ಕರ್ನಾಟಕದ ಎಲ್ಲಾ ನ್ಯಾಯಾಲಯಗಳಿಗೆ 4ನೇ ಶನಿವಾರ ರಜೆ
ಬೆಂಗಳೂರು, ಜುಲೈ 03 : ಕರ್ನಾಟಕ ಹೈಕೋರ್ಟ್ ಮತ್ತು ಎಲ್ಲಾ ಅಧೀನ ನ್ಯಾಯಾಲಯಗಳಿಗೆ 4ನೇ ಶನಿವಾರ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕ ಸರ್ಕಾರಿ ಸರ್ಕಾರಿ ಉದ್ಯೋಗಿಗಳಿಗೆ ನಾಲ್ಕನೇ ಶನಿವಾರದ ರಜೆಯನ್ನು ಕೆಲವು ದಿನಗಳ ಹಿಂದೆ ಘೋಷಣೆ ಮಾಡಿತ್ತು.
ಹೈಕೋರ್ಟ್ ಪೂರ್ಣಪೀಠ ಜೂನ್ 27ರಂದು 4ನೇ ಶನಿವಾರ ರಜೆ ನೀಡುವ ನಿರ್ಣಯವನ್ನು ಕೈಗೊಂಡಿತ್ತು. ಆದ್ದರಿಂದ, ಸರ್ಕಾರಿ ನೌಕರರ ರಜೆ ಸೌಲಭ್ಯ ನ್ಯಾಯಾಲಯದ ಸಿಬ್ಬಂದಿಗೂ ಸಿಕ್ಕಿದಂತಾಗಿದೆ.
ಕರ್ನಾಟಕದ ಹೈಕೋರ್ಟ್ ಮತ್ತು ರಾಜ್ಯಾದ್ಯಂತ ಇರುವ ಎಲ್ಲಾ ಅಧೀನ ನ್ಯಾಯಾಲಯಗಳಿಗೆ 4ನೇ ಶನಿವಾರ ರಜೆ ಇರುತ್ತದೆ. ವಕೀಲರಿಗೆ ಪ್ರತಿ ಶನಿವಾರ ರಜೆ ನೀಡಬೇಕು ಎಂದು ಬೆಂಗಳೂರು ವಕೀಲರ ಸಂಘ ಹಿಂದೆ ಮನವಿಯನ್ನು ಸಹ ಮಾಡಿತ್ತು.

6ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರಿಗೆ 4ನೇ ಶನಿವಾರ ಸರ್ಕಾರ ರಜೆ ಘೋಷಣೆ ಮಾಡಿದೆ. ಇದರಿಂದಾಗಿ 2 ಮತ್ತು 4ನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಸಿಕ್ಕಿದೆ.
ಪ್ರಸ್ತುತ ಇರುವ ಮಹಾವೀರ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ, ಕಾರ್ಮಿಕ ದಿನಾಚರಣೆಗೆ ಇರುವ ಸಾರ್ವತ್ರಿಕ ರಜೆಗಳನ್ನು ರದ್ದುಪಡಿಸಿ ಅವುಗಳನ್ನು ಕೆಲಸದ ದಿನಗಳಾಗಿ ಪರಿವರ್ತನೆ ಮಾಡಬೇಕು ಎಂಬ ಆಲೋಚನೆಯೂ ಸರ್ಕಾರದ ಮುಂದಿತ್ತು.
ಆದರೆ, ಜಯಂತಿಗಳಿಗೆ ಇರುವ ರಜೆ ರದ್ದುಗೊಳಿಸಲು ವಿರೋಧ ವ್ಯಕ್ತವಾಗಿತ್ತು. ಆದ್ದರಿಂದ ಸರ್ಕಾರ ಈ ಕುರಿತು ಇನ್ನೂ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications