2011ನೇ ಸಾಲಿನ ಕೆಎಎಸ್ ಅಧಿಕಾರಿಗಳ ನೇಮಕ; ಕೆಎಟಿಯಲ್ಲಿ ಮಾ.28ಕ್ಕೆ ವಿಚಾರಣೆ
ಬೆಂಗಳೂರು ಮಾ.26: 2011ನೇ ಸಾಲಿನ ಕೆಎಎಸ್ ನೇಮಕದಲ್ಲಿ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸುವ ಸಂಬಂಧ ಕಾಯಿದೆ ಜಾರಿಗೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಸೋಮವಾರ (ಮಾ.28) ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮುಂದೆ ವಿಚಾರಣೆಗೆ ಬರಲಿವೆ.
ಆ ಹಿನ್ನೆಲೆಯಲ್ಲಿ ಹೈಕೋರ್ಟ್ ಶುಕ್ರವಾರ ಈ ಹಿಂದೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಏ.4ರವರೆಗೆ ವಿಸ್ತರಣೆ ಮಾಡಿ ಮೌಖಿಕ ಆದೇಶವನ್ನು ನೀಡಿದೆ. ಈಗಾಗಲೇ ಎರಡು ಸುತ್ತಿನ ಕಾನೂನು ಸಮರ ಮುಗಿಸಿರುವ ವಿವಾದ, ಇದೀಗ ಮೂರನೇ ಸುತ್ತಿನ ಹೋರಾಟ ನಡೆಯುತ್ತಿದೆ.
KPSC Recruitment; ಸದನದಲ್ಲಿ ಮುಖ್ಯಮಂತ್ರಿಗಳ ಉತ್ತರ
ಕೆಎಟಿ ಮಧ್ಯಂತರ ಆದೇಶ ನೀಡಲು ನಿರಾಕರಿಸಿದ್ದನ್ನು ಪ್ರಶ್ನಿಸಿ ಎ.ಟಿ.ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ನ್ಯಾ.ಜಿ.ನರೇಂದರ್ ಮತ್ತು ನ್ಯಾ.ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಶುಕ್ರವಾರ ವಿಚಾರಣೆಗೆ ಬಂದಿತು.
ಆಗ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರದ ಪರ ವಾದ ಮಂಡಿಸಿದ ಇದೇ ವಿಚಾರದ ಅರ್ಜಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ಮುಂದೆ ಇದ್ದು, ಅಲ್ಲಿ ಸೋಮವಾರ ವಿಚಾರಣೆಗೆ ಬರಲಿವೆ. ಹಾಗಾಗಿ ಇಲ್ಲಿ ಮತ್ತೆ ಅದೇ ವಿಚಾರದ ವಿಚಾರಣೆ ಸರಿಯಲ್ಲ. ಮೊದಲು ಕೆಎಟಿ ಅರ್ಜಿಗಳನ್ನು ತೀರ್ಮಾನಿಸಲಿ, ಆನಂತರ ಹೈಕೋರ್ಟ್ ಆ ಬಗ್ಗೆ ವಿಚಾರಣೆ ಕೈಗೆತ್ತಿಕೊಳ್ಳುವುದು ಸೂಕ್ತ ಎಂದರು.
ಅದನ್ನು ಮಾನ್ಯ ಮಾಡಿದ ನ್ಯಾಯಪೀಠ, ಕೆಎಟಿಯಲ್ಲಿ ಸೋಮವಾರ(ಮಾ.28)ವಿಚಾರಣೆ ಆರಂಭವಾಗಲಿದ್ದು,ಅದು ಮಧ್ಯಂತರ ಆದೇಶದ ಬಗ್ಗೆ ನಿರ್ಧರಿಸುವವರೆಗೆ ಸರ್ಕಾರ ಆಯ್ಕೆಯಾಗಿದ್ದಾರೆಂದು ಪರಿಗಣಿಸಲಾಗಿರುವ ಅಭ್ಯರ್ಥಿಗಳಿಗೆ ನೇಮಕ ಪತ್ರ ವಿತರಿಸಬಾರದು, ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಮೌಖಿಕ ಸೂಚನೆಯನ್ನೂ ನೀಡಿ ವಿಚಾರಣೆಯನ್ನು ಏ.4ಕ್ಕೆ ಮುಂದೂಡಿತು.
