ರಾಜಕಾರಣದ 'ತ್ರಿವಿಕ್ರಮ' ಕುಮಾರಸ್ವಾಮಿ ವರ್ಸಸ್ 'ವಾಮನ' ಸಿದ್ದಮಾರಯ್ಯ
ರಾಮನಗರ, ಏಪ್ರಿಲ್ 24: ಜೆಡಿಎಸ್ ನ ಕುಮಾರಸ್ವಾಮಿ ವಿರುದ್ಧ ಸಿದ್ದಮಾರಯ್ಯ ಅವರು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಕಣಕ್ಕೆ ಇಳಿದಿದ್ದಾರೆ. ನೀವು ಸರಿಯಾಗಿಯೇ ಓದಿಕೊಂಡಿದ್ದೀರಿ. ಇವರು ಸಿದ್ದಮಾರಯ್ಯ. ರಾಮನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಭಾರೀ ಸುದ್ದಿಯಲ್ಲಿದ್ದಾರೆ.
ಅಂದಹಾಗೆ, ರಾಮನಗರ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳು ಈ ಬಾರಿ ಚುನಾವಣೆಯಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಘಟಾನುಘಟಿ ನಾಯಕರು. ಮುಖ್ಯಮಂತ್ರಿ ಸ್ಥಾನದ ಮೇಲೆ ಕೂರಬಹುದಾದಂಥವರು, ಪಂಥ ಕಟ್ಟಿ ಸ್ಪರ್ಧೆ ಮಾಡುತ್ತಿರುವವರು... ಹೀಗೆ ಗಮನ ಸೆಳೆಯುತ್ತಿರುವವರು ಹಲವರು.
ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ
ಇದೀಗ ರಾಮನಗರ ಕ್ಷೇತ್ರದಲ್ಲಿ ರಾಜಕಾರಣದ 'ತ್ರಿವಿಕ್ರಮ' ಎನಿಸಿರುವ ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅಂಥವರು ನಿಂತಿರುವ ಕಡೆ ಪಕ್ಷೇತರರಾಗಿ 'ವಾಮನ' ಸ್ವರೂಪಿಯೊಬ್ಬರು ಅಖಾಡದಲ್ಲಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಹಲವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಆ ಪೈಕಿ ಬಿ.ಎ., ಪದವೀಧರ ಎರಡೂವರೆ ಅಡಿ ಎತ್ತರದ ಸಿದ್ದಮಾರಯ್ಯ ಕೂಡ ನಾಮಪತ್ರ ಸಲ್ಲಿಸಿ, ಎಲ್ಲರ ಗಮನ ಸೆಳೆದರು.
ಕಗ್ಗಲಳ್ಳಿ ಸಿದ್ದಮಾರಯ್ಯರನ್ನು ಹೆಗಲ ಮೇಲೆ ಮೆರವಣಿಗೆ
ಮೂವತ್ತೈದು ವರ್ಷದ ಕಗ್ಗಲಳ್ಳಿ ನಿವಾಸಿ, ಎರಡೂವರೆ ಅಡಿ ಎತ್ತರದ ಸಿದ್ದಮಾರಯ್ಯ ತಮ್ಮ ಬೆಂಬಲಿಗರೊಂದಿಗೆ ರಾಮನಗರದ ಮಿನಿ ವಿಧಾನಸೌಧಕ್ಕೆ ಬಂದು ಚುನಾವಣಾಧಿಕಾರಿ ಡಾ.ನಾಗರಾಜು ಅವರಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಸಿ ಹೊರ ಬಂದ ಸಿದ್ದಮಾರಯ್ಯರನ್ನು ಅಭಿಮಾನಿಗಳು ಹೆಗಲ ಮೇಲೆ ಹೊತ್ತ ಮೆರವಣಿಗೆ ಮಾಡಿದರು. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಎದುರು ಚುನಾವಣೆ ಅಖಾಡಕ್ಕೆ ಧುಮುಕಿ ಎಲ್ಲರ ಗಮನ ಸೆಳೆದಿರುವ ಸಿದ್ದಮಾರಯ್ಯರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿದಾಗ ತನ್ನ ಮನದಾಳವನ್ನು ಹಂಚಿಕೊಂಡರು.
ಠೇವಣಿ ಹಣವನ್ನೂ ಸ್ನೇಹಿತರೇ ಕಟ್ಟಿದ್ದಾರೆ
"ನನ್ನ ಸ್ಪರ್ಧೆ ಯಾವುದೇ ಅಭ್ಯರ್ಥಿ ಅಥವಾ ಯಾವುದೇ ಪಕ್ಷದ ವಿರುದ್ಧವಲ್ಲ. ಸಮಾಜ ಸೇವೆ ಮಾಡುವ ಹಂಬಲದಿಂದ, ಸ್ನೇಹಿತರ ಒತ್ತಾಸೆಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ನನಗೆ ಬೆಂಬಲವಾಗಿ ನಿಂತಿರುವುದು ಸ್ನೇಹಿತರು. ಅವರೇ ಎಲ್ಲರೂ ಸೇರಿ ಹಣ ಸಂಗ್ರಹ ಮಾಡಿ, ಠೇವಣಿ ಹಣ ಕಟ್ಟಿದ್ದಾರೆ. ಚುನಾವಣೆ ವೆಚ್ಚವನ್ನು ಕೂಡ ಅವರೇ ಭರಿಸುತ್ತಿದ್ದಾರೆ. ಯಾರೂ ಸ್ಥಿತಿವಂತರಲ್ಲ. ಎಲ್ಲರೂ ಕಷ್ಟ ಜೀವಿಗಳು. ಅವರ ನಿರ್ಧಾರವೇ ಅಂತಿಮ. ಅವರು ತೋರಿದ ಮಾರ್ಗದಲ್ಲಿ ನಡೆಯುತ್ತೇನೆ" ಎಂದರು.
