ಸಂಪುಟ ವಿಸ್ತರಣೆ : ಕುಮಾರಸ್ವಾಮಿ ಸಂಪುಟ ಸೇರುವ 20 ಶಾಸಕರ ಪಟ್ಟಿ
Recommended Video
ಬೆಂಗಳೂರು, ಜೂನ್ 01 : ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ವಿಸ್ತರಣೆ ಮಾಡಲಿದ್ದು, 20 ಶಾಸಕರು ಸಚಿವರಾಗಲಿದ್ದಾರೆ.
ಶನಿವಾರ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಮೊದಲ ಹಂತದಲ್ಲಿ ಕಾಂಗ್ರೆಸ್ನ 12, ಜೆಡಿಎಸ್ನ 8 ಶಾಸಕರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಶುಕ್ರವಾರ ಮಧ್ಯಾಹ್ನ ಎಚ್.ಡಿ.ಕುಮಾರಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸಚಿವರ ಪಟ್ಟಿ ನೀಡಲಿದ್ದಾರೆ.
ಶನಿವಾರ ಸಂಪುಟ ವಿಸ್ತರಣೆ : ಎಚ್ಡಿಕೆ ಸಂಪುಟ ಸೇರಲಿದ್ದಾರೆ 20 ಶಾಸಕರು
ಖಾತೆಗಳ ಹಂಚಿಕ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಿವಾಸದಲ್ಲಿ ಇಂದು 12 ಗಂಟೆಗೆ ಅಂತಿಮ ಸುತ್ತಿನ ಸಭೆ ನಡೆಯಲಿದೆ. ಕುಮಾರಸ್ವಾಮಿ, ಜಿ.ಪರಮೇಶ್ವರ, ಕೆ.ಸಿ.ವೇಣುಗೋಪಾಲ್ ಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಯಾರಿಗೆ ಯಾವ ಖಾತೆ? ಎಂದು ಅಂತಿಮಗೊಳಿಸಲಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ : ಯಾವ ಖಾತೆ ಯಾರಿಗೆ?
ಹಣಕಾಸು, ಇಂಧನ, ಲೋಕೋಪಯೋಗಿ, ಸಹಕಾರ, ಅಬಕಾರಿ ಸೇರಿದಂತೆ ಪ್ರಮುಖ ಖಾತೆ ಜೆಡಿಎಸ್ ಬಳಿ ಇರಲಿದೆ. ಗೃಹ, ಕಂದಾಯ, ಆರೋಗ್ಯ, ಪಂಚಾಯತ್ ರಾಜ್, ಜಲಸಂಪನ್ಮೂಲ, ವಸತಿ, ಗಣಿ, ಕೃಷಿ, ಸಮಾಜ ಕಲ್ಯಾಣ ಖಾತೆಗಳು ಕಾಂಗ್ರೆಸ್ ಪಾಲಾಗಲಿವೆ. ಸಂಪುಟ ಸೇರುವ ಶಾಸಕರ ಪಟ್ಟಿ ಇಲ್ಲಿದೆ.
ಡಾ.ಜಿ.ಪರಮೇಶ್ವರಗೆ ಯಾವ ಖಾತೆ?
ಡಾ.ಜಿ.ಪರಮೇಶ್ವರ ಅವರು ಈಗಾಗಲೇ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಕುಮಾರಸ್ವಾಮಿ ಸಂಪುಟ ಸೇರುವುದು ಖಚಿತವಾಗಿದೆ. ಕೊರಟಗೆರೆ ಕ್ಷೇತ್ರದಿಂದ ಅವರು ಈ ಬಾರಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಕೆಲವು ತಿಂಗಳುಗಳ ಕಾಲ ಗೃಹ ಸಚಿವರಾಗಿದ್ದರು.
ಡಿ.ಕೆ.ಶಿವಕುಮಾರ್ ಸಂಪುಟಕ್ಕೆ
ಕನಕಪುರ ಕ್ಷೇತ್ರದ ಶಾಸಕ, ಒಕ್ಕಲಿಗ ಸಮುದಾಯದ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪತನವಾಗಲು, ಕಾಂಗ್ರೆಸ್-ಜೆಡಿಸ್ ಸರ್ಕಾರ ಅಸ್ತಿತ್ವಕ್ಕೆ ಬರಲು ಡಿ.ಕೆ.ಶಿವಕುಮಾರ್ ಅವರೇ ಪ್ರಮುಖ ಕಾರಣ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಇಂಧನ ಸಚಿವರಾಗಿದ್ದರು.
ರಾಮಲಿಂಗಾ ರೆಡ್ಡಿ ಸಂಪುಟಕ್ಕೆ
ಹಿರಿಯ ಕಾಂಗ್ರೆಸ್ ಮುಖಂಡ, ಬಿ.ಟಿ.ಎಂ.ಲೇಔಟ್ ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಗೃಹ, ಸಾರಿಗೆ ಸಚಿವರಾಗಿ ಕೆಲಸ ಮಾಡಿದ್ದಾರೆ.
