SM Krishna: ಮದ್ದೂರಿನಲ್ಲಿ ಗೆಲುವು ಮತ್ತು ಎಸ್. ಎಂ. ಕೃಷ್ಣ ಮುಖ್ಯಮಂತ್ರಿ ಹುದ್ದೆ
ಬೆಂಗಳೂರು, ಡಿಸೆಂಬರ್ 10: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್. ಎಂ. ಕಷ್ಣ (92) ವಿಧಿವಶರಾದರು. ಕರ್ನಾಟಕದ ರಾಜಕೀಯದ ಅಜಾತ ಶತ್ರುವಾದ ಎಸ್. ಎಂ. ಕೃಷ್ಣ ಮಂಡ್ಯದಿಂದ ದೆಹಲಿ ತನಕ ರಾಜಕೀಯ ಮಾಡಿದವರು. ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಅವರು ಯಾವುದೇ ಒತ್ತಡವನ್ನು ತೋರಿಸಿಕೊಳ್ಳದೇ ಸದಾ ನಗುಮೊಗದಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು.
ಮಂಗಳವಾರ ಮುಂಜಾನೆ ಎಸ್. ಎಂ. ಕೃಷ್ಣ ನಿಧನ ಹೊಂದಿದ್ದಾರೆ. ಸದ್ಯ ಸದಾಶಿವ ನಗರದ ನಿವಾಸದಲ್ಲಿ ಪಾರ್ಥೀವ ಶರೀರವಿದೆ. ಅಂತ್ಯಕ್ರಿಯೆ ಯಾವಾಗ, ಎಲ್ಲಿ? ಎಂಬ ಕುರಿತು ಇನ್ನೂ ತೀರ್ಮಾನವನ್ನು ಕೈಗೊಂಡಿಲ್ಲ. ವಿವಿಧ ಪಕ್ಷಗಳ ನಾಯಕರು ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.

ಎಸ್. ಎಂ. ಕೃಷ್ಣ ಮೂಲತಃ ಮಂಡ್ಯ ಜಿಲ್ಲೆಯವರು ಅವರು ರಾಜ್ಯದ ವಿಧಾನಸಭಾಧ್ಯಕ್ಷರಾಗಿ, ಉಪ ಮುಖ್ಯಮಂತ್ರಿಗಳಾಗಿ, ಮುಖ್ಯಮಂತ್ರಿಗಳಾಗಿ ರಾಜ್ಯ ರಾಜಕೀಯದಲ್ಲಿ ಕೆಲಸ ಮಾಡಿದರು. ಕೇಂದ್ರ ಸಚಿವರಾಗ, ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲರಾಗಿ ರಾಷ್ಟ್ರ ರಾಜಕೀಯದಲ್ಲಿಯೂ ಉನ್ನತ ಹುದ್ದೆಗಳನ್ನು ನಿಭಾಯಿಸಿದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಅನೇಕ ಸಂಕಷ್ಟಗಳ ನಡುವೆಯೂ ಅವರು ಉತ್ತಮವಾಗಿ ಕೆಲಸ ಮಾಡಿದರು, ಬೆಂಗಳೂರು ನಗರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾದದ್ದು.
ಮದ್ದೂರಿನಲ್ಲಿ ಗೆಲುವು ಮುಖ್ಯಮಂತ್ರಿ ಪಟ್ಟ: 1932ರ ಮೇ 1ರಂದು ಎಸ್. ಎಂ. ಕೃಷ್ಣ (ಸೋಮನಹಳ್ಳಿ ಮಲ್ಲಯ್ಯ ಕೃಷ್ಣ) ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಜನಿಸಿದರು. 1962ರಲ್ಲಿ ಅವರು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣಾ ರಾಜಕೀಯವನ್ನು ಆರಂಭಿಸಿದರು. ಮೊದಲ ಚುನಾವಣೆಯಲ್ಲಿಯೇ ಗೆದ್ದರು.
ಆದರೆ 1967ರ ಚುನಾವಣೆಯಲ್ಲಿ ಸೋಲು ಕಂಡರು. 1968ರ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸತ್ ಸದಸ್ಯರಾದರು. 1971ರಲ್ಲಿ ಸಂಸದರಾಗಿದ್ದ ಅವರನ್ನು ಡಿ. ದೇವರಾಜ ಅರಸು ಅವರು ಎಂಎಲ್ಸಿ ಮಾಡಿ, ಸಚಿವ ಸ್ಥಾನ ನೀಡಿದರು. ಆದ್ದರಿಂದ ಎಸ್. ಎಂ. ಕೃಷ್ಣ ರಾಜ್ಯ ರಾಜಕೀಯಕ್ಕೆ ವಾಪಸ್ ಆದರು.
1989ರಲ್ಲಿ ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಸ್. ಎಂ. ಕೃಷ್ಣ ಚುನಾವಣೆಯಲ್ಲಿ ಗೆದ್ದರು. ಉಪ ಮುಖ್ಯಮಂತ್ರಿಗಳಾಗಿ ಮತ್ತು ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದರು.
1994ರ ಚುನಾವಣೆಯಲ್ಲಿ ಸೋಲು ಕಂಡರು.1996ರಲ್ಲಿ ಎಸ್. ಎಂ. ಕೃಷ್ಣ ರಾಜ್ಯಸಭಾ ಸದಸ್ಯರಾದರು. 1999ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಬಂದರು. ಎಸ್. ಎಂ. ಕೃಷ್ಣ ನೇತೃತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿತು. ಪಕ್ಷ 132 ಸೀಟುಗಳಲ್ಲಿ ಜಯಗಳಿಸಿತು. ಕಾಂಗ್ರಸ್ ಪಕ್ಷ ಎಸ್. ಎಂ. ಕೃಷ್ಣ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು.
ಈ ಚುನಾವಣೆಯಲ್ಲಿ ಎಸ್. ಎಂ. ಕೃಷ್ಣ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು 56,907 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿಯಾಗಿದ್ದ ಜೆಡಿಎಸ್ನ ಎಂ. ಮಹೇಶ್ ಚಂದ್ 27,448 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ವಿ. ಅಶೋಕ 11,775 ಮತಗಳನ್ನು ಪಡೆದಿದ್ದರು.
1999ರಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಕ್ಟೋಬರ್ನಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಆದರೆ ಅಧಿಕಾರಾವಧಿ ಪೂರ್ಣಗೊಳ್ಳಲು 5 ತಿಂಗಳು ಬಾಕಿ ಇರುವಾಗ ಲೋಕಸಭೆ ಚುನಾವಣೆ ಎದುರಾಯಿತು. ಆದ್ದರಿಂದ ವಿಧಾನಸಭೆ ಚುನಾವಣೆಯೂ ಒಟ್ಟಿಗೆ ನಡೆಯಲಿ ಎಂದು ಎಸ್. ಎಂ. ಕೃಷ್ಣ ಸರ್ಕಾರ ವಿಸರ್ಜನೆ ಮಾಡಿದರು. ಆದ್ದರಿಂದ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಲ್ಲ.












Click it and Unblock the Notifications