ಯಕ್ರಮ ನಿರ್ವಹಣೆ, ವೃತ್ತಿಪರ ಅಭಿವೃದ್ಧಿ, ಸಮೀಕ್ಷೆ ಹಾಗೂ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿಯ ಮೂಲಕ ಶಿಕ್ಷಕರ ತರಬೇತಿ ಮರು ರೂಪಿಸಲಾಗುವುದು. ಅದಕ್ಕಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳನ್ನು ಚೈತನ್ಯಶೀಲ ಹಾಗೂ ಉನ್ನತ ಗುಣಮಟ್ಟದ ಸಂಸ್ಥೆಗಳಾಗಿ ಅಭಿವೃದ್ಧಿಗೊಳಿಸಲಾಗುವುದು ಎಂದು ಮೊನ್ನೆ ಫೆ. 1ರಂದು ಮಂಡಿಸಲಾದ ಕೇಂದ್ರ ಬಜೆಟ್ 2023ರಲ್ಲೂ ವಿವರಿಸಲಾಗಿದೆ.