ದಿನೇಶ್ ಗುಂಡೂರಾವ್
ಬೆಂಗಳೂರಿನ ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾಗಿದ್ದರು. ಸಂಪುಟ ಪುನಾರಚನೆ ಬಳಿಕ ಅವರನ್ನು ಕೈಬಿಡಲಾಗಿತ್ತು. ಪಕ್ಷ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಿತ್ತು.
ಎಂ.ಬಿ.ಪಾಟೀಲ್ ಸಂಪುಟಕ್ಕೆ
ಬಬಲೇಶ್ವರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.
ಕೆ.ಜೆ.ಜಾರ್ಜ್ ಸಂಪುಟಕ್ಕೆ
ಎಚ್.ಡಿ.ಕುಮಾರಸ್ವಾಮಿ ಸಂಪುಟಕ್ಕೆ ಸರ್ವಜ್ಞ ನಗರ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಗೃಹ ಸಚಿವರಾಗಿದ್ದರು. ಬಳಿಕ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪುನಃ ಸಿದ್ದರಾಮಯ್ಯ ಸಂಪುಟ ಸೇರಿ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದರು.
ಕೃಷ್ಣ ಬೈರೇಗೌಡ
ಬ್ಯಾಟರಾಯನಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೃಷ್ಣ ಬೈರೇಗೌಡ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಕೃಷಿ ಸಚಿವರಾಗಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಾಯಕರಲ್ಲಿ ಕೃಷ್ಣ ಬೈರೇಗೌಡ ಅವರು ಸಹ ಒಬ್ಬರು.
ಜಮೀರ್ ಅಹಮದ್ ಖಾನ್
ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ, ಎಚ್.ಡಿ.ಕುಮಾರಸ್ವಾಮಿ ಅವರ ಒಂದು ಕಾಲದ ಆಪ್ತ ಜಮೀರ್ ಅಹಮದ್ ಖಾನ್ ಅವರ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದಕ್ಕೆ ಅವರನ್ನು ಜೆಡಿಎಸ್ನಿಂದ ಅಮಾನತು ಮಾಡಲಾಗಿತ್ತು. ಈಗ ಜೆಡಿಎಸ್-ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುತ್ತಿದ್ದಾರೆ.
ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್ ಅವರು ಸಚಿವರಾಗಿ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಭಾಗದಿಂದ ಇಬ್ಬರು ಕುಮಾರಸ್ವಾಮಿ ಸಂಪುಟ ಸೇರುತ್ತಿದ್ದಾರೆ.
ರೂಪ ಶಶಿಧರ್
ಕೆ.ಜಿ.ಎಫ್.ಕ್ಷೇತ್ರದ ಶಾಸಕಿ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಎಚ್.ಮುನಿಯಪ್ಪ ಪುತ್ರಿ ರೂಪ ಶಶಿಧರ್ ಅವರು ಮಹಿಳಾ ಕೋಟಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟ ಸೇರಲಿದ್ದಾರೆ.
ಎ.ಕೃಷ್ಣಪ್ಪ ಸಂಪುಟಕ್ಕೆ
ಬೆಂಗಳೂರಿನ ವಿಜಯನಗರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎ.ಕೃಷ್ಣಪ್ಪ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ವಸತಿ ಸಚಿವರಾಗಿದ್ದರು.
ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದವರು
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಬೆಂಬಲ ನೀಡಿದ ರಾಣೆಬೆನ್ನೂರು ಕ್ಷೇತ್ರದ ಪಕ್ಷೇತರ ಶಾಸಕ ಶಂಕರ್, ಮುಳಬಾಗಿಲು ಕ್ಷೇತ್ರದ ಶಾಸಕ ನಾಗೇಶ್ ಅವರು ಸಹ ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುತ್ತಿದ್ದಾರೆ.
ಸಿ.ಎಸ್.ಪುಟ್ಟರಾಜು ಸಂಪುಟಕ್ಕೆ
ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದ ಜೆಡಿಎಸ್ ಶಾಸಕ ಸಿ.ಎಸ್.ಪುಟ್ಟರಾಜು ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಮಂಡ್ಯ ಕ್ಷೇತ್ರದ ಸಂಸದರಾಗಿದ್ದ ಪುಟ್ಟರಾಜು ಅವರು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಎಚ್.ಡಿ.ರೇವಣ್ಣ ಸಂಪುಟಕ್ಕೆ
ಮಾಜಿ ಸಚಿವ, ಎಚ್.ಡಿ.ಕುಮಾರಸ್ವಾಮಿ ಸಹೋದರ, ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಹಿಂದೆ ಲೋಕೋಪಯೋಗಿ, ಇಂಧನ ಖಾತೆ ಸಚಿವರಾಗಿ ಎಚ್.ಡಿ.ರೇವಣ್ಣ ಕೆಲಸ ಮಾಡಿದ್ದಾರೆ.
