ಬದಲಾಗುವ ಬಿಜೆಪಿ ವರಸೆಗಳು... ಕಾಂಗ್ರೆಸ್ ಕೊಟ್ಟಿದೆ ಎಕ್ಸಾಂಪಲ್!
ಬೆಂಗಳೂರು: ಚುನಾವಣೆಗೆ ಮೊದಲು ಮಾತು ಕೊಟ್ಟಂತೆ ಕಾಂಗ್ರೆಸ್ ತನ್ನ 5 ಗ್ಯಾರಂಟಿಗಳ ಜಾರಿಗೆ ಮುಂದಾಗಿದೆ. ಅಧಿಕೃತವಾಗಿ 5 ಗ್ಯಾರಂಟಿಗಳನ್ನ ಸಿಎಂ ಸಿದ್ದರಾಮಯ್ಯ ನಿನ್ನೆಯೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಬಿಜೆಪಿ ವಿರುದ್ಧ ಜೋಶ್ನಲ್ಲಿ ತಿರುಗೇಟು ನೀಡುತ್ತಿದೆ ಕಾಂಗ್ರೆಸ್. ಅದರಲ್ಲೂ ಬದಲಾಗುವ ಬಿಜೆಪಿ ವರಸೆಗಳು.. ಅಂತಾ ಒಂದಷ್ಟು ಉದಾಹರಣೆ ನೀಡಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಗ್ಯಾರಂಟಿ ಬಗೆಗಿನ ಟ್ವೀಟ್ ವಾರ್ ಈ ವರ್ಷಕ್ಕೆ ನಿಲ್ಲುವ ಸಾಧ್ಯತೆ ಇಲ್ಲ. ಏಕೆಂದರೆ ಅತ್ತ ಕಾಂಗ್ರೆಸ್ ಇದೇ ಗ್ಯಾರಂಟಿಗಳ ಆಧಾರ ಇಟ್ಟುಕೊಂಡು ಲೋಕಸಭೆ ಚುನಾವಣೆಗೆ ಸಜ್ಜಾಗುತ್ತಿದೆ, ಅದೇ ರೀತಿ ಈ ಕಡೆ ಕಾಂಗ್ರೆಸ್ನ ಗ್ಯಾರಂಟಿಗಳ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಿಜೆಪಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುತ್ತಿದೆ. ಹೀಗಾಗಿ ಒಬ್ಬರಿಗೊಬ್ಬರು ಟ್ವಿಟ್ಟರ್ನಲ್ಲಿ ಕಾಲು ಎಳೆದಾಡುತ್ತಿದ್ದಾರೆ. ಅದ್ರಲ್ಲೂ ಬಿಜೆಪಿ ನಾಯಕರು ಹೇಗೆ ಮಾತು ಬದಲಾಯಿಸುತ್ತಾರೆ ನೋಡಿ ಅಂತಾ ಕಾಂಗ್ರೆಸ್ ಆರೋಪ ಮಾಡುತ್ತಿದೆ.

ಆಗ ಒಂದು.. ಈಗ ಒಂದು ಮಾತು!
ಅಷ್ಟಕ್ಕೂ ನಿನ್ನೆಯಷ್ಟೇ ತನ್ನ ಗ್ಯಾರಂಟಿಗಳ ಬಗ್ಗೆ ಅಧಿಕೃತ ಆದೇಶ ನೀಡಿರುವ ಕಾಂಗ್ರೆಸ್ ಇದೀಗ ಬಿಜೆಪಿ ವಿರುದ್ಧ ಫೈಟ್ ಶುರು ಮಾಡಿದೆ. ಟ್ವೀಟ್ ಒಂದರ ಮೂಲಕ, 'ಗ್ಯಾರಂಟಿ ಘೋಷಣೆ ಮಾಡಿದಾಗ - ಹಣ ಹೇಗೆ ಹೊಂದಿಸುತ್ತಾರೆ, ಜಾರಿ ಸಾಧ್ಯವಿಲ್ಲ, ಆರ್ಥಿಕತೆಯ ವಿರೋಧಿ. ಗ್ಯಾರಂಟಿ ಜಾರಿಯಾದಾಗ - ಕಂಡೀಷನ್ ಹಾಕ್ತಿದಾರೆ, ಎಲ್ಲರಿಗೂ ಕಳ್ಳೆಪುರಿ ಹಂಚಿದ ಹಾಗೆ ಹಂಚಬೇಕು! ಯಾವ ನಿಲುವು ತಾಳಬೇಕು, ಹೇಗೆ ವಿರೋಧಿಸಬೇಕು ಎಂದು ಗೊಂದಲದಲ್ಲಿದೆ ಬಿಜೆಪಿ. ಕನಿಷ್ಠ ಸ್ಪಷ್ಟವಾಗಿ ವಿರೋಧಿಸಲಾದರೂ ಒಬ್ಬ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ @BJP4Karnataka.' ಎಂದು ಸವಾಲು ಹಾಕಿದೆ.
ಏಟಿಗೆ ಏಟು ನೀಡುತ್ತಿರುವ ಬಿಜೆಪಿ & ಕಾಂಗ್ರೆಸ್!
ಹೀಗೆ ಕಾಂಗ್ರೆಸ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದರೆ, ಮತ್ತೊಂದ್ಕಡೆ ಅದಕ್ಕೆ ಬಿಜೆಪಿ ಕೂಡ ತಿರುಗೇಟು ನೀಡುತ್ತಿದೆ. ಗ್ಯಾರಂಟಿ ವಿಚಾರವನ್ನೇ ಎಳೆದು ತಂದು ಕಾಂಗ್ರೆಸ್ ಟ್ವೀಟ್ ವಿರುದ್ಧ ಮತ್ತೊಂದು ಟ್ವೀಟ್ ಪೋಸ್ಟ್ ಮಾಡಿದೆ. ಅಲ್ಲದೆ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆಯೂ ಈ ಟ್ವೀಟ್ನಲ್ಲಿ ಪ್ರಶ್ನೆ ಮಾಡುವ ಮೂಲಕ ಕಾಂಗ್ರೆಸ್ ನಾಯಕರಿಗೆ ಗ್ಯಾರಂಟಿ ವಿಚಾರವನ್ನೇ ಹಿಡಿದು ತಿರುಗೇಟು ನೀಡಿದೆ. ಹಾಗಾದ್ರೆ ಬಿಜೆಪಿ ಮಾಡಿರುವ ಆ ಟ್ವೀಟ್ ಏನು? ಬಿಜೆಪಿ ಟ್ವೀಟ್ನಲ್ಲಿ ಏನಿದೆ? ಮುಂದೆ ಓದಿ.

ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಪ್ರಶ್ನೆ!
ಹೀಗೆ 5 ಗ್ಯಾರಂಟಿ ವಿಚಾರದ ಬಗ್ಗೆ ಚರ್ಚೆ ನಡೆಯುವಾಗಲೇ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಬಿಜೆಪಿ ಟ್ವೀಟ್ ಮೂಲಕ ಪ್ರಶ್ನೆ ಮಾಡಿದೆ. 'ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ @BSBommai ಅವರು ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ರಾಜ್ಯದ ಅರ್ಥಿಕ ಪರಿಸ್ಥಿತಿಯ ಬಗ್ಗೆ ವಿಸ್ತೃತವಾಗಿ ವಿವರಿಸಬೇಕಾಗಿರುವ ಅನಿವಾರ್ಯತೆಯಿದೆ ಎಂದು ತಿಳಿಸಿದ್ದರು. ಈ ಕುರಿತಂತೆ ಸಿದ್ದರಾಮಯ್ಯ ಅವರು ಇಲ್ಲಿಯವರೆಗೂ ತುಟಿ ಬಿಚ್ಚಿಲ್ಲ. ಇಂದು ಆ ಬಗ್ಗೆ ಪತ್ರಕರ್ತರೊಬ್ಬರ ಪ್ರಶ್ನೆಗೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಶ್ರೀ ಕೆ.ಎಚ್.ಮುನಿಯಪ್ಪ ಅವರು ಉತ್ತರಿಸದೇ 'No Comments' ಎಂದಿದ್ದಾರೆ. ಹಾಗಾದರೆ ಕಾಂಗ್ರೆಸ್ ಗ್ಯಾರಂಟಿಗಳ ಪುಂಗಿಯನ್ನು ಪೂರೈಸಲು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ವಿವರಿಸಲು, ಕ್ರೂಢೀಕರಣದ ಬಗ್ಗೆ ಉತ್ತರಿಸುವವರು ಯಾರು?' ಎಂದು ಪ್ರಶ್ನೆ ಮಾಡಿದೆ ಬಿಜೆಪಿ.
ಹೀಗೆ ಎರಡೂ ಪಕ್ಷಗಳ ನಡುವೆ ಗ್ಯಾರಂಟಿ ವಿಚಾರದ ಫೈಟ್ ಕಲರ್ಫುಲ್ ಆಗುತ್ತಿದೆ. ಅತ್ತ ಬಿಜೆಪಿ 5 ಗ್ಯಾರಂಟಿ ವಿಚಾರ ಹಿಡಿದು ವಾಗ್ದಾಳಿ ನಡೆಸಿದರೆ, ಇತ್ತ ಕಾಂಗ್ರೆಸ್ ಕೂಡ ಬಿಜೆಪಿ ಸರ್ಕಾರದ ವೈಫಲ್ಯಗಳ ಉದಾಹರಣೆ ನೀಡುತ್ತಿದೆ. ಜೊತೆಗೆ ಬಿಜೆಪಿ ನಾಯಕರ ಮಾತುಗಳ ಆಧಾರದಲ್ಲಿ ತಿರುಗೇಟು ನೀಡುತ್ತಿದೆ. ಬಿಜೆಪಿ ಏಟಿಗೆ ತಿರುಗೇಟು ನೀಡುತ್ತಾ ತನ್ನ ಟ್ವೀಟ್ ವಾರ್ನ ಭರ್ಜರಿಯಾಗಿ ಮುಂದುವರಿಸುತ್ತಿದೆ.












Click it and Unblock the Notifications