Breaking; 2023ರ ಚುನಾವಣೆ, ಮೈಸೂರಿನ ಜೆಡಿಎಸ್ ಅಭ್ಯರ್ಥಿಗಳ ಘೋಷಣೆ
ಬೆಂಗಳೂರು, ಅಕ್ಟೋಬರ್ 21; 2023ರ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮೈಸೂರು ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.
ಶುಕ್ರವಾರ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಮತ್ತು ಜಿ. ಟಿ. ದೇವೇಗೌಡರು ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿದ್ದರು. ಅಲ್ಲಿಯೇ ಜಿ. ಟಿ. ದೇವೇಗೌಡರು ಅಭ್ಯರ್ಥಿಗಳ ಘೋಷಣೆ ಮಾಡಿದ್ದಾರೆ.

ಎಚ್. ಡಿ. ದೇವೇಗೌಡರು ಮಾತನಾಡಿ, "ಜಿ. ಟಿ. ದೇವೇಗೌಡರಿಗೆ ಮೈಸೂರಿನ ಉಸ್ತುವಾರಿ ಕೊಟ್ಟಿದ್ದೇನೆ. ಅವರ ನಾಯಕತ್ವದ ಬಗ್ಗೆ ಅಪಸ್ವರ ಇರುವವರು ಪಕ್ಷ ಬಿಟ್ಟು ಹೋಗಬಹುದು" ಎಂದು ಖಡಕ್ ಎಚ್ಚರಿಕೆ ನೀಡಿದರು.
ಅಭ್ಯರ್ಥಿಗಳ ಪಟ್ಟಿ; ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಮುಂದಿನ ಚುನಾವಣೆಗೆ ಚಾಮುಂಡೇಶ್ವರಿಯಿಂದಲೇ ಕಣಕ್ಕಿಳಿಯಲಿದ್ದಾರೆ. ಪುತ್ರ ಜಿ. ಟಿ. ಹರೀಶ್ ಗೌಡಗೆ ಸಹ ಟಿಕೆಟ್ ಪಡೆಯುವಲ್ಲಿ ಗೌಡರು ಯಶಸ್ವಿಯಾಗಿದ್ದಾರೆ. ಹುಣಸೂರು ಕ್ಷೇತ್ರದಿಂದ ಜಿ. ಟಿ. ಹರೀಶ್ ಗೌಡ ಕಣಕ್ಕಿಳಿಯಲಿದ್ದಾರೆ.
* ಚಾಮುಂಡೇಶ್ವರಿ - ಜಿ. ಟಿ. ದೇವೇಗೌಡ
* ಹುಣಸೂರು - ಜಿ. ಟಿ. ಹರೀಶ್ ಗೌಡ
* ಕೆ. ಆರ್. ನಗರ - ಸಾ. ರಾ. ಮಹೇಶ್
* ಪಿರಿಯಾಪಟ್ಟಣ - ಕೆ. ಮಹದೇವ್
* ಟಿ. ನರಸೀಪುರ - ಅಶ್ವಿನ್
* ಎಚ್. ಡಿ. ಕೋಟೆ - ಜಯಪ್ರಕಾಶ್
ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಜಿ. ಟಿ. ದೇವೇಗೌಡ, "ನಾನು ನಿನ್ನೆಯಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದೇನೆ. ಮನಸ್ಸು ಮೂರು ವರ್ಷಗಳ ಬಳಿಕ ಸಮಾಧಾನದಲ್ಲಿದೆ. ನಾನು ನನ್ನ ಕುಟುಂಬದವರು ಹೆಚ್ಚು ಖುಷಿಯಲ್ಲಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲಗಳು ಉಳಿದಿಲ್ಲ" ಎಂದರು.
ಎಚ್. ಡಿ. ದೇವೇಗೌಡರು ಮಾತನಾಡಿ, "ಜಿ. ಟಿ. ದೇವೇಗೌಡರ ನಾಯಕತ್ವದ ಬಗ್ಗೆ ಒಂದೇ ಒಂದು ಅಪಸ್ವರ ಕೇಳಿ ಬಂದರೂ ನಾನು ಸಹಿಸುವುದಿಲ್ಲ. ಮೈಸೂರು ಜಿಲ್ಲೆಯ ಎಲ್ಲಾ ಉಸ್ತುವಾರಿ ಜಿಟಿಡಿ ಅವರಿಗೆ ನೀಡಿದ್ದೇನೆ. ಅವರ ನಾಯಕತ್ವದಲ್ಲಿಯೇ ಎಲ್ಲಾ ನಡೆಯಲಿದೆ. ಅವರ ಬಗ್ಗೆ ಕೊಂಕು ಮಾತನಾಡಿದರೆ ನಾನು ಸಹಿಸುವುದಿಲ್ಲ" ಎಂದರು.
ಗುರುವಾರ ಜಿ. ಟಿ. ದೇವೇಗೌಡರ ನಿವಾಸಕ್ಕೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ, ಸಿ. ಎಂ. ಇಬ್ರಾಹಿಂ ಭೇಟಿ ನೀಡಿದ್ದರು. ಬಳಿಕ ಭಾವುಕರಾಗಿ ಜಿ. ಟಿ. ದೇವೇಗೌಡರು ಜೆಡಿಎಸ್ ಪಕ್ಷದಲ್ಲಿಯೇ ಇರುತ್ತೇನೆ, ಪಕ್ಷ ಬಿಡುವುದಿಲ್ಲ ಎಂದು ಘೋಷಣೆ ಮಾಡಿದ್ದರು.












Click it and Unblock the Notifications