Get Updates
Get notified of breaking news, exclusive insights, and must-see stories!

ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಮತ್ತೊಮ್ಮೆ ಸೆಡ್ಡು ಹೊಡೆಯಲು ಬಿಜೆಪಿ ಪ್ಲಾನ್‌: ಮಾಹಿತಿ ತಿಳಿಯಿರಿ

ಕನಕಗಿರಿ, ಮಾರ್ಚ್‌, 23: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ತಮ್ಮ ಕ್ಷೇತ್ರಗಳನ್ನು ಕದಲದೇ ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ. ಹಾಗಾದರೆ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ರಂಗು ಮತ್ತು ಕ್ಷೇತ್ರದ ಪರಿಚಯವನ್ನು ತಿಳಿಯೋಣ ಬನ್ನಿ.

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಕನಕಗಿರಿ ಕರ್ನಾಟಕ ರಾಜ್ಯದ 224 ಕ್ಷೇತ್ರಗಳಲ್ಲಿ ಒಂದಾಗಿದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಜಯ ಸಾಧಿಸಿದ್ದರು. ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

karnataka assembly elections 2023: Kanakagiri constituency analysis

2018ರಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ

2018ರಲ್ಲಿ ಬಿಜೆಪಿ ಪಕ್ಷದ ಬಸವರಾಜ ದಡೇಸೂಗೂರು ಗೆಲುವು ಸಾಧಿಸಿದ್ದು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಶಿವರಾಜ್ ಸಂಗಪ್ಪ ತಂಗಡಗಿ 14,225 ಮತಗಳ ಅಂತರದಿಂದ ಸೋಲನುಭವಿಸಿದ್ದರು.

ಕ್ಷೇತ್ರಕ್ಕೆ ಆಗಮಿಸುತ್ತಿರುವ ಆಕಾಂಕ್ಷಿಗಳ ದಂಡು

ಸಂಸದ ಸಂಗಣ್ಣ ಕರಡಿ, ಮಾಜಿ ಸಚಿವ ನಾಗಪ್ಪ ಸಾಲೋಣಿ ಸಹ ಹಾಲಿ ಶಾಸಕ ಬಸವರಾಜ ದಡೇಸೂಗೂರು ಅವರಿಗೆ ಬಿಜೆಪಿ ಟಿಕೆಟ್‌ ನೀಡುವುದು ಖಚಿತ ಎನ್ನುವುದನ್ನು ಇತ್ತೀಚೆಗಷ್ಟೇ ಬಹಿರಂಗಗೊಳಿಸಿದ್ದರು. ಈ ಬೆಳವಣಿಗೆಗಳ ನಡುವೆ ಬಿಜೆಪಿಯಿಂದ ಸರದಿಯಲ್ಲಿ ಅನೇಕ ಆಕಾಂಕ್ಷಿಗಳು ಕ್ಷೇತ್ರಕ್ಕೆ ಆಗಮಿಸುತ್ತಲೇ ಇದ್ದಾರೆ.

karnataka assembly elections 2023: Kanakagiri constituency analysis

ಟಿಕೆಟ್ ಆಕಾಂಕ್ಷಿಗಳ ವಿವರ

ಜಿ. ಗಾಯತ್ರಿ ತಿಮ್ಮಾರೆಡ್ಡಿಗೌಡ ಗಿಲ್ಲೇಸೂಗೂರು, ಪಿ.ವಿ.ರಾಜಗೋಪಾಲ, ಈಶಪ್ಪ ಹಿರೇಮನಿ, ಡಿ.ಎಂ. ಧರ್ಮಣ್ಣ, ಜೆ. ಮೀಥಲೇಶ್ವರ, ಪುಷ್ಪಾಂಜಲಿ ಗುನ್ನಾಳ, ಅಮರೇಶ ರೈತನಗರ, ಸಂದೀಪಕುಮಾರ ಗಂಗಾವತಿ ಎಂಬುವವರು ಆಕಾಂಕ್ಷಿಗಳಾಗಿದ್ದಾರೆ. ಇನ್ನು ಹಾಲಿ ಶಾಸಕ ದಡೇಸೂಗೂರು ಅವರ ಅಭಿವೃದ್ಧಿ ಕಾರ್ಯಗಳಿಗಿಂತ ಬೇರೆ ವಿಷಯಗಳಿಗೆ ಹೆಚ್ಚು ಸುದ್ದಿಯಲ್ಲಿದ್ದಾರೆ.

