Namma Metro: ಪಿಲ್ಲರ್ ಕುಸಿತ ಪ್ರಕರಣ: ಗದಗ ಮೂಲದ ತಾಯಿ-ಮಗು ಸಾವು, ತಂದೆಗೆ ತೀವ್ರ ಗಾಯ
ಬೆಂಗಳೂರು, ಜನವರಿ 10: ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮತ್ತು ಮಗು ಇಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಘಟನೆಯಲ್ಲಿ 2 ವರ್ಷದ ಮಗು ವಿಹಾನ್ ಹಾಗೂ ಮಗುವಿನ ತಾಯಿ ತೇಜಸ್ವಿನಿ ಮೃತಪಟ್ಟಿದ್ದಾರೆ. ತಂದೆಗೆ ತೀವ್ರ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ದಂಪತಿಗಳು ಗದಗ ಮೂಲದವರು ಎಂದು ತಿಳಿದು ಬಂದಿದೆ.
ಮಂಗಳವಾರ ಬೆಳಗ್ಗೆ 10ಗಂಟೆ ಸುಮಾರಿಗೆ ನಾಗವಾರ ಸಮೀಪ ಹೆಣ್ಣೂರು ರಸ್ತೆಯಲ್ಲಿ ನಡೆಯುತ್ತಿರುವ ನಮ್ಮ ಮೆಟ್ರೋ ಹಂತ 2ಬಿ ಕಾಮಗಾರಿಯಲ್ಲಿ ನಿರ್ಮಾಣ ಹಂತದ ಕಬ್ಬಿಣ ಸರಳುಗಳ ಪಿಲ್ಲರ್ ರಸ್ತೆ ಬಿದ್ದಿದೆ. ಪರಿಣಾಮ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಈ ದಂಪತಿಗಳು ಮಗು ಸಮೇತ ಸಂಚರಿಸುತ್ತಿದ್ದರು. ಈ ವೇಳೆ ಅವರಿಗೆ ಅವಘಡದಿಂದ ಗಂಭಿರ ಗಾಯಗಳಾಗಿದ್ದವು. ಕೂಡಲೇ ಅವರೆಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿತಾದರೂ ತಾಯಿ ಮತ್ತು ಮಗು ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ.

ರಸ್ತೆಗೆ ಅಡ್ಡಲಾಗಿ ಬಿದ್ದ ಮೆಟ್ರೋ ಪಿಲ್ಲರ್ನಿಂದಾಗಿ ಎರಡು ಅಮಾಯಕ ಜೀವಗಳು ಬಲಿಯಾಗಿವೆ. ಈ ಸಂಬಂಧ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ: ಮೃತರ ಕಟುಂಬಸ್ಥರು ಕಣ್ಣೀರು
ಮೃತ ತೇಜಸ್ವಿನಿ, ವಿಹಾನ್ ಗದಗ ನಗರದ ಸಿದ್ದರಾಮೇಶ್ವರ ಬಡಾವಣೆ ನಿವಾಸಿಗಳಾಗಿದ್ದಾರೆ. ಮೃತರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್ ಆಗಿದ್ದ ವಿಜಯ್ ಕುಮಾರ್ ಸುಲಾಖೆ ಅವರ ಹಿರಿಯ ಸೊಸೆ, ಮೊಮ್ಮಗು ಆಗಿದ್ದು, ವಿಜಯ್ ಅವರ ಹಿರಿಯ ಮಗ ಲೋಹಿತ್ ಸುಲಾಕೆ ಸಾಫ್ಟವೇರ್ ಎಂಜಿನಿಯರ್ ಆಗಿದ್ದು, ಆರು ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು.
ಮೆಟ್ರೋ ಪಿಲ್ಲರ್ ಬಿದ್ದು ತಾಯಿ ಮಗುವಿನ ಮರಣ ಸುದ್ದಿ ತಿಳಿದು ಗದಗನಲ್ಲಿರುವ ಕುಟುಂಬಸ್ಥರಿಗೆ ಆಘಾತವಾಗಿದೆ. ಅವರ ಆಕ್ರಂದನ ಮುಗಿಲು ಮುಟ್ಟಿದ್ದು, ಅಕ್ಕದ ನೆರೆ ಹೊರೆ ಜನರು ಕಣ್ಣಿರು ಹಾಕಿದ್ದಾರೆ.

ತಾಯಿ ಮಗು ಸಾವು: 40ಪರ್ಸೆಂಟ್ ಸರ್ಕಾರದ ಫಲಿತಾಂಶ
ಘಟನೆ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ರಾಜ್ಯ ಸರ್ಕಾರದ ವಿರುದ್ಧ ಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯು 40 ಪರ್ಸೆಂಟ್ ಕಮಿಷನ್ ಪಡೆಯುವ ಬಿಜೆಪಿ ಸರ್ಕಾರದ ಫಲಿತಾಂಶವೇ ಆಗಿದೆ. ಸರ್ಕಾರದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಗುಣಮಟ್ಟ ಇಲ್ಲ ಎಂಬುದಕ್ಕೆ ಇದು ಸಾಕ್ಷಿ. ಸರ್ಕಾರದ ಸಚಿವರು, ಶಾಸಕರು, ಅಧಿಕಾರಿಗಳು ತಾವು ದುಡ್ಡು ಮಾಡಿಕೊಂಡಿದ್ದಾರೆ. ಹೀಗಾಗಿ ಅಭಿವೃದ್ಧಿ ಕೆಲಸಗಳು ಕಳಪೆ ಮಟ್ಟದ್ದಾಗಿವೆ. ಇದು ಸರ್ಕಾರದ ದಿವ್ಯ ನಿರ್ಲಕ್ಷ್ಯವಲ್ಲದೆ ಇನ್ನೇನು?. ಸರ್ಕಾರವು ಜನ ಸಾಮಾನ್ಯ ಜೀವ, ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications