ಮುಂದಿನ ಡಿ. ವೇಳೆಗೆ ವಿಜಯಪುರ 184 ಕೆರೆಗಳಿಗೆ ನೀರು: ಸಿಎಂ
ವಿಜಯಪುರ, ಡಿಸೆಂಬರ್ 22: ಮುಂದಿನ ವರ್ಷದ ಡಿಸೆಂಬರ್ ವೇಳೆಗೆ ವಿಜಯಪುರ ಜಿಲ್ಲೆಯ 184 ಕೆರೆಗಳನ್ನು ತುಂಬಿಸಲಾಗುವುದು. ವಿಜಯಪುರ ಜಿಲ್ಲೆ ಮಾತ್ರವಲ್ಲ, ರಾಜ್ಯದ ಎಲ್ಲೆಡೆ ಮತ್ತು ಅವಕಾಶ ಇರುವ ಕಡೆಗಳಲ್ಲಿ ಕೆರೆಗಳನ್ನು ತುಂಬಿಸುವ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಜಯಪುರ ಹೊರವಲಯದ ಐತಿಹಾಸಿಕ ಬೇಗಂ ತಲಾಬ್ ಕೆರೆ ಆವರಣದಲ್ಲಿ ಆಯೋಜಿಸಿದ ಸಪ್ತಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿ ನಂತರ ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೃಷಿ ಭಾಗ್ಯ ಮತ್ತು ಕೆರೆ ಸಂಜೀವಿನಿ ಯೋಜನೆಯನ್ನೂ ಪರಿಣಾಮಕಾರಿಯಾಗಿ ಜಾರಿಗೆ ತರಲಾಗಿದೆ. ಈ ಮೂಲಕ ರೈತರಿಗೆ ಶಕ್ತಿ ತುಂಬಿ ಆಹಾರ ಧಾನ್ಯಗಳ ಉತ್ಪಾದನೆ ಹೆಚ್ಚಾಗುವಂತೆ ಮಾಡುವುದು ಸರ್ಕಾರದ ಉದ್ದೇಶ. ಹನಿ ನೀರಾವರಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ನೀರು ಪೋಲಾಗಬಾರದು ಎಂಬುದು ಅದರ ಉದ್ದೇಶವಾಗಿದೆ ಎಂದರು.[ನಂಜನಗೂಡು: ಕೆರೆ ತುಂಬಿಸುವ ಯೋಜನೆಗೆ ಸಿಎಂ ಶಿಲಾನ್ಯಾಸ]

ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಉತ್ತರ ಕರ್ನಾಟಕ ಭಾಗದ ಎಂಟು ಜಿಲ್ಲೆಗಳ ರೈತರಿಗೆ ಅನುಕೂಲವಾಗುತ್ತದೆ. ನಾನೂ ರೈತನ ಮಗನೇ. ರೈತರಿಗೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತೇನೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತಕ್ಕೆ 55 ಸಾವಿರ ಕೋಟಿ ಬೇಕಾಗುತ್ತದೆ. ನಮ್ಮ ಈ ಅವಧಿಯಲ್ಲಿ ಅದರ ಕಾಮಗಾರಿ ಮುಗಿಯದು. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಪೂರ್ಣಗೊಳಿಸುತ್ತೇವೆ ಎಂದು ತಿಳಿಸಿದರು.
ನೀರಾವರಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತದೆ. ಹೆಚ್ಚಿನ ಅನುಕೂಲವಾಗಲಿ ಎಂಬ ಕಾರಣಕ್ಕೆ ಇದೇ ಭಾಗದವರಿಗೆ ಜಲಸಂಪನ್ಮೂಲ ಸಚಿವ ಸ್ಥಾನ ನೀಡಲಾಗಿದೆ. ಉತ್ತರ ಕರ್ನಾಟಕ ಮಾತ್ರವಲ್ಲ. ರಾಜ್ಯದ ಎಲ್ಲ ಭಾಗಗಳನ್ನು ಸಮಾನವಾಗಿ ನೋಡುತ್ತೇವೆ.[ಕರಾವಳಿ ನೀರಿನ ಮೇಲೆ ರಾಜ್ಯ ಸರ್ಕಾರದ ಕಣ್ಣು..!]

ಸಪ್ತಕೆರೆ ತುಂಬುವ ಯೋಜನೆಗೆ ಚಾಲನೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯಪುರ ಹೊರವಲಯದ ಐತಿಹಾಸಿಕ ಬೇಗಂ ತಲಾಬ್ ಕೆರೆ ಆವರಣದಲ್ಲಿ ಆಯೋಜಿಸಿದ ಸಪ್ತಕೆರೆ ತುಂಬುವ ಯೋಜನೆಗೆ ಚಾಲನೆ ನೀಡಿದರು. ಭೂತನಾಳ್ ಹಾಗೂ ಬೇಗಂ ತಲಾಬ್ ಕೆರೆಗೆ ಗಂಗಾ ಪೂಜೆ ಸಲ್ಲಿಸಿ ಬಾಗೀನ ಅಪಿ೯ಸಿದರು. ತಲಾಬ್, ಭೂತನಾಳ, ಮಮದಾಪುರ, ತಿಡಗುಂದಿ ಸೇರಿದಂತೆ ಏಳು ಕೆರೆಗಳು ಕೃಷ್ಣಾ ಜಲಾಶಯದ ಹಿನ್ನೀರಿನಿಂದ ತುಂಬಿಸಲಾಗಿದೆ.












Click it and Unblock the Notifications