ಇನ್ನೂ ಮದುವೆಯಾಗಿಲ್ಲ
ರಾಮನಗರ ತಾಲ್ಲೂಕಿನ ಕಸಬಾ ಹೋಬಳಿಯ ಕಗ್ಗಲಳ್ಳಿ ಸಿದ್ದಮಾರಯ್ಯ ಅವಿವಾಹಿತರು. ರೈತ ಕುಟುಂಬದ ಹಿನ್ನೆಲೆಯ ಸಿದ್ದಮಾರಯ್ಯ ಅವರ ತಂದೆ ಸಿದ್ದಯ್ಯ ಮತ್ತು ತಾಯಿ ಕೆಂಜಮ್ಮ. ತಮ್ಮ ನಾಲ್ಕು ಎಕರೆ ಜಮೀನಲ್ಲಿ ಮಾವು, ತೆಂಗು ಮತ್ತು ಕಾಕಡಾ ಹೂ ಬೆಳೆದು ಜೀವನ ಸಾಗಿಸುತಿದ್ದಾರೆ. "ನನ್ನನ್ನು ಇಷ್ಟಪಡುವಂಥ ಹೆಣ್ಣು ಸಿಕ್ಕಿಲ್ಲ. ಹಾಗಾಗಿ ನಾನು ಇನ್ನೂ ಮದುವೆಯಾಗಿಲ್ಲ" ಎನ್ನುವಾಗ ಸಿದ್ದಮಾರಯ್ಯ ಅವರ ತುಂಬು ಕೆನ್ನೆಯು ಕೆಂಪಗಾಗುತ್ತದೆ. ಚುನಾವಣೆ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ, ನಾಲ್ಕು ಎಕರೆ ಕೃಷಿ ಜಮೀನು ಹೊಂದಿದ್ದೇನೆ. ಬ್ಯಾಂಕಿನಲ್ಲಿ ಅರವತ್ತಾರು ಸಾವಿರ ಠೇವಣಿ ಇದೆ. ಕೈಯಲ್ಲಿ ನಲವತ್ತು ಸಾವಿರ ಹಣವಿದೆ ಮತ್ತು ತಾಯಿ ಕೆಂಚಮ್ಮನವರ ಬಳಿ ಮೂವತ್ತು ಗ್ರಾಂ ಚಿನ್ನದ ಅಭರಣವಿದೆ ಎಂದು ಘೋಷಿಸಿಕೊಂಡಿದ್ದಾರೆ.
ನಾನು ಕುಮಾರಣ್ಣನ ಎದುರಾಳಿಯಲ್ಲ
ಚುನಾವಣೆಯಲ್ಲಿ ಗೆಲ್ಲುವ ನಂಬಿಕೆಯಿದೆ. ಅದು ದೇವರ ಮತ್ತು ಜನಗಳ ಅಶೀರ್ವಾದ. ಮತದಾರರ ಮನೆಗೆ ತೆರಳಿ ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತೇನೆ. ನಾನೇ ಸ್ವತಃ ಸಮಸ್ಯೆಗಳನ್ನು ಪರಿಹರಿಸುತ್ತೇನೆ. ನನಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತೇನೆ. ಜನರು ನನಗೆ ಮತ ನೀಡುವ ವಿಶ್ವಾಸವಿದೆ. ನಾನು ಕುಮಾರಣ್ಣನ ಎದುರಾಳಿಯಲ್ಲ. ಅವರಿಗಿಂತ ನಾನು ನೂರು ಪಟ್ಟು ಚಿಕ್ಕವನು. ನಾನಿನ್ನೂ ಕೆಳ ಮಟ್ಟದಲ್ಲಿದೇನೆ. ನನ್ನ ಕೈಲಾದ ಮಟ್ಟಿಗೆ ಸಮಾಜ ಸೇವೆ ಮಾಡಲು ಪ್ರಯತ್ನಿಸುತ್ತಿದ್ದೇನೆ. ನಾನು ಸೋತರೂ ಸಮಾಜ ಸೇವೆ ಮಾಡುತ್ತೇನೆ ಮತ್ತು ಕಷ್ಟದಲ್ಲಿರುವ ಸ್ನೇಹಿತರಿಗೆ ಅಸರೆಯಾಗಿ ನಿಲ್ಲಲು ಶ್ರಮಿಸುತ್ತೇನೆ ಎಂದರು