34 ತಾಲೂಕುಗಳು ಬರಪೀಡಿತ ಎಂದು ಘೋಷಣೆ
ಬೆಂಗಳೂರು, ಸೆ. 27 : 34 ತಾಲೂಕುಗಳು ಬರಪೀಡಿತ ಎಂದ ಘೋಷಣೆ, ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸೈಕಲ್ ಖರೀದಿಗೆ ಒಪ್ಪಿಗೆ, ಬಿಜೆಪಿ ಸುವರ್ಣ ಗ್ರಾಮ ಯೋಜನೆಯನ್ನು ಗ್ರಾಮ ವಿಕಾಸವಾಗಿ ಬದಲಾವಣೆ ಮಾಡಲು ಒಪ್ಪಿಗೆ, ಹೈ-ಕ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ಫೌಂಡೇಷನ್ ಸಹಯೋಗದಲ್ಲಿ ಗಣಿತ ಕಲಿಕಾ ಆಂದೋಲನ ನಡೆಸುವ ಪ್ರಸ್ತಾವಕ್ಕೆ ಒಪ್ಪಿಗೆ ಮುಂತಾದವು ಸಚಿವ ಸಂಪುಟ ಸಭೆಯ ಪ್ರಮುಖ ತೀರ್ಮಾನಗಳು.
ವಿಧಾನಸೌಧದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಅವರು ಸಭೆಯ ವಿವರಗಳನ್ನು ನೀಡಿದರು.
ಅನಾವೃಷ್ಟಿಯಿಂದ ಬಾಧಿತವಾಗಿರುವ ರಾಜ್ಯದ 9 ಜಿಲ್ಲೆಗಳ 34 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಆದರೆ, ಈ ತಾಲೂಕುಗಳಿಗೆ ಘೋಷಣೆ ಮಾಡುವ ಪರಿಹಾರದ ಮೊತ್ತವನ್ನು ನಿರ್ಧರಿಸಿರುವ ಹೊಣೆಯನ್ನು ಸಿಎಂಗೆ ವಹಿಸಲಾಗಿದೆ ಎಂದು ಜಯಚಂದ್ರ ತಿಳಿಸಿದರು.

ಯಾವ ತಾಲೂಕುಗಳು : ಆನೇಕಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ದೇವನಹಳ್ಳಿ, ಹೊಸಕೋಟೆ, ಚನ್ನಪಟ್ಟಣ, ಕನಕಪುರ, ರಾಮನಗರ, ಬಂಗಾರಪೇಟೆ, ಕೋಲಾರ, ಮಾಲೂರು, ಮುಳಬಾಗಿಲು, ಶ್ರೀನಿವಾಸಪುರ, ಬಾಗೇಪಲ್ಲಿ, ಚಿಕ್ಕಬಳ್ಳಾಪುರ, ಚಿಂತಾಮಣಿ, ಗುಡಿಬಂಡೆ, ಗೌರಿಬಿದನೂರು, ಶಿಡ್ಲಘಟ್ಟ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ, ಅಳಂದ, ಚಿಂಚೋಳಿ, ಜೇವರ್ಗಿ, ಔರಾದ್, ಬೀದರ್, ಭಾಲ್ಕಿ, ಹುಮ್ನಾಬಾದ್, ಬೇಲೂರು ಮತ್ತು ಅ ಅರಸೀಕೆರೆ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.
ಸೈಕಲ್ ಖರೀದಿಗೆ ಒಪ್ಪಿಗೆ : ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು 181.44 ಕೋಟಿ ವೆಚ್ಚದಲ್ಲಿ ಸೈಕಲ್ ಖರೀದಿ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಒಟ್ಟು 5.54 ಲಕ್ಷ ಸೈಕಲ್ಗಳನ್ನು ಖರೀದಿ ಮಾಡಲಾಗುತ್ತದೆ. ಹೆಣ್ಣು ಮಕ್ಕಳಿಗೆ ಕಡುಗೆಂಪು ಮತ್ತು ಗಂಡು ಮಕ್ಕಳಿಗೆ ನೀಲಿ ಬಣ್ಣದ ಸೈಕಲ್ ವಿತರಣೆ ಮಾಡಲಾಗುತ್ತದೆ.












Click it and Unblock the Notifications