ಊರ ಜನರಿಂದ 'ಹುಚ್ಚ' ಎನಿಸಿಕೊಂಡಿದ್ದ ಕಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ!
Recommended Video

ಬೆಂಗಳೂರು, ನವೆಂಬರ್ 30: ಊರ ಮಂದಿಯೆಲ್ಲಾ ಆತನನ್ನು ಹುಚ್ಚ ಎಂದು ಕರೆದಿದ್ದರು. ಹೊಟ್ಟೆ-ಬಟ್ಟೆಗೆ ಗತಿ ಇರದಿದ್ದ ಆ ವ್ಯಕ್ತಿ ಇದ್ದದ್ದೆಲ್ಲವನ್ನೂ ಮಾರಿ ಜನೋದ್ಧಾರಕ್ಕೆ ನಿಂತಿದ್ದ ಹಾಗಾಗಿ ಊರ ಮಂದಿ ಆತನಿಗೆ ಹುಚ್ಚನ ಪಟ್ಟ ಕಟ್ಟಿದ್ದರು.
ಊರ ಜನ ಅಂದು ಹುಚ್ಚನೆಂದು ಕರೆದಿದ್ದ ಅದೇ ವ್ಯಕ್ತಿಗೆ ಇಂದು ಸಿಎಂ ಕುಮಾರಸ್ವಾಮಿ ಅವರು ಸನ್ಮಾನ ಮಾಡಿದ್ದಾರೆ. ರಾಜ್ಯದ ಪ್ರತಿಷ್ಠಿತ ಪ್ರಶಸ್ತಿಗಳಲ್ಲೊಂದಾದ 'ಕನ್ನಡ ರಾಜ್ಯೋತ್ಸವ' ಪ್ರಶಸ್ತಿ ಅವರ ಮುಡಿಗೇರಿದೆ. ಆತನ ಹೆಸರು ಕಾಮೇಗೌಡ. 82 ವರ್ಷ ವಯಸ್ಸು ಅವರಿಗೆ.
ಮಂಡ್ಯದ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯ ಕಾಮೇಗೌಡರದ್ದು ಕೆರೆ ಉಳಿಸುವ ಕಾಯಕ. ತಮ್ಮ ಜೀವನಾಧಾರವಾಗಿದ್ದ ಕುರಿಗಳನ್ನು ಮಾರಿ ಕೆರೆ ಕಟ್ಟಿದವರು ಕಾಮೇಗೌಡರು. ಈ ವರೆಗೆ 14 ಕೆರೆಗಳನ್ನು ಕಾಮೇಗೌಡರು ಕಟ್ಟಿದ್ದಾರೆ. ತಮಗೆ ಬಂದ ಪ್ರಶಸ್ತಿ, ದುಡಿದ ಅಲ್ಪ ಸ್ವಲ್ಪ ಹಣ ಎಲ್ಲವನ್ನೂ ಕೆರೆಗಳಿಗೇ ಬಳಸಿದ್ದಾರೆ ಕಾಮೇಗೌಡರು.
ಹುಟ್ಟಿನಿಂದಲೇ ಬಡ ಕುಟುಂಬದ ಹಿಂದುಳಿದ ವರ್ಗದ ಕಾಮೇಗೌಡರಿಗೆ ಕುರಿ ಕಾಯುವುದೇ ಕಾಯಕ. ಆದರೆ ಕುರಿಗಳನ್ನು ಮಾರಿ ಬಂದ ಹಣದಲ್ಲಿ ಕೆರೆ ಕಟ್ಟಿಸುತ್ತಾ ತಮ್ಮ ಊರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳು ಇಂದು ಹಸಿರಿನಿಂದ ನಳನಳಿಸುವಂತೆ ಮಾಡಿದ್ದಾರೆ ಕಾಮೇಗೌಡರು.

ಚಡ್ಡಿ, ಮಾಸಿದ ಅಂಗಿಯಲ್ಲೇ ಪರ್ಯಟನೆ
ಚಡ್ಡಿ, ಮಾಸಿದ ಅಂಗಿ ಕೈಯಲ್ಲೊಂದು ಕೋಲು, ಹೆಗಲಿಗೆ ಸಣ್ಣ ಚೀಲ ಹಿಡಿದು ದಿನವೂ ಊರೂರು ಅಲೆದು ತಾವು ಕಟ್ಟಿದ ಕೆರೆಗಳನ್ನು ಸಂರಕ್ಷಿಸುತ್ತಿದ್ದಾರೆ. ಅಲ್ಲಿ ನೀರು ಕುಡಿಯಲು ಬರುವ ಹಕ್ಕಿ, ಪ್ರಾಣಿಗಳನ್ನು ನೋಡಿ ಸಂತೋಷ ಪಡುತ್ತಾರೆ. ಇಂಥಹಾ ಕಾಮೇಗೌಡರಿಗೆ ನಿನ್ನೆಯಷ್ಟೆ ಕುಮಾರಸ್ವಾಮಿ ಅವರು ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದಾರೆ ಕಾರ್ಯಕ್ರಮಕ್ಕೂ ಅವರು ಅದೇ ಚಡ್ಡಿ, ಅಂಗಿ, ಕೋಲು, ಚೀಲದೊಂದಿಗೆ ಬಂದಿದ್ದರು!
ಮಂಡ್ಯದ ಕಾಮೇಗೌಡರನ್ನು ಹೊಗಳಿದ ವಿವಿಎಸ್ ಲಕ್ಷ್ಮಣ್

