205 ಸರ್ಕಾರಿ ಅಭಿಯೋಜಕರ ನೇಮಕಕ್ಕೆ ಜು.23, 24ರಂದು ಪರೀಕ್ಷೆ
ಬೆಂಗಳೂರು, ಜು.6: ರಾಜ್ಯದಲ್ಲಿ ಖಾಲಿಯಿರುವ 205 ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಹುದ್ದೆಗಳ ಭರ್ತಿಗೆ ಮುಖ್ಯ ಪರೀಕ್ಷೆ ನಡೆಸಲು ಸರ್ಕಾರ ಕೊನೆಗೂ ದಿನಾಂಕ ನಿಗದಿಪಡಿಸಿದ್ದು, ಇದೇ ಜುಲೈ 23 ಮತ್ತು 24ರಂದು ಪರೀಕ್ಷೆ ನಡೆಯಲಿದೆ.
ಬೆಂಗಳೂರಿನ ನ್ಯಾಷನಲ್ ಲಾ ಯೂನಿವರ್ಸಿಟಿ ಆಫ್ ಇಂಡಿಯಾ(ಎನ್ ಎಲ್ ಎಸ್ ಯು) ಕಡೆಯಿಂದ ರಾಜ್ಯದ ನಾಲ್ಕು ಕೇಂದ್ರಗಳಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರು- ಸಹಾಯಕ ಸರ್ಕಾರಿ ವಕೀಲರ ಹುದ್ದೆಗಳಿಗೆ ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಪ್ರಕಟಣೆ ತಿಳಿಸಿದೆ.
ಹೈಕೋರ್ಟ್ ಹಂಗಾಮಿ ಸಿಜೆಯಾಗಿ ನ್ಯಾ.ಅಲೋಕ್ ಅರಾಧೆ ನೇಮಕ
ಇಲಾಖೆಯ ನಿರ್ದೇಶಕ ಎಚ್.ಕೆ.ಜಗದೀಶ್ ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಮುಖ್ಯ ಪರೀಕ್ಷೆಯ ಸಮಯ, ಪರೀಕ್ಷಾ ಕೇಂದ್ರಗಳ ವಿವರ ಮತ್ತು ಪ್ರವೇಶ ಪತ್ರ ಪಡೆಯುವ ವಿಷಯಗಳಿಗೆ ಸಂಬಂಧಿಸಿದಂತೆ ಎನ್ ಎಲ್ ಎಸ್ ಯು ವೆಬ್ ಸೈಟ್ ನಿಂದ ವಿವರಗಳನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ.
ಮೂರು ಬಾರಿ ಮುಂದೂಡಿಕೆ: 205 ಹುದ್ದೆಗಳ ಭರ್ತಿಗೆ ನಡೆಸಬೇಕಾದ ಮುಖ್ಯ ಪರೀಕ್ಷೆಯನ್ನುಕೋವಿಡ್ ಸೇರಿ ನಾನಾ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಮೂರು ಬಾರಿ ಮುಂದೂಡಲಾಗಿತ್ತು.ಇದರಿಂದಾಗಿ ಅಭ್ಯರ್ಥಿಗಳು ತೀವ್ರ ನಿರಾಶರಾಗಿದ್ದರು.
ಹೈಕೋರ್ಟ್ ಆರು ವಾರ ಗಡುವು: ಕಳೆದ ಜೂ.7ರಂದು ಹೈಕೋರ್ಟ್ ಎಪಿಪಿ ಹುದ್ದೆಗಳ ಭರ್ತಿಗೆ ಮುಖ್ಯ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲು ಸರ್ಕಾರಕ್ಕೆ ಹೈಕೋರ್ಟ್ ಆರು ವಾರಗಳ ಗಡುವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಖಾಲಿಯಿರುವ ಪ್ರಾಸಿಕ್ಯೂಟರ್ ಹುದ್ದೆಗಳ ನೇಮಕಾತಿ ಅಗತ್ಯ ನಿರ್ದೇಶನ ನೀಡಲು ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯಪೀಠ ಈ ನಿರ್ದೇಶನ ನೀಡಿತು.
ಸರ್ಕಾರದ ಹೇಳಿಕೆ: ಸರ್ಕಾರಿ ವಕೀಲರು, 205 ಎಸ್ಪಿಪಿ ಹುದ್ದೆಗಳ ಭರ್ತಿಗೆ 2022ರ ಮೇ 28 ಹಾಗೂ 29ರಂದು ಪರೀಕ್ಷೆ ನಿಗದಿಪಡಿಸಲಾಗಿತ್ತು. ರಾಷ್ಟ್ರೀಯ ಕಾನೂನು ಶಾಲೆ ಮಾದರಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿತ್ತು. ಆದರೆ, ಕರಡು ಪ್ರಶ್ನೆ ಪತ್ರಿಕೆಯಲ್ಲಿ ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳು ಹೆಚ್ಚಿವೆ. ಇದರಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಸಮಸ್ಯೆ ಆಗಲಿದೆ. ಎಪಿಪಿ ಹುದ್ದೆಗಳಿಗೆ ಸಂವಿಧಾನಿಕ ವಿಷಯಗಳಿಗಿಂತ ಐಪಿಸಿ-ಸಿಆರ್ಪಿಸಿ ವಿಷಯಗಳು ಮುಖ್ಯವಾಗಿರಬೇಕು ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಬೆಂಗಳೂರು ವಕೀಲರ ಸಂಘ ಆಕ್ಷೇಪ ವ್ಯಕ್ತಪಡಿಸಿದ್ದವು. ಇದರಿಂದ ಪರೀಕ್ಷೆ ಮುಂದೂಡಲಾಯಿತು. ಎರಡು ತಿಂಗಳು ಕಾಲಾವಕಾಶ ಕೊಟ್ಟರೆ ಪರೀಕ್ಷೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ನ್ಯಾಯಪೀಠ ಪ್ರತಿಕ್ರಿಯಿಸಿ, ಎಪಿಪಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಮೂರು ತಿಂಗಳ ಕಾಲಾವಕಾಶ ನೀಡಿ ಫೆಬ್ರವರಿಯಲ್ಲಿ ಆದೇಶಿಸಲಾಗಿತ್ತು. ಮತ್ತೆ ಎರಡು ತಿಂಗಳು ಕಾಲಾವಕಾಶ ನೀಡುವುದಿಲ್ಲ. ಈಗಾಗಲೇ ಸಾಕಷ್ಟು ಹೆಚ್ಚಿನ ಸಮಯ ನೀಡಲಾಗಿದೆ. ಆದ್ದರಿಂದ ಆರು ವಾರಗಳಲ್ಲಿ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಬೇಕು. ತಪ್ಪಿದರೆ ಅಭಿಯೋಜನಾ ಇಲಾಖೆಯ ನಿರ್ದೇಶಕರು ಮುಂದಿನ ವಿಚಾರಣೆಗೆ ಹಾಜರಿರಬೇಕು ಎಂದು ಸೂಚಿಸಿ ವಿಚಾರಣೆ ಮುಂದೂಡಿತ್ತು.
Recommended Video