ಮುತಾಲಿಕ್ ಕಾನೂನು ಉಲ್ಲಂಘಿಸಿದ್ದರೆ ಶಿಕ್ಷೆಯಾಗುತ್ತದೆ: ಎಚ್ಡಿಕೆ
ಬೆಂಗಳೂರು, ಜೂನ್ 18: 'ಮುತಾಲಿಕ್ ಆಗಲಿ, ಯಾರೇ ಆಗಲಿ ಕಾನೂನನ್ನು ಉಲ್ಲಂಘಿಸಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ' ಎಂದು ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಛೆ, ಇದೆಂಥ ಮಾತು! ಗೌರಿಯನ್ನು ನಾಯಿಗೆ ಹೋಲಿಸಿದರೇ ಮುತಾಲಿಕ್?!
ಗೌರಿ ಲಂಕೇಶ್ ಹತ್ಯೆಯ ಕುರಿತು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ನೀಡಿದ ಹೇಳಿಕೆಯ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ನಾನು ಏನನ್ನೂ ಹೇಳುವುದಕ್ಕೆ ಇಷ್ಟಪಡುವುದಿಲ್ಲ. ಮುತಾಲಿಕ್ ಆಗಲಿ, ಯಾರೇ ಆಗಲಿ... ಕಾನೂನನ್ನು ಉಲ್ಲಂಘಿಸುವವರು ಅಥವಾ ಅಕ್ರಮ ಚಟುವಟಿಕೆಗೆ ಬೆಂಬಲ ನೀಡುವವರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಅವರು ಹೇಳಿದರು.
ಗೌರಿ ಹತ್ಯೆಗೆ ಪ್ರಕರಣದ ಆರೋಪಿ ಪರಶುರಾಮ್ ವಾಘ್ಮೊರೆಯೊಂದಿಗೆ ಪ್ರಮೋದ್ ಮುತಾಲಿಕ್ ಇದ್ದ ಚಿತ್ರವೊಂದು ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಅವರು ನನ್ನೊಂದಿಗೆ ಸಾಕಷ್ಟು ಜನ ಫೋಟೊ ತೆಗೆಯಿಸಿಕೊಳ್ಳುತ್ತಾರೆ. ಹಾಗಂತ ಅವರೆಲ್ಲ ನನಗೆ ಪರಿಚಿತರು ಎನ್ನುವುದಕ್ಕಾಗುವಿಲ್ಲ. ಪರಶುರಾಮ್ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಅವರು ಹೇಳಿದ್ದರು. ಗೌರಿ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಮೌನವಾಗಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಅವರು, 'ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಪ್ರಧಾನಿ ನರೇಂದ್ರ ಮೊದಿಯವರೇ ಹೊಣೆ ಎನ್ನುವುದಕ್ಕಾಗುತ್ತದೆಯೇ? ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗಲೂ ಹಲವು ಹತ್ಯೆಗಳು ನಡೆದಿದ್ದವು. ಆಗ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿತ್ತೆ?" ಎಂದು ಅವರು ಪ್ರಶ್ನಿಸಿದ್ದರು.