2011ರ ಕೆಎಎಸ್ ಬ್ಯಾಚ್ ಆಯ್ಕೆ ಪಟ್ಟಿಗೆ ಮರುಜೀವ ಪ್ರಯತ್ನ: ಪ್ರತಿಭಟನೆ
"ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಅರ್ಜಿದಾರರು ಕೋರಿರುವಂತೆ ಸಂಬಂಧಿಸಿದ ಎಲ್ಲ ವಾದಿಗಳು-ಪ್ರತಿವಾದಿಗಳ ವಾದ ಆಲಿಸಿ ಬಳಿಕ ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಮಧ್ಯಂತರ ಆದೇಶ ಹೊರಡಿಸಬೇಕು"ಎಂದು ನಿರ್ದೇಶನ ನೀಡಿತು.
ಅಲ್ಲಿಯವರೆಗೆ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ಕಾಯಿದೆ ಜಾರಿಗೆ ಸಂಬಂಧಿಸಿದಂತೆ ನೀಡಿರುವ ಮಧ್ಯಂತರ ತಡೆ ಮುಂದುವರಿಸಲಾಗುವುದು. ಸರ್ಕಾರ ಯಾವುದೇ ಅಭ್ಯರ್ಥಿಗಳಿಗೆ ನೇಮಕ ಪತ್ರಗಳನ್ನು ನೀಡಬಾರದು ಎಂದು ಮೌಖಿಕವಾಗಿ ಸೂಚಿಸಿತು.
ಅರ್ಜಿದಾರರ ಆಕ್ಷೇಪವೇನು?
ಅರ್ಜಿದಾರರು, ಸಿಐಡಿ ವರದಿ ಆಧರಿಸಿ ಹೈಕೋರ್ಟ್ ನೇಮಕ ರದ್ದುಗೊಳಿಸಿತ್ತು. ಅದನ್ನು ಸುಪ್ರೀಂಕೋಟ್ ಕೂಡ ಎತ್ತಿಹಿಡಿದಿದೆ. ಆದರೂ ಸಹ ನ್ಯಾಯಾಲಯ ಆದೇಶವನ್ನು ಬದಿಗೊತ್ತಿ 362 ಅಭ್ಯರ್ಥಿಗಳ ಅಕ್ರಮ ನೇಮಕ ಸಕ್ರಮಗೊಳಿಸಲು ರೂಪಿಸಿರುವ ಕಾಯಿದೆ ಕಾನೂನು ಬಾಹಿರವಾದುದು. ಹಾಗಾಗಿ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ನೇಮಕ ಸಿಂಧುಗೊಳಿಸುವ ಸರಕಾರದ ಕ್ರಮ ಪ್ರಶ್ನಿಸಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲೂ ಅರ್ಜಿ ಸಲ್ಲಿಸಲಾಗಿತ್ತು, ಕೆಎಟಿ ಯಾವುದೇ ಮಧ್ಯಂತರ ಆದೇಶ ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣದ ಹಿನ್ನೆಲೆ:
ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗೆ 201ರಲ್ಲಿ ನಡೆಸಿದ್ದ ಪರೀಕ್ಷೆಯಲ್ಲಿ ಅಂತಿಮ ಪಟ್ಟಿಯಲ್ಲಿದ್ದ 363 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸಿ ನೇಮಕ ಆದೇಶ ನೀಡುವ ಸಂಬಂಧ ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ) ವಿಧೇಯಕಕ್ಕೆ ರಾಜ್ಯಪಾಲರು ಕಳೆದ ವಾರ ಅಂಕಿತ ಹಾಕಿದ್ದರು.
Recommended Video
ಯಾವುದೇ ನ್ಯಾಯಾಲಯ, ನ್ಯಾಯಮಂಡಳಿ ಅಥವಾ ಪ್ರಾಕಾರದ ಯಾವುದೇ ತೀರ್ಪು, ಡಿಕ್ರಿ ಇಲ್ಲವೇ ಆದೇಶದಲ್ಲಿ ಅ'ರ್ಥಿಗಳ ಅಂತಿಮ ಆಯ್ಕೆ ವಿರುದ್ಧವಾಗಿ ಏನೇ ಒಳಗೊಂಡಿದ್ದರೂ ಅಭ್ಯರ್ಥಿಗಳ ಯಾವುದೇ ಲೋಪಗಳಿಲ್ಲದ ಕಾರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ನಿರ್ಧರಿಸಿತ್ತು. ಕಳೆದ ಫೆಬ್ರವರಿಯಲ್ಲಿ ವಿಧಾನಮಂಡಲದ ಉಭಯ ಸದನಗಳಲ್ಲಿ ವಿಧೇಯಕಕ್ಕೆ ಅನುಮೋದನೆ ಪಡೆದಿತ್ತು.