ಕುಮಾರಸ್ವಾಮಿ ಸಂಪುಟಕ್ಕೆ ಸೇರ್ಪಡೆ
ಬಿ.ಎಂ.ಫಾರೂಕ್ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿ ನಿಯೋಜಿತರಾದ ಬಳಿಕ ಅವರ ಸಂಚಾರದ ಸಂಪೂರ್ಣ ಜವಾಬ್ದಾರಿಯನ್ನು ಫಾರೂಕ್ ತೆಗೆದುಕೊಂಡಿದ್ದಾರೆ. ಮುಸ್ಲಿಂ ಸಮುದಾಯದ ಕೋಟಾದಡಿ ಅವರು ಸಚಿವರಾಗಲಿದ್ದಾರೆ.
ಆದರೆ, ಬಿ.ಎಂ.ಫಾರೂಕ್ ವಿಧಾನಸಭೆ, ವಿಧಾನಪರಿಷತ್ ಸದಸ್ಯರಲ್ಲ. ಸಚಿವರಾದ 6 ತಿಂಗಳಿನಲ್ಲಿ ಅವರು ಯಾವುದಾದರೂ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾಗುತ್ತದೆ.
ವಿಧಾನಸಭೆಯಿಂದ ವಿಧಾನಪರಿಷತ್ಗೆ ಜೂನ್ 11ರಂದು ನಡೆಯಲಿರುವ ಚುನಾವಣೆಗೆ ಅವರು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಸಿದ್ದರಾಮಯ್ಯ ಸೋಲಿಸಿದ ಜಿಟಿಡಿ
ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಿ ಜಿ.ಟಿ.ದೇವೇಗೌಡ ಅವರು ವಿಧಾನಸಭೆ ಪ್ರವೇಶ ಮಾಡಿದ್ದಾರೆ.
ಸಾ.ರಾ.ಮಹೇಶ್ ಕುಮಾರಸ್ವಾಮಿ ಸಂಪುಟಕ್ಕೆ
ಮೈಸೂರಿನ ಕೆ.ಆರ್.ನಗರ ಕ್ಷೇತ್ರದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಸಂಪುಟ ಸೇರಲಿದ್ದಾರೆ. ಮೈಸೂರು ಜಿಲ್ಲೆಗೆ ಎಷ್ಟು ಸಚಿವ ಸ್ಥಾನ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
2018ರ ಚುನಾವಣೆಯಲ್ಲಿ ಸಾ.ರಾ.ಮಹೇಶ್ ಅವರು 85011 ಮತಗಳನ್ನು ಪಡೆದು ಜಯಗಳಿಸಿದ್ದಾರೆ.
ಎನ್ ಮಹೇಶ್ ಸಂಪುಟಕ್ಕೆ
ಕರ್ನಾಟಕದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದವು. ಚಾಮರಾಜನಗರದ ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್ಪಿಯ ಎನ್.ಮಹೇಶ್ ಗೆಲುವು ಸಾಧಿಸಿದ್ದಾರೆ. ಕರ್ನಾಟಕ ರಾಜ್ಯ ಬಿಎಸ್ಪಿಯ ಅಧ್ಯಕ್ಷರಾದ ಮಹೇಶ್ ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ. ರಾಚಯ್ಯ ಪುತ್ರ ಎ.ಆರ್. ಕೃಷ್ಣಮೂರ್ತಿಯವರನ್ನು ಸೋಲಿಸಿದ್ದಾರೆ. ಅವರು ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ.
ಸಂಪುಟಕ್ಕೆ ಬಂಡೆಪ್ಪ ಕಾಶೆಂಪೂರ
ಎಚ್.ಡಿ.ಕುಮಾರಸ್ವಾಮಿ, ದೇವೇಗೌಡ ಅವರ ಆಪ್ತರಾದ ಬಂಡೆಪ್ಪ ಕಾಶೆಂಪೂರ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಅವರು ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಎಚ್.ಕೆ.ಕುಮಾರಸ್ವಾಮಿ ಸಂಪುಟಕ್ಕೆ
ಹಾಸನ ಜಿಲ್ಲೆಯ ಸಕಲೇಶಪುರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರು ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ. ಹಾಸನ ಜಿಲ್ಲೆಯಿಂದ ಎಚ್.ಡಿ.ರೇವಣ್ಣ ಮತ್ತು ಎಚ್.ಕೆ.ಕುಮಾರಸ್ವಾಮಿ ಸಂಪುಟ ಸೇರಲಿದ್ದಾರೆ.