1998ರ ಕೆಪಿಎಸ್ಸಿ ಹಗರಣ, ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು, ಏಪ್ರಿಲ್ 25 : 1998ನೇ ಸಾಲಿನ ಕೆಪಿಎಸ್ಸಿ ನೇಮಕಾತಿ ಹಗರಣದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಿಷ್ಕೃತ ಪಟ್ಟಿಯಂತೆ 115 ಅಧಿಕಾರಿಗಳಿಗೆ ಕೂಡಲೇ ಹುದ್ದೆಯನ್ನು ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.
ಗುರುವಾರ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಈ ಕುರಿತು ಆದೇಶ ನೀಡಿದೆ. ಮುಂಬಡ್ತಿ ಮತ್ತು ಹಿಂಬಡ್ತಿ ಪಡೆದಿರುವ 115 ಅಧಿಕಾರಿಗಳಿಗೆ ಹುದ್ದೆ ನೀಡಿ ಅಧಿಸೂಚನೆ ಹೊರಡಿಸಿ ಎಂದು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಈ ಅಧಿಕಾರಿಗಳ ಪೈಕಿ ಕೆಲವರು ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಹೀಗಾಗಿ ಮೇ 23ರ ಬಳಿಕ ಅವರು ಕರ್ತವ್ಯಕ್ಕೆ ಹಾಜರಾಗಬೇಕು. ಉಳಿದ ಅಧಿಕಾರಿಗಳು ಇಲಾಖೆಗಳ ಮುಖ್ಯಸ್ಥರ ಮುಂದೆ ಹಾಜರಾಗಿ ಕಾನೂನಿನ ಪ್ರಕಾರ ಹುದ್ದೆ ಪಡೆದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ಏನಿದು ಹಗರಣ? : ಕರ್ನಾಟಕ ಲೋಕಸೇವಾ ಆಯೋಗ 1998ರ ಫೆಬ್ರವರಿಯಲ್ಲಿ 383 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಆಗಸ್ಟ್ನಲ್ಲಿ ಪ್ರಾಥಮಿಕ ಪರೀಕ್ಷೆ, 1999ರ ಏಪ್ರಿಲ್ನಲ್ಲಿ ಮುಖ್ಯ ಪರೀಕ್ಷೆ ನಡೆಯಿತು.
ಜನವರಿ 2000ದಲ್ಲಿ ಅರ್ಹ ಅಭ್ಯರ್ಥಿಗಳ ಸಂದರ್ಶನ ನಡೆಯಿತು. 2001ರಲ್ಲಿ ತಾತ್ಕಲಿಕ ಆಯ್ಕೆ ಪಟ್ಟಿ ಪ್ರಕಟವಾಯಿತು. ಆದರೆ, ಪರೀಕ್ಷೆ ಪತ್ರಿಕೆಯ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂದು ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಮೊರೆ ಹೋದರು.
ಕೆಎಟಿ 2002ರ ಫೆಬ್ರವರಿಯಲ್ಲಿ ಕೆಲವು ಉತ್ತರ ಪತ್ರಿಕೆಗಳ ಮರು ಮೌಲ್ಯ ಮಾಪನ ಮಾಡಲು ಆದೇಶಿಸಿತು. ಆದರೆ, ಅಕ್ಟೋಬರ್ನಲ್ಲಿ ಕರ್ನಾಟಕ ಹೈಕೋರ್ಟ್ ಮರು ಮೌಲ್ಯಮಾಪನ ಬೇಡ. ಆಯ್ದ ಉತ್ತರ ಪತ್ರಿಕೆಗಳ ಮಾಡರೇಷನ್ಗೆ ಆದೇಶ ನೀಡಿತು.
2005ರಲ್ಲಿ ಸುಪ್ರೀಂಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿಯಿತು. ಆದರೆ, ಆಯ್ಕೆ ಪಟ್ಟಿ ಕುರಿತು ಆಕ್ಷೇಪ ಮುಂದುವರೆದ ಕಾರಣ, ಕೆಲವು ಅಭ್ಯರ್ಥಿಗಳು ಮತ್ತೆ ಕೋರ್ಟ್ ಮೆಟ್ಟಿಲೇರಿದರು. 1999 ಮತ್ತು 2004ರ ನೇಮಕಾತಿಯಲ್ಲೂ ಅಕ್ರವಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ನ್ಯಾಯಾಲಯ 3 ಬ್ಯಾಚ್ಗಳಲ್ಲಿನ ಅಕ್ರಮ ಕುರಿತು ವರದಿ ನೀಡುವಂತೆ ವಕೀಲರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚನೆ ಮಾಡಿತು. ಈ ಸಮಿತಿ ನೀಡಿದ ವರದಿ ಅನ್ವಯ ಪರಿಷ್ಕೃತ ಪಟ್ಟಿಯನ್ನು ಕೆಪಿಎಸ್ಸಿ ಪ್ರಕಟಿಸಿದೆ. ಆದರೆ, ಅದು ಸಹ ಗೊಂದಲಕ್ಕೆ ಕಾರಣವಾಗಿದೆ.
140 ಅಧಿಕಾರಿಗಳ ಸ್ಥಾನ ಪಲ್ಲಟ : ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ಸುಮಾರು 140 ಅಧಿಕಾರಿಗಳ ಸ್ಥಾನಪಲ್ಲಟವಾಗಲಿದೆ. ಗ್ರೂಪ್ 'ಎ'ನಿಂದ ಗ್ರೂಪ್ 'ಎ'ಗೆ 25. ಗ್ರೂಪ್ 'ಎ'ನಿಂದ ಗ್ರೂಪ್ 'ಬಿ'ಗೆ 24, ಗ್ರೂಪ್ 'ಬಿ'ನಿಂದ ಗ್ರೂಪ್ 'ಎ'ಗೆ 17 ಅಧಿಕಾರಿಗಳ ಸ್ಥಾನಪಲ್ಲಟವಾಗಲಿದೆ.












Click it and Unblock the Notifications