ಊರ ಜನ ಹುಚ್ಚ ಎಂದಿದ್ದರು
ಕಳೆದ 40 ವರ್ಷದಿಂದ ಪ್ರತಿದಿನ ಬೆಳಿಗ್ಗೆ 5 ರಿಂದ 9 ರವರೆಗೆ ಕೆರೆ ಅಗಿಯುವ ಕೆಲಸ ಮಾಡುತ್ತಾ ಬಂದಿದ್ದಾರೆ ಕಾಮೇಗೌಡ. ಕೆಲವೊಮ್ಮೆ ರಾತ್ರಿ ಕತ್ತಲಾದ ಮೇಲೆ ಲಾಟೀನು ಇಟ್ಟುಕೊಂಡು ಮಣ್ಣು ಅಗೆಯುವ ಕಾಯಕ ಮಾಡಿದ್ದಾರೆ. ಇವರ ಈ ಭಗೀರಥ ಪ್ರಯತ್ನ ಊರ ಜನರಿಗೆ ಹುಚ್ಚೆನಿಸಿ ಕಾಮೇಗೌಡರನ್ನು ಹುಚ್ಚನೆಂದೂ ಕರೆದಿದ್ದರು. ಆದರೆ ಇಂದು ಹಾಗೆ ಕರೆದಿದ್ದವರು ಇಂದು ಪಶ್ಚಾತಾಪ ಪಡುತ್ತಿದ್ದಾರೆ.

ಬರ ಕಂಡು ಕರಗಿದ್ದ ಕಾಮೇಗೌಡ
40 ವರ್ಷಗಳ ಹಿಂದೆ ಒಮ್ಮೆ ಅವರೂರಿನಲ್ಲಿ ಬರ ಬಂದಿತ್ತಂತೆ ಊರ ಪಕ್ಕದ ಕುಂದಿನಿ ಬೆಟ್ಟ, ಹಸಿರೇ ಇಲ್ಲದೆ ಬೋಡಾಗಿಬಿಟ್ಟಿತಂತೆ. ಪ್ರಾಣಿ-ಪಕ್ಷಿಗಳು ನೀರಿನಲ್ಲದೇ ಸತ್ತು ಹೋದದನ್ನು ಕುರಿ ಕಾಯಲು ಹೋಗುತ್ತಿದ್ದ ಕಾಮೇಗೌಡರು ಪ್ರತಿದಿನ ನೋಡುತ್ತಿದ್ದರಂತೆ. ಇದು ಅವರ ಹೃದಯ ಹಿಂಡಿದೆ ಹಾಗಾಗಿ ಅಂದೇ ನಿರ್ಣಯಿಸಿ ಈ 40 ವರ್ಷಗಳಲ್ಲಿ 14 ಕೆರೆ ಕಟ್ಟಿಸಿದ್ದಾರೆ, ಕುಂದಿನಿ ಬೆಟ್ಟ ಈಗ ಹಸಿರೋ-ಹಸಿರು.

ಎಲ್ಲ ಹಣವೂ ಕೆರೆಗೆ ಮೀಸಲು
ಕಾಮೇಗೌಡರಿಗೆ ರಾಜ್ಯೋತ್ಸವ ಪ್ರಶಸ್ತಿ ಬಂದಾಗ ಪತ್ರಕರ್ತರು ಅವರನ್ನು ಹುಡುಕಿ ಹೋಗಿದ್ದಾರೆ. ನಿಮಗೆ ಪ್ರಶಸ್ತಿ ಬಂದಿದೆ ಲಕ್ಷ ರೂಪಾಯಿ ಬಹುಮಾನ ಇನ್ನೂ ಏನೇನೋ ನೀಡುತ್ತಾರೆ ಎಂದಿದ್ದಾರೆ. ಅಷ್ಟನ್ನೂ ನಾನು ಕೆರೆ ಕಟ್ಟಲು ಬಳಸುತ್ತೇನೆ ಎಂದಷ್ಟೆ ಹೇಳಿ ಕೆರೆ ಕಾಯಲು ಹೊರಟುಬಿಟ್ಟಿದ್ದಾರೆ ಕಾಮೇಗೌಡರು.

ಪ್ರಶಸ್ತಿಗೇ ಗೌರವ ದೊರೆತ ದಿನ
ನಿನ್ನೆ ನಡೆದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೂ ಅವರು ಅದೇ ನಿರ್ಲಿಪ್ತ ಭಾವದಿಂದ ಬಂದಿದ್ದರು. ಅದೇ ಚಡ್ಡಿ, ಅಂಗಿ, ಕೈಯಲ್ಲಿ ಬೆತ್ತ, ಒಂದು ಚೀಲ ಇಷ್ಟೆ ಅವರದ್ದು. ಕಾಮೇಗೌಡರಿಗೆ ಫಲಕವೊಂದನ್ನು ಸಿಎಂ ಕೊಟ್ಟರು, ಕಾಮೇಗೌಡರ ಕಪ್ಪು ಕೈಯಲ್ಲಿ ಫಲಕ ವಿಶೇಷ ಮೆರಗು ಪಡೆದು ಹೊಳೆಯಿತು. ಪ್ರಶಸ್ತಿಗೇ ವಿಶೇಷ ಗೌರವ ಪ್ರಾಪ್ತಿಯಾಯಿತು.












Click it and Unblock the Notifications