ಕಳೆದ ಬಾರಿ ಪರಾಭವಗೊಂಡಿದ್ದ ಶಿವರಾಜ್‌

ಓರ್ವ ಮಹಿಳೆ ಕ್ಷೇತ್ರದಲ್ಲಷ್ಟೇ ಅಲ್ಲ ರಾಜ್ಯ ರಾಜಧಾನಿ ಬೆಂಗಳೂರಿನವರೆಗೆ ಹೋಗಿ ಶಾಸಕರ ಮಾನ ಹರಾಜು ಹಾಕಿದ್ದರು. ನಂತರ ಪಿಎಸ್‌ಐ ಹಗರಣ ಕೂಡ ಸುತ್ತಿಕೊಂಡಿತ್ತು. ಇದೇ ವಿಚಾರ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾದರೆ ಮತ್ತೊಂದೆಡೆ ಕಳೆದ ಬಾರಿ ಇವರ ವಿರುದ್ಧ ಪರಾಭವಗೊಂಡಿದ್ದ ಮಾಜಿ ಸಚಿವ ಶಿವರಾಜ್‌ ತಂಗಡಗಿಯವರು ಟೀಕಾ ಪ್ರಹಾರ ನಡೆಸಲು ಸುಲಭವಾದಂತಾಗಿತ್ತು. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿದಲ್ಲಿ ಇನ್ನುಳಿದ ಆಕಾಂಕ್ಷಿಗಳ ಹೆಸರು ಮುಂಚೂಣಿಗೆ ಬರುವ ಸಾಧ್ಯತೆಯಿದೆ ಎನ್ನಲಾಗಿತ್ತು.

karnataka assembly elections 2023: Kanakagiri constituency analysis

ಶಿವರಾಜ್‌ ಪರಾಭವಗೊಂಡಿದ್ದು ಯಾವಾಗ?

ಇನ್ನು 2008 ಹಾಗೂ 2013ರಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ ಶಿವರಾಜ್‌ ತಂಗಡಗಿ ಕಳೆದ ಬಾರಿ ಪರಾಭವಗೊಂಡಿದ್ದರು. ಆದರೂ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಮುಕುಂದರಾವ್‌ ಭವಾನಿಮಠ ಸಹ ಕನಕಗಿರಿಯಿಂದ ಅರ್ಜಿ ಸಲ್ಲಿಸಿರುವುದು ವಿಶೇಷವಾಗಿದೆ. ತಂಗಡಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೆ, ಮತ್ತೊಂದೆಡೆ ಭವಾನಿಮಠ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತರಾಗಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಟಿಕೆಟ್‌ ಕುತೂಹಲ ಮೂಡಿಸಿದೆ.

ಇದೇ ಆಪ್ತತೆಯ ಕಾರಣದಿಂದ ಇತ್ತೀಚೆಗೆ ಸಿದ್ದರಾಮಯ್ಯನವರು ಈ ಬಾರಿ ತಂಗಡಗಿ ಅವರನ್ನು ಗೆಲ್ಲಿಸಿ ಎಂದು ಜನರಲ್ಲಿ ಮನವಿ ಮಾಡಿದ್ದರು. ಈ ನಡೆಯನ್ನು ಪ್ರಶ್ನಿಸಿ ಭವಾನಿಮಠ ಸಿದ್ದರಾಮಯ್ಯ ವಿರುದ್ಧ ಎಐಸಿಸಿಗೆ ದೂರನ್ನೂ ಸಹ ನೀಡಿದ್ದರು. ಅಚ್ಚರಿ ಅಂದರೆ ತಂಗಡಗಿ-ಭವಾನಿಮಠ ಆಪ್ತ ಸ್ನೇಹಿತರಾಗಿದ್ದಾರೆ. ಆದ್ದರಿಂದ ಇದು ಕಾಂಗ್ರೆಸ್‌ ವಲಯದಲ್ಲಿ ಗೊಂದಲ ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ತಂಗಡಗಿ ಕಳೆದ ಬಾರಿ ಸೋಲನುಭವಿಸಿದ್ದರೂ, ಮನೆಯಲ್ಲಿ ಕೂರದೇ ಕ್ರೀಯಾಶೀಲ ಪ್ರತಿಪಕ್ಷದ ನಾಯಕನಂತೆ ಜನತೆಯ ನಡುವೆಯೇ ಇದ್ದಾರೆ. ಹೀಗೆ ಕ್ಷೇತ್ರದಲ್ಲಿ ಆಡಳಿತರೂಢ ಶಾಸಕರ ವೈಫಲ್ಯಗಳು ಸೇರಿದಂತೆ ಅನೇಕ ವಿಷಯಗಳ ಕುರಿತು ಜನರಿಗೆ ವಿರೋಧ ಪಕ್ಷದ ನಾಯಕರು ಮನದಟ್ಟು ಮಾಡುತ್ತಿದ್ದಾರೆ.

ಈ ಹಿಂದೆಯೂ ತಂಗಡಗಿ ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದರು. ಆದರೆ ಸಣ್ಣ ನೀರಾವರಿ ಇಲಾಖೆಯಲ್ಲಿನ ಹಗರಣ, ಕೊಲೆ ಪ್ರಕರಣ ಇತ್ಯಾದಿಗಳು ಸುತ್ತಿಕೊಂಡು ಕಳೆದ ಬಾರಿ ಸೋಲನುಭವಿಸಿದ್ದರು. ಇದೀಗ ಮತ್ತೆ ಮುನ್ನೆಲೆಗೆ ಬಂದರೆ ಭವಾನಿಮಠ ನಗೆ ಬೀರಲಿದ್ದಾರೆ ಎನ್ನುವ ಮಾತುಗಳು ಕಾಂಗ್ರೆಸ್‌ ಪಾಳಯದಲ್ಲಿ ಜೋರಾಗಿ ಕೇಳಿಬರುತ್ತಿವೆ.

ಮತ್ತೊಂದೆಡೆ ಹಾಲಿ ಶಾಸಕ ಬಸವರಾಜ ದಡೇಸೂಗೂರು ಮತ್ತು ಮಾಜಿ ಸಚಿವ ಶಿವರಾಜ ತಂಗಡಗಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ ಎನ್ನುವಂತೆ ಭಾಸವಾಗುತ್ತಿದೆ. ಬಿಜೆಪಿ ಟಿಕೆಟ್‌ ಘೋಷಣೆ ಬಳಿಕ ಕ್ಷೇತ್ರದ ರಾಜಕೀಯ ಲೆಕ್ಕಾಚಾರದ ಅಂತಿಮ ಸತ್ಯ ಏನೆಂದು ತಿಳಿಯಲಿದೆ.

ಇನ್ನು ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಎಎಪಿ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿವೆ. ಜೆಡಿಎಸ್‌ನ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಕ್ಷೇತ್ರಕ್ಕೆ ಅಶೋಕ ಉಮಲೂಟಿ ಹೆಸರನ್ನು ಘೋಷಿಸಲಾಗಿದೆ. ಆದರೂ ಪಕ್ಷಕ್ಕೆ ನಿರೀಕ್ಷಿತ ಜನಬೆಂಬಲ ಮಾತ್ರ ಸಿಗಂದತಾಗಿದೆ.

1978ರಲ್ಲಿ ಕ್ಷೇತ್ರ ಪುನರ್‌ ವಿಂಗಡನೆಯಲ್ಲಿ ಕನಕಗಿರಿ ಕ್ಷೇತ್ರ ಉದಯವಾಯಿತು. 2008ರಲ್ಲಿ ಕ್ಷೇತ್ರ ಜಿಲ್ಲೆಯ ಏಕೈಕ ಎಸ್‌ಸಿ ಮೀಸಲು ಹೊಂದಿದೆ. 1978ರಿಂದ ಈವರೆಗೂ ಕ್ಷೇತ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿದ ಸ್ಥಳೀಯರೆಂದರೆ ಮಾಜಿ ಸಚಿವ ನಾಗಪ್ಪ ಸಾಲೋಣಿ ಒಬ್ಬರೇ ಆಗಿದ್ದಾರೆ. ಉಳಿದವರು ಕ್ಷೇತ್ರಕ್ಕೆ ವಲಸಿಗರೇ ಆಗಿದ್ದಾರೆ. ಕ್ಷೇತ್ರದಲ್ಲಿ ಇದುವರೆಗೂ ಅತಿ ಹೆಚ್ಚು ಬಾರಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಇನ್ನುಳಿದಂತೆ ಒಂದು ಬಾರಿ ಜೆಡಿಎಸ್‌, ಎರಡು ಬಾರಿ ಬಿಜೆಪಿ ವಿಜಯಪಾತಕೆ ಹಾರಿದೆ.

ಕ್ಷೇತ್ರದಲ್ಲಿ ಕಳೆದ ಬಾರಿಯೂ ಬಿಜೆಪಿ ಗೆಲುವು ಸಾಧಿಸಿದ್ದು, ಈ ಬಾರಿಯೂ ಕೂಡ ಕಾಂಗ್ರೆಸ್‌ ಪಕ್ಷವನ್ನು ಮಣಿಸಲಿದೆಯಾ ಅನ್ನುವುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+