ಎಚ್ಡಿಕೆ ರಾಜೀನಾಮೆ ಹೇಳಿಕೆಗೆ ಕಾರಣವಾಗಿದ್ದು 5 ನಾಯಕರು!
Recommended Video

ಬೆಂಗಳೂರು, ಜನವರಿ 28 : 'ಕೆಲವರಿಗೆ ನನ್ನ ಕಾರ್ಯ ವೈಖರಿ ಇಷ್ಟ ಆಗುತ್ತಿಲ್ಲ ಎಂದರೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ' ಎಂಬ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಭಾರಿ ಚರ್ಚೆ ಆರಂಭವಾಗಿದೆ.
ಸೋಮವಾರ ಎಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಕಾರಣ. ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಶಾಸಕರು ನೇರವಾಗಿ ಕಾರಣರು.
ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಬಳಿಕ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಂಡಿದ್ದು, ಸರ್ಕಾರ ಸುಭದ್ರವಾಗಿದೆ ಎಂಬ ಸಂದೇಶವನ್ನು ಕಳಿಸಲು ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ಸಹ ಮುಖ್ಯಮಂತ್ರಿಗಳ ಹೇಳಿಕೆ ಮುಂದಿಟ್ಟುಕೊಂಡು ಟೀಕಾಪ್ರಹಾರ ನಡೆಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆ ಹೇಳಿಕೆಗೆ ಕಾರಣವಾದ 5 ಹೇಳಿಕೆಗಳು ಇಲ್ಲಿವೆ. ಸಮ್ಮಿಶ್ರ ಸರ್ಕಾರ ರಚನೆಯಾಗಿದ್ದರೂ ಜೆಡಿಎಸ್ಗೆ ಆಡಳಿತ ನಡೆಸಲು ಕಾಂಗ್ರೆಸ್ ಬಿಡುತ್ತಿಲ್ಲ ಎಂಬ ಆರೋಪವೂ ಬಲವಾಗಿ ಕೇಳಿಬರುತ್ತಿದೆ.
ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಕಾರಣವಾಗಿರುವುದು ಸಿದ್ದರಾಮಯ್ಯ ಆಪ್ತರು ಹೇಳಿರುವ ಮಾತುಗಳು, ಅವುಗಳೇನು? ಎಂಬುದನ್ನು ಚಿತ್ರದಲ್ಲಿ ನೋಡಿ....

ಡಾ.ಕೆ.ಸುಧಾಕರ್ ಹೇಳಿಕೆ
ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರು, 'ಸಿದ್ದರಾಮಯ್ಯ ನಮ್ಮ ಪಾಲಿಗೆ ಮಾಜಿ ಸಿಎಂ ಅಲ್ಲ. ಇವತ್ತಿಗೂ ಮುಖ್ಯಮಂತ್ರಿ ಆಗಿಯೇ ಇದ್ದಾರೆ. ಒಬ್ಬರ ಮೇಲೆ ಇನ್ನೊಬ್ಬರು ದೂರುವುದು, ಅಪಪ್ರಚಾರ ಮಾಡುವುದು ರಾಜಕೀಯದಲ್ಲಿ ಸಹಜ. ಮಹಾಭಾರತದಲ್ಲಿ ಶಕುನಿ ಧರ್ಮರಾಯನನ್ನು ಮೋಸದಿಂದ ಸೋಲಿಸಿದ ಹಾಗೆ ಸಿದ್ದರಾಮಯ್ಯ ಅವರನ್ನು ದೂರಿ ಚುನಾವಣೆಯಲ್ಲಿ ಸೋಲಿಸಿದ್ದಾರೆ. ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ' ಎಂದು ಹೇಳಿದ್ದರು.

ಸಚಿವ ಪುಟ್ಟರಂಗ ಶೆಟ್ಟಿ
ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗ ಶೆಟ್ಟಿ ಅವರು, 'ನಮ್ಮೊಂದಿಗೆ ಹಿಂದುಳಿದ ವರ್ಗದ ನಾಯಕರಿದ್ದಾರೆ. ಕಾರಣಾಂತರದಿಂದಾಗಿ ಅವರು ಸಿಎಂ ಆಗದಿರಬಹುದು. ಆದರೆ, ನಮ್ಮಲ್ಲಿ ಆಗುವ ಸಮಸ್ಯೆಯನ್ನು ನಾವು ಸಿದ್ದರಾಮಯ್ಯ ಅವರ ಮುಂದೆಯೇ ಹೇಳಿಕೊಳ್ಳುತ್ತೇವೆ ವಿನಃ ಬೇರೆಯವರ ಬಳಿ ಅಲ್ಲ' ಎಂದು ಹೇಳಿಕೆ ನೀಡಿದ್ದರು.

ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು
ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು, 'ಬಸವಣ್ಣ ಅವರ ತತ್ವವನ್ನು ಪಾಲಿಸುವಂತೆ ಮಾಡಿದವರು ಯಾರೋ ನಿನ್ನೆ ಮುಖ್ಯಮಂತ್ರಿ ಆದವರಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದು, ಅವರು ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುತ್ತಿದ್ದರು. ಕೆಂಪೇಗೌಡರ ಜಯಂತಿ ಮಾಡಿದ್ದು, ಸಿದ್ದರಾಮಯ್ಯ ಅವರೇ ಹೊರತು ಯಾವ ಮಣ್ಣಿನ ಮಕ್ಕಳು ಅಲ್ಲ' ಎಂದು ಹೇಳಿದ್ದರು.

ಸಿದ್ದರಾಮಯ್ಯ ಜಪ ಮಾಡುತ್ತೇನೆ
ಸಚಿವ ಎಂ.ಟಿ.ಬಿ.ನಾಗರಾಜ್ ಅವರು, 'ಆಂಜನೇಯನ ಎದೆ ಬಗೆದರೆ ಹೇಗೆ ರಾಮ ಕಾಣುತ್ತಾನೋ ಹಾಗೆಯೇ ನನ್ನ ಎದೆ ಬಗೆದರೆ ಸಿದ್ದರಾಮಯ್ಯ ಕಾಣುತ್ತಾರೆ. ನಾನು ಯಾವತ್ತೂ ಸಿದ್ದರಾಮಯ್ಯ ಜಪ ಮಾಡುತ್ತೇನೆ' ಎಂದು ಹೇಳಿದ್ದರು.

ಯಶವಂತಪುರ ಶಾಸಕ
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಅವರು, 'ಬೆಂಗಳೂರು ಬಗ್ಗೆ, ಇಲ್ಲಿನ ಇತಿಹಾಸದ ಬಗ್ಗೆ ಅಭಿವೃದ್ಧಿ ಬಗ್ಗೆ ಸಿಎಂ ಮಾತನಾಡುತ್ತಾರೆ. ಆದರೆ, ಯಾವುದನ್ನೂ ಸಿಎಂ ಕುಮಾರಸ್ವಾಮಿ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳು ಕಳೆದರೂ ಯಾವುದೇ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಅವನ್ನೆಲ್ಲಾ ನಾವು ಹೇಳಲು ಹೋದರೆ ಬೇರೆ-ಬೇರೆ ಅರ್ಥ ಪಡೆದುಕೊಳ್ಳುತ್ತದೆ' ಎಂದು ಹೇಳಿದ್ದರು.











Click it and Unblock the Notifications