ಶನಿವಾರ ಸಂಪುಟ ವಿಸ್ತರಣೆ : ಎಚ್ಡಿಕೆ ಸಂಪುಟ ಸೇರಲಿದ್ದಾರೆ 20 ಶಾಸಕರು
ಬೆಂಗಳೂರು, ಜೂನ್ 01 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಶನಿವಾರ ಸಂಪುಟ ವಿಸ್ತರಣೆ ನಡೆಯಲಿದ್ದು, ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
ಮೊದಲ ಹಂತದ ಸಂಪುಟ ವಿಸ್ತರಣೆಯಲ್ಲಿ ಕಾಂಗ್ರೆಸ್ನ 12, ಜೆಡಿಎಸ್ನ 8 ಶಾಸಕರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ನೂತನ ಸಚಿವರ ಪಟ್ಟಿಯನ್ನು ನೀಡಲಿದ್ದಾರೆ.

ಖಾತೆಗಳ ಹಂಚಿಕ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಇಂದು 12 ಗಂಟೆಗೆ ಅಂತಿಮ ಸುತ್ತಿನ ಸಭೆ ನಡೆಯಲಿದೆ. ಕುಮಾರಸ್ವಾಮಿ, ಜಿ.ಪರಮೇಶ್ವರ, ಕೆ.ಸಿ.ವೇಣುಗೋಪಾಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಯಾವ ಪಕ್ಷಕ್ಕೆ ಯಾವ ಖಾತೆ : ಕಾಂಗ್ರೆಸ್-ಜೆಡಿಎಸ್ ನಡುವೆ ಖಾತೆ ಹಂಚಿಕೆಯೂ ಅಂತಿಮಗೊಂಡಿದೆ. ಹಣಕಾಸು ಸೇರಿದಂತೆ ಪ್ರಮುಖ ಖಾತೆಗಳನ್ನು ಜೆಡಿಎಸ್ಗೆ ಬಿಟ್ಟಕೊಡಲಾಗಿದೆ. ಗೃಹ ಖಾತೆ ಕಾಂಗ್ರೆಸ್ ಪಕ್ಷದ ಪಾಲಾಗಲಿದೆ.
ಜೆಡಿಎಸ್ : ಹಣಕಾಸು, ಇಂಧನ, ಲೋಕೋಪಯೋಗಿ, ಸಹಕಾರ, ಅಬಕಾರಿ ಸೇರಿದಂತೆ ಪ್ರಮುಖ ಖಾತೆಗಳನ್ನು ತನ್ನ ಬಳಿ ಇಟ್ಟುಕೊಂಡಿದೆ.
ಕಾಂಗ್ರೆಸ್ : ಗೃಹ, ಕಂದಾಯ, ಆರೋಗ್ಯ, ಪಂಚಾಯತ್ ರಾಜ್, ಜಲಸಂಪನ್ಮೂಲ, ವಸತಿ, ಗಣಿ, ಕೃಷಿ, ಸಮಾಜ ಕಲ್ಯಾಣ ಖಾತೆಗಳು ಕಾಂಗ್ರೆಸ್ ಪಾಲಾಗಲಿವೆ.
ಎಚ್.ಡಿ.ದೇವೇಗೌಡರ ಪದ್ಮನಾಭನಗರ ನಿವಾಸದಲ್ಲಿ 12 ಗಂಟೆಗೆ ಕಾಂಗ್ರೆಸ್-ಜೆಡಿಎಸ್ ನಾಯಕರ ಸಭೆ ನಡೆಯಲಿದ್ದು, ಸಭೆಯಲ್ಲಿ ಖಾತೆ, ಸಂಪುಟ ಸೇರುವವರ ಪಟ್ಟಿ ಅಂತಿಮಗೊಳ್ಳಲಿದೆ. ಮಧ್ಯಾಹ್ನ ರಾಜ್ಯಪಾಲರನ್ನು ಎಚ್.ಡಿ.ಕುಮಾರಸ್ವಾಮಿ ಭೇಟಿಯಾಗಿ ಸಚಿವರ ಪಟ್ಟಿಯನ್ನು ನೀಡಲಿದ್ದಾರೆ.












Click it and Unblock the Notifications