ಬಾಗಲಕೋಟೆ: 32 ಸಾವಿರ ಜನ ಕೆಲಸ ಕಳೆದುಕೊಳ್ಳುವ ಭೀತಿ
ಬಾಗಲಕೋಟೆ, ಏ. 17: ನೇಕಾರರು ಮತ್ತು ವಿದ್ಯುತ್ ಮಗ್ಗ ಮಾಲೀಕರ ನಡುವಿನ ಸಂಘರ್ಷದ ಪರಿಣಾಮ ರಬಕವಿ ಮತ್ತು ಬನಹಟ್ಟಿಯ 32 ಸಾವಿರ ನೇಕಾರರು ಕೆಲಸ ಕಳೆದುಕೊಳ್ಳುವ ಆತಂಕ ಎದುರಾಗಿದೆ.
ಎರಡು ಪಟ್ಟಣಗಳಲ್ಲಿರುವ ಎಂಟು ಸಾವಿರ ಮಗ್ಗಗಳು ಕೆಲಸ ನಿಲ್ಲಿಸಿವೆ. ಮಾಲೀಕರೇ ಮಗ್ಗಗಳನ್ನು ಬಂದ್ ಮಾಡಿದ್ದರಿಂದ ಒಂದು ದಿನಕ್ಕೆ 24 ಸಾವಿರ ಸೀರೆಗಳ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದಾಗಿ ಸುಮಾರು 32 ಸಾವಿರ ಜನರು ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ.[ಖಾದಿ ಉಳಿವಿಗೆ ಬದನವಾಳು ಸತ್ಯಾಗ್ರಹ?]

ಬನಹಟ್ಟಿಯ ಸೈಜಿಂಗ್ ಘಟಕಗಳು ತಿಂಗಳ ಹಿಂದೆಯೇ ಬಂದ್ ಆಗಿದ್ದವು. ಇದೀಗ ರಬಕವಿಯ ಸೈಜಿಂಗ್ ಘಟಕಗಳು ಬಂದ್ ಆಗಿ ವಾರ ಕಳೆದಿದೆ. ಇಲ್ಲಿನ ಸೀರೆಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವುದು ದೇಸಿ ಕೈಗಾರಿಕೆಯೊಂದು ವಿನಾಶದ ಅಂಚು ತಲುಪಲು ಕಾರಣವಾಗಿದೆ.
ಬೇಡಿಕೆ ಕುಸಿದಿರುವುದರಿಂದ ಹೆಚ್ಚಿನ ಕೂಲಿ ನೀಡಿದರೆ ನಾವು ನಷ್ಟ ಅನುಭವಿಸಬೇಕಾಗುತ್ತದೆ. ಆಂಧ್ರ ಪ್ರದೇಶದಿಂದ ಬರುತ್ತಿದ್ದ ಆರ್ಡರ್ ಗಳು ಕಡಿಮೆಯಾಗಿದ್ದು ಸಮಸ್ಯೆಯಾಗಿ ಪರಿಣಮಿಸಿದೆ ಎಂಬುದು ವ್ಯಾಪಾರಿಗಳ ಅಳಲು. ಮುಂಬರುವ ದಿನಗಳಲ್ಲಿ ಉದ್ಯೋಗ ಸುಧಾರಿಸಿದರೆ ಮತ್ತಷ್ಟು ಹೆಚ್ಚಿನ ಕೂಲಿ ನೀಡುತ್ತೇವೆ ಎಂದು ಭರವಸೆ ನೀಡುತ್ತಾರೆ.[ಹೊಳಪು ಕಳೆದುಕೊಂಡಿತೇ ಇಳಕಲ್ ಸೀರೆ?]
ಈಗ ಪಡೆಯುತ್ತಿರುವ 150-300 ರೂ. ಕೂಲಿಯಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ. ದಿನ ಬಳಕೆಯ ಖರ್ಚು ವೆಚ್ಚಗಳಿಗೆ ಹೋಲಿಕೆ ಮಾಡಿದರೆ ಜೀವನ ಮಾಡುವುದೇ ಕಷ್ಟವಾಗಿದೆ. ಹಾಗಾಗಿ ಕೂಲಿ ಹೆಚ್ಚಳ ಮಾಡಬೇಕು ಎಂಬುದು ನೇಕಾರರ ಆಗ್ರಹ. ಒಟ್ಟಿನಲ್ಲಿ ಇಬ್ಬರ ನಡುವಿನ ಗೊಂದಲಗಳು ರಾಜ್ಯದ ಪ್ರಾಚೀನ ಕಲೆಯೊಂದನ್ನು ನೇಪಥ್ಯಕ್ಕೆ ಸರಿಸುತ್ತಿದೆ.












Click it and Unblock the Notifications