ಕೋರ್ಟ್ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ಗೆ ಜಾಮೀನು ಮಂಜೂರು
ಬೆಂಗಳೂರು, ಮಾ. 05: ನ್ಯಾಯಾಲಯದ ಆವರಣದಲ್ಲಿ ಗಲಭೆ ನಡೆದ ಪ್ರಕರಣ ಸಂಬಂಧ ವಕೀಲ ಜಗದೀಶ್, ಅವರ ಪುತ್ರ ಆರ್ಯಗೌಡ ಮತ್ತು ಪ್ರಶಾಂತಿ ಸುಭಾಷ್, ಶರತ್ ಖದ್ರಿ ಅವರಿಗೆ 68 ನೇ ಸಿಟಿ ಸಿವಿಲ್ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯದ ಆವರಣದಲ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ವಕೀಲ ಜಗದೀಶ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. 68 ನೇ ಹೆಚ್ಚುವರಿ ಸಿಟಿ ಸಿವಿಲ್ ನ್ಯಾಯಾಲಯದ ನ್ಯಾ. ಕಾಶಿಂ ಚೂರಿಖಾನ್ ಅವರು ಜಾಮೀನು ನೀಡಿ ಶನಿವಾರ ಆದೇಶ ಹೊರಡಿಸಿದರು. ಜಗದೀಶ್ ಅವರಿಗೆ ಜಾಮೀನು ಸಿಕ್ಕರೂ ಬಾಕಿ ಎರಡು ಪ್ರಕರಣದಲ್ಲಿ ಜಾಮೀನು ಸಿಗುವ ವರೆಗೂ ಜೈಲಿನಿಂದ ಬಿಡುಗಡೆಯಾಗುವ ಅವಕಾಶವಿಲ್ಲ.
ಐವತ್ತು ಸಾವಿರ ರೂ. ಮೊತ್ತದ ಭದ್ರತಾ ಬಾಂಡ್, ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗಬೇಕು. ಸಾಕ್ಷಿಗಳನ್ನು ಹೆದರಿಸುವಂತಿಲ್ಲ. ಪ್ರಾಸಿಕ್ಯೂಷನ್ ಸಾಕ್ಷಿಗಳಿಗೆ ಸಾಮಾಜಿಕ ಜಾಲ ತಾಣ ಬಳಿಸಿ ಬೆದರಿಕೆ ಹಾಕಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಗದೀಶ್ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಶರತ್ ಖಾದ್ರಿ, ಪ್ರಶಾಂತಿ ಸುಭಾಷ್, ಜಗದೀಶ್ ಪುತ್ರ ಆರ್ಯಗೌಡ ಅವರಿಗೂ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ಬಹು ಚರ್ಚೆಗೆ ನಾಂದಿ ಹಾಡಿದ್ದ ಕೋರ್ಟ್ ಆವರಣದ್ಲಿ ನಡೆದ ಗಲಾಟೆ ಪ್ರಕರಣ ಸಂಬಂಧ ವಕೀಲ ನಾರಾಯಣಸ್ವಾಮಿ ನೀಡಿದ್ದ ದೂರಿನ ಪ್ರಕರಣದಲ್ಲಿ ಜಾಮೀನು ಸಿಕ್ಕಿದೆ. ಬಾಕಿ ಎರಡು ಪ್ರಕರಣದಲ್ಲಿ ಜಾಮೀನು ಸಿಕ್ಕ ನಂತರ ಜಗದೀಶ್ ಅವರಿಗೆ ಬಿಡುಗಡೆ ಭಾಗ್ಯ ಸಿಗಲಿದೆ.

ಜಾತಿ ನಿಂದನೆ ಪ್ರಕರಣದ ಪ್ರಕರಣದ ಜಾಮೀನು ಮಾ. 07:
ವಕೀಲ ಜಗದೀಶ್ ಮಹದೇವ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಜಾತಿ ನಿಂದನೆ ಪ್ರಕರಣದದ ಜಾಮೀನು ಅರ್ಜಿ ತೀರ್ಪು ಮಾ. 07 ಕ್ಕೆ ಕಾಯ್ದಿರಿಸಲಾಗಿದೆ. ಜತೆಗೆ ಪೊಲೀಸ್ ಆಯುಕ್ತ ಕಮಲಪಂತ್ ಅವರ ಕಚೇರಿಯಲ್ಲಿ ಪೇದೆ ರಮೇಶ್ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಬೆದರಿಕೆ ಹಾಕಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಅರ್ಜಿ ವಿಚಾರಣೆ ಬಾಕಿಯಿದೆ. ಹೀಗಾಗಿ ಬಾಕಿ ಎರಡು ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ವಕೀಲ ಜಗದೀಶ್ ಜೈಲಿನಿಂದ ಬಿಡುಗಡೆಯಾಗಲಿದೆ.
ಪೊಲೀಸ್ ಪೇದೆ ರಮೇಶ್ಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದಲ್ಲಿ ವಿಧಾನಸೌಧ ಪೊಲೀಸರು ಬಾಡಿ ವಾರಂಟ್ ಹೊರಡಿಸಿಲ್ಲ. ಈ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಈ ವಿಚಾರವನ್ನು ನ್ಯಾಯಾಧೀಶರ ಗಮನಕ್ಕೂ ತರಲಾಗಿದೆ. ಮಾ. 07 ರಂದು ಜಾತಿ ನಿಂದನೆ ಪ್ರಕರಣದಲ್ಲಿ ಜಾಮೀನು ಅರ್ಜಿ ತೀರ್ಪು ಹೊರ ಬಂದ ಬಳಿಕ ಜಗದೀಶ್ ಬಿಡುಗಡೆ ವಿಚಾರ ಗೊತ್ತಾಗಲಿದೆ ಎಂದು ಜಗದೀಶ್ ಪರ ವಕೀಲ ಹರೀಶ್ ಪ್ರಭು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಜಾತಿ ನಿಂದನೆ ಪ್ರಕರಣ:
ಕುಮಾರಸ್ವಾಮಿ ಲೇಔಟ್ ನಿವಾಸಿ ಮುತ್ತಯ್ಯ ಎಂಬುವರು ವಕೀಲ ಜಗದೀಶ್ ವಿರುದ್ಧ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಜಾಮೀನು ಕೋರಿ ವಕೀಲ ಜಗದೀಶ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಮಾ. 07 ಕ್ಕೆ ತೀರ್ಪು ಕಾಯ್ದಿರಿಸಲಾಗಿದೆ. ಇನ್ನು ಪೊಲೀಸ್ ಕಾನ್ಸ್ಟೇಬಲ್ ರಮೇಶ್ ಗೆ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ಬಾಕಿಯಿದ್ದು, ಮಾ. 07 ರ ನಂತರ ಜಗದೀಶ್ ಬಿಡುಗಡೆಯ ಅಸಲಿ ಸಂಗತಿ ಹೊರ ಬೀಳಲಿದೆ.
ಸಂತಸ:
ವಕೀಲ ಜಗದೀಶ್ ಅವರಿಗೆ ಕೋರ್ಟ್ ಗಲಾಟೆ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವ ವಿಚಾರ ಗೊತ್ತಾಗುತ್ತಿದ್ದಂತೆ ಜಗದೀಶ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ಜಗದೀಶ್ ವಾಪಸು ಬರಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications