Get Updates
Get notified of breaking news, exclusive insights, and must-see stories!

Kapu Elections: ಕಾಪುವಿನಲ್ಲಿ ಕಾಂಗ್ರೆಸ್‌ ತಲೆನೋವಾದ ಎಸ್‌ಡಿಪಿಐ, ಯಾರತ್ತ ಮತದಾರರ ಒಲವು?

ಉಡುಪಿ, ಮಾರ್ಚ್ 24: ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆಯೇ ಉಡುಪಿ ಜಿಲ್ಲೆಯಲ್ಲಿ ಚುನಾವಣೆಯ ಕಾವು ರಂಗುಪಡೆದಿದೆ. ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಅತೀ ಹೆಚ್ಚು ಚರ್ಚೆಗೆ ಹಾಗೂ ಕುತೂಹಲಕ್ಕೆ ಸಾಕ್ಷಿಯಾಗಿರುವ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎರಡೂ ಪಕ್ಷಗಳಲ್ಲಿ ಅಭ್ಯರ್ಥಿ ಅಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು ಚುನಾವಣಾ ಕದನವನ್ನು ತೀವ್ರ ರೋಮಾಂಚನಗೊಳಿಸಿದೆ.

ಜಾತಿ ಆಧಾರವಾಗಿ ಕಾಪು ವಿಧಾನಸಭಾ ಕ್ಷೇತ್ರ ದ ಜನಸಂಖ್ಯೆಯನ್ನು ಗಮನಿಸಿದರೆ, ಬಿಲ್ಲವರು, ಮೊಗವೀರರು, ಬಂಟರು, ಮುಸ್ಲಿಮರು, ಕ್ರಿಶ್ಚಿಯನ್‌, ಎಸ್‌ಸಿ, ಎಸ್‌ಟಿ ಸಮುದಾಯದವರು ಹೆಚ್ಚು-ಕಡಿಮೆ ಎಲ್ಲರೂ ಸಮಾನ ಸಂಖ್ಯೆಯಲ್ಲಿದ್ದಾರೆ. ಹಾಗಾಗಿ ಎಲ್ಲಾ ಜಾತಿಯ ಪ್ರಮುಖರು ಕಾಪು ಕ್ಷೇತ್ರದ ಟಿಕೆಟ್‌ಗಾಗಿ ಈಗಾಗಲೇ ಹರಸಾಹಸವನ್ನು ಆರಂಭಿಸಿದ್ದಾರೆ.

kaapu constituency map

ಕಾಪು ವಿಧಾಸಭಾಕ್ಷೇತ್ರದ ಪ್ರಸ್ತುತ ಶಾಸಕರು ಲಾಲಾಜಿ ಮೆಂಡನ್. ಕಳೆದ ಮೂರು ಅವಧಿಗಳಲ್ಲಿ ಕಾಪು ಕ್ಷೇತ್ರದ ಶಾಸಕರಾಗಿ ಹೊರಹೊಮ್ಮಿರುವ ಲಾಲಾಜಿ ಮೆಂಡನ್ ಈ ಬಾರಿಯೂ ಬಿಜೆಪಿ ಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ ಸೌಮ್ಯ ಸ್ವಭಾವದ ಲಾಲಾಜಿ ಮೆಂಡನ್ ವಿರುದ್ಧ ಬಿಜೆಪಿಯಲ್ಲೇ ಕಾರ್ಯಕರ್ತರ ಅಸಮಾಧಾನ ಇರುವುದರಿಂದ ಬೇರೆ ನಾಯಕರು ಈ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದಾರೆ.

ಹಾಲಿ ಶಾಸಕ ಲಾಲಾಜಿ ಆರ್.ಮೆಂಡನ್ 2004, 2008 ಹಾಗೂ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾದ ಲಾಲಾಜಿ ಮೆಂಡನ್ ಅಭಿವೃದ್ಧಿಯ ವೇಗದಲ್ಲಿ ಹಿಂದೆ ಉಳಿದಿದ್ದು ಶಾಸಕ ಬದಲಾವಣೆಗೆ ಬಿಜೆಪಿ ಕಾರ್ಯಕರ್ತರೇ ರಾಜ್ಯ ಪ್ರಮುಖರನ್ನು ಒತ್ತಾಯಿಸಿದ್ದಾರೆ.

lalagi

ಈ ಹಿನ್ನಲೆಯಲ್ಲಿ ಕಾಪು ಕ್ಷೇತ್ರದಿಂದ ಹಿಂದುತ್ವದ ಪ್ರತಿಪಾದಕ ಯಶ್ ಪಾಲ್ ಸುವರ್ಣ ಕೂಡಾ ಕಾರ್ಯಕರ್ತರ ವಲಯದಲ್ಲಿ ಟಿಕೆಟ್ ಪಡೆಯುವ ಅರ್ಹ ನಾಯಕ ಅನ್ನಿಸಿಕೊಂಡಿದ್ದಾರೆ. ಸದ್ಯ ದಕ್ಷಿಣ ಕನ್ನಡ ಹಾಗೂ ಉಡುಪಿ ಮೀನುಗಾರಿಕಾ ಫೆಡರೇಷನ್ ಅಧ್ಯಕ್ಷ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಆಗಿರುವ ಯಶ್ ಪಾಲ್ ಸಹಕಾರ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸಿದ್ದಾರೆ.

ಇದರ ಜೊತೆಗೆ ಬಂಟ ಸಮುದಾಯದ ನಾಯಕ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕೂಡಾ ಟಿಕೆಟ್ ನಿರೀಕ್ಷೆಯಲ್ಲಿದ್ದಾರೆ. 2018ರಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗುರ್ಮೆ ಸುರೇಶ್‌ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿತ್ತು. ಈ ಬಾರಿ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಗುರ್ಮೆ ಸುರೇಶ್ ಶೆಟ್ಟಿಯವರಿದ್ದಾರೆ.

ಇನ್ನು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್,ಯುವ ನಾಯಕ ಪೆರ್ಣಂಕಿಲ ಶ್ರೀಶ ನಾಯಕ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ನಯನಾ ಗಣೇಶ್, ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಆಪ್ತರಾಗಿರುವ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ವೀಣಾ ಶೆಟ್ಟಿ ಕೂಡಾ ಕಾಪು ಕ್ಷೇತ್ರದ ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

vinay kumar

ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಈ ಬಾರಿ ಬದಲಾವಣೆ ಆಗಲಿದೆ ಎಂಬ ಮುನ್ಸೂಚನೆ ದೊರೆತ ಹಿನ್ನಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗಿದೆ. ಆದರೆ ಕಾಂಗ್ರೆಸ್ ಮಾತ್ರ ತನ್ನ ಅನುಭವಿ ನಾಯಕರನ್ನು ಚುನಾವಣಾ ಕಣಕ್ಕಿಳಿಸುವ ತಂತ್ರಗಾರಿಕೆಯನ್ನು ಮಾಡಿದೆ.

ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಪುತ್ತೂರಿನಲ್ಲಿ 1985 ಹಾಗೂ 1989ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು. ಬಳಿಕ 2013ರಲ್ಲಿ ಕಾಪು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು, ಕೆಲಕಾಲ ಸಚಿವರಾಗಿದ್ದರು. 2018ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಹೀಗಾಗಿ ಈ ಬಾರಿಯೂ ಸೊರಕೆ ಅವರಿಗೆ ಕಾಪು ಕ್ಷೇತ್ರ ದ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ತಂತ್ರಗಾರಿಕೆಯನ್ನು ಮಾಡಿದೆ. ಬಿಲ್ಲವ ಮುಖಂಡರಾದ ರಾಜಶೇಖರ ಕೋಟ್ಯಾನ್ ಅವರ ಹೆಸರೂ ಕಾಂಗ್ರೆಸ್ ತೆಗೆದುಕೊಂಡಿದ್ದು,ಅಂತಿಮ ಹಂತದಲ್ಲಿ ಕಾದುನೋಡುವ ತಂತ್ರವಾಗಿ ಕಾಂಗ್ರೆಸ್ ಸದ್ಯ ಮಾಡಿದೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಎಸ್‍ಡಿಪಿಐ ಕೂಡಾ ಬೇರೂರಿದೆ. ಕಾಪು ಪುರಸಭೆಯಲ್ಲಿ ಮೂವರು ಸದಸ್ಯರು, ಪಡುಬಿದ್ರಿ ಗ್ರಾಮ ಪಂಚಾಯಿತಿಯಲ್ಲಿ ಇಬ್ಬರು, ಬೆಳಪು ಪಂಚಾಯಿತಿಯಲ್ಲಿ ಇಬ್ಬರು, ಉಚ್ಚಿಲದಲ್ಲಿ ನಾಲ್ವರು ಎಸ್‌ಡಿಪಿಐ ಬೆಂಬಲಿತರು ಆಯ್ಕೆಯಾಗಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತಗಳಿಗೆಯ ಪ್ರಮಾಣ ಜಾಸ್ತಿ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಡುಕ ಹುಟ್ಟಿಸಲು ಎಸ್‌ಡಿಪಿಐ ತಂತ್ರಗಾರಿಕೆ ಮಾಡಿದೆ.

ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸಾಧಕ ಅಂಶಗಳನ್ನು ಗಮನಿಸಿದರೆ, ಇಡೀ ಕರಾವಳಿ ಯಲ್ಲಿ ಇರುವಂತೆ ಕಾಪು ಕ್ಷೇತ್ರದಲ್ಲೂ ಮೋದಿ ಅಲೆಯಿದೆ. ಮೋದಿ ಭಾಷಣ ಮತದಾರರನ್ನು ಸೆಳೆಯುವ ಮಾಂತ್ರಿಕ ಶಕ್ತಿ ಹೊಂದಿದ್ದೂ,ಈ ಬಾರಿಯೂ ಮೋದಿ ಅಲೆಯೇ ವರದಾನ ಆಗುವ ವಿಶ್ವಾಸ ಬಿಜೆಪಿಗಿದೆ. ಇನ್ನೊಂದೆಡೆ ಯಾವುದೇ ಭ್ರಷ್ಟಚಾರ, ಸೃಜನಪಕ್ಷಪಾತದ ಆರೋಪ ಇಲ್ಲದ ಅನುಭವಿ ಹಾಲಿ ಶಾಸಕ ಲಾಲಾಜಿ ಮೆಂಡನ್ ಪ್ರಭಾವ ವೂ ಪಕ್ಷಕ್ಕೆ ನೆರವಾಗುವ ವಿಶ್ವಾಸ ಬಿಜೆಪಿಗೆ ಇದೆ.

ಇನ್ನು ಕಾಪು ಪುರಸಭೆಗೆ ಎಸ್‌ಡಿಪಿಐ ಪಕ್ಷದ ಮೂರು ಸೀಟ್ ಅಧಿಕಾರದಲ್ಲಿದ್ದು, ಕಾಂಗ್ರೆಸ್‌ನ ಸಾಂಪ್ರದಾಯಿಕ ಮುಸ್ಲಿಂ ಮತಗಳನ್ನು ಎಸ್‌ಡಿಪಿಐ ಸೆಳೆದರೆ ಸಹಾಯವಾಗುವ ವಿಶ್ವಾಸ ಬಿಜೆಪಿಗಿದೆ. ಇದರ ಜೊತೆಗೆ ಹಿಜಾಬ್ ವಿವಾದದಿಂದ ಸಂಘಟಿತರಾಗಿರುವ ಹಿಂದೂ ಕಾರ್ಯಕರ್ತರು ಬಿಜೆಪಿಗೆ ಭರ್ಜರಿ ಪ್ರಚಾರವನ್ನು ನೀಡಿ ಹಿಂದುತ್ವದ ಅಲೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಬಿಜೆಪಿಗಿದೆ.

ಬಿಜೆಪಿಯ ಸಾಧಕಗಳಷ್ಟೇ ಭಾಧಕ ಅಂಶಗಳು ಕ್ಷೇತ್ರದಲ್ಲಿದೆ. ಇದೇ ವಿಚಾರ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣ ಎಂದು ಹೇಳಲಾಗುತ್ತಿದೆ .ಮೂರು ಬಾರಿ ಶಾಸಕರಾಗಿ ಆಯ್ಕೆಯಾದರೂ ಯಾವುದೇ ಉತ್ತಮ ಯೋಜನೆಯನ್ನು ತಂದಿಲ್ಲ ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ವಿಫಲವಾಗಿರುವ ಬಗ್ಗೆ ದೂರುಗಳಿವೆ. ಬಡವರಿಗೆ ರೇಷನ್ ಕಾರ್ಡ್ ವಿತರಣೆ ಬಾಕಿಯಿದ್ದು, ಆಡಳಿತ ದುರಾವಸ್ಥೆ ಎಂದು ಕಾರ್ಯಕರ್ತರೇ ಅಸಮಾಧಾನ ಹೊರಹಾಕಿದ್ದಾರೆ. ಬೆಟ್ಟದಷ್ಟಿರುವ ಸ್ಥಳೀಯ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಗದಿರುವುದು, ಕೊಟ್ಟ ಭರವಸೆ ಎಲ್ಲವೂ ಬಾಕಿಯಿರುವ ಬಿಜೆಪಿಯ ಬಾಧಕ ಅಂಶಗಳಾಗಿವೆ.

2018 ಕಾಪು ವಿಧಾನಸಭಾ ಚುನಾವಣಾ ಫಲಿತಾಂಶ

ಇನ್ನು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,84,088 ಮತದಾರರಿದ್ದು, 88,114 ಪುರುಷ ಮತಗಳಿದ್ದು, 95,968 ಮಹಿಳೆಯರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.

2018 ಚುನಾವಣೆಯಲ್ಲಿ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಲಾಲಾಜಿ ಮಂಡನ್ ಕಣಕ್ಕಳಿದಿದ್ದು, 75,893 ಮತಗಳನ್ನು ಪಡೆದಿದ್ದರು. ವಿನಯ್ ಕುಮಾರ್ ಸೊರಕೆ 63,976 ಮತಗಳನ್ನು ಪಡೆದು 11,917 ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಲಾಲಾಜಿ ಮಂಡನ್ (ಬಿಜೆಪಿ) 75,893 ವಿನಯ್ ಕುಮಾರ್ ಸೊರಕೆ( ಕಾಂಗ್ರೆಸ್ ) 63,976
2013 ವಿನಯ್ ಕುಮಾರ್ ಸೊರಕೆ( ಕಾಂಗ್ರೆಸ್ ) 52,782 ಲಾಲಾಜಿ ಆರ್ ಮೆಂಡನ್ (ಬಿಜೆಪಿ ) 50,927
2008 ಲಾಲಾಜಿ ಆರ್ ಮೆಂಡನ್ (ಬಿಜೆಪಿ) 45,961 ವಸಂತ ವಿ ಸಾಲಿಯಾನ್ 